ರಾಜಸ್ಥಾನ ರಾಜ್ಯಸಭೆ ಚುನಾವಣೆ: ಬಿಜೆಪಿ ಶಾಸಕರು ರೆಸಾರ್ಟಿಗೆ ಶಿಫ್ಟ್ !
ಜೈಪುರ, ಜೂನ್ 16: ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಲು ಜೂನ್ 19ರಂದು ಚುನಾವಣೆ ನಡೆಸಲಾಗುತ್ತಿದೆ. ಗುಜರಾತ್ ಬಳಿಕ ರಾಜಸ್ಥಾನದಲ್ಲೂ ರೆಸಾರ್ಟ್ ರಾಜಕೀಯ ಆಟ ಆರಂಭಗೊಂಡಿದೆ. ಶಾಸಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತೊಡಗಿವೆ.
Recommended Video
ರಾಜಸ್ಥಾನದ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ಶಾಸಕರನ್ನು ರೆಸಾರ್ಟಿಗೆ ಕಳಿಸಿದೆ. ಈಗ ಬಿಜೆಪಿ ಕೂಡಾ ತನ್ನ ಶಾಸಕರನ್ನು ಮತ್ತೊಂದು ರೆಸಾರ್ಟ್ ನಲ್ಲಿರಿಸಿದೆ.
ಮೊದಲ ಬಾರಿಗೆ ಶಾಸಕರಾಗಿರುವವರಿಗೆ ತರಬೇತಿ ಮತ್ತು ಶಾಸಕಾಂಗ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಉದ್ದೇಶಗಳಿಗಾಗಿ ನಮ್ಮ ಶಾಸಕರನ್ನು ಎರಡು ದಿನದ ಮಟ್ಟಿಗೆ ರೆಸಾರ್ಟ್ ಗೆ ಕಳುಹಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಪ್ರತಿಕ್ರಿಯಿಸಿದ್ದಾರೆ.

ರಾಜಸ್ಥಾನದಲ್ಲಿ 200 ಶಾಸಕರಲ್ಲಿ ಸುಮಾರು 190ಕ್ಕೂ ಹೆಚ್ಚು ಶಾಸಕರು ರೆಸಾರ್ಟ್ ಗಳಲ್ಲಿದ್ದಾರೆ. ಬಿಜೆಪಿಯ 72 ಶಾಸಕರ ಪೈಕಿ 60 ಮಂದಿ ಶಾಸಕರು ಟೊಂಕ್ ರಸ್ತೆಯ ಸೀತಾಪುರ್ ಹೋಟೆಲ್ ನಲ್ಲಿದ್ದಾರೆ. ರಾಷ್ಟ್ರೀಯ ಲೋಕ್ ತಾಂತ್ರಿಕ್ ಪಾರ್ಟಿ ಶಾಸಕರು ಕೂಡಾ ಬಿಜೆಪಿ ಬೆಂಬಲಕ್ಕಿದ್ದಾರೆ. ಕಾಂಗ್ರೆಸ್ ಪಕ್ಷದ 100ಕ್ಕೂ ಅಧಿಕ ಶಾಸಕರು ದೆಹಲಿ ಹೆದ್ದಾರಿಯ ರೆಸಾರ್ಟಿನಲ್ಲಿದ್ದಾರೆ.
ರಾಜಸ್ಥಾನದಿಂದ ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಸಿ ವೇಣುಗೋಪಾಲ್ ಹಾಗೂ ನೀರಜ್ ಡಾಂಗಿ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ರಾಜೇಂದ್ರ ಗೆಹ್ಲೋಟ್, ಓಂಕಾರ್ ಸಿಂಗ್ ಲಖಾವತ್ ಕಣದಲ್ಲಿದ್ದಾರೆ. 200 ಸ್ಥಾನದಲ್ಲಿ 107 ಸ್ಥಾನ ಹೊಂದಿರುವ ಕಾಂಗ್ರೆಸ್ಸಿಗೆ ಪಕ್ಷೇತರ ಅಭ್ಯರ್ಥಿಗಳು, ರಾಷ್ಟ್ರೀಯ ಲೋಕದಳ, ಸಿಪಿಐ (ಎಂ), ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ದ ಬೆಂಬಲ ಸಿಗುವ ನಿರೀಕ್ಷೆಯಿದೆ.












Click it and Unblock the Notifications