ನರೇಂದ್ರ ಮೋದಿ ಮೇಲೆ ರಾಹುಲ್ ಗಾಂಧಿ ಮತ್ತೆ 'ಸರ್ಜಿಕಲ್ ಸ್ಟ್ರೈಕ್'
ಉದಯಪುರ, ಡಿಸೆಂಬರ್ 01 : ನಾಲ್ಕು ವರ್ಷಗಳ ಹಿಂದೆ ನವೆಂಬರ್ ನಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ನರೇಂದ್ರ ಮೋದಿ ಅವರು ತಮ್ಮ ಸ್ವಂತ ರಾಜಕೀಯ ಆಸ್ತಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ನಡೆದದ್ದು ಹೇಗೆ? 10 ಬೆಳವಣಿಗೆಗಳು
ವಿಧಾನಸಭೆ ಚುನಾವಣೆ ಸಿದ್ಧತೆಯಲ್ಲಿ ನಿರತರಾಗಿರುವ ರಾಜಸ್ಥಾನದ ಉದಯಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ಸ್ಥಳೀಯ ಆಡಳಿತದ ವೈಫಲ್ಯದ ಬಗ್ಗೆ ಮಾತನಾಡುವುದು ಬಿಟ್ಟು ನರೇಂದ್ರ ಮೋದಿಯವರನ್ನು ಟೀಕಿಸುವುದರಲ್ಲೇ ಹೆಚ್ಚಿನ ಸಮಯ ಕಳೆದರು.
ಮೋದಿಗೆ ಹಿಂದುತ್ವದ ಮೂಲಭೂತ ತತ್ವವೇ ಗೊತ್ತಿಲ್ಲ ಎಂದ ರಾಹುಲ್ ಗಾಂಧಿ
ಯುಪಿಎ ಆಡಳಿತವಿದ್ದಾಗ ಬ್ಯಾಂಕುಗಳಿಂದ ವಸೂಲಾಗದ ಸಾಲದ ಹೊರೆ 2 ಲಕ್ಷ ಕೋಟಿಯಷ್ಟಿದ್ದರೆ, ಎನ್ಡಿಎ ಆಡಳಿತದಲ್ಲಿ ಅದು 12 ಲಕ್ಷ ಕೋಟಿಯಷ್ಟಾಗಿದೆ. ಅಲ್ಲದೆ, ಮೋದಿ ಸರಕಾರ 15ರಿಂದ 20 ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಇಡೀ ಬ್ಯಾಂಕ್ ವ್ಯವಸ್ಥೆಯೇ ಈ ಉದ್ಯಮಿಗಳಿಗಾಗಿ ಅನ್ನುವಂತಾಗಿದೆ ಎಂದು ಟೀಕಾಪ್ರಹಾರ ಮಾಡಿದರು.
2016ರ ಸೆಪ್ಟೆಂಬರ್ 29ರಂದು ಸರ್ಜಿಕಲ್ ಸ್ಟ್ರೈಕ್ ಆದಂತೆ ಡಾ. ಮನಮೋಹನ ಸಿಂಗ್ ಅವರು ಆಡಳಿತದ ಅವಧಿಯಲ್ಲಿಯೂ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್ ಆಗಿದೆ. ಇದು ನಿಮಗೆ ಗೊತ್ತೆ? ಆದರೆ, ನರೇಂದ್ರ ಮೋದಿಯವರು ಸರ್ಜಿಕಲ್ ಸ್ಟ್ರೈಕನ್ನು ತಮ್ಮ ಸ್ವಂತ ರಾಜಕೀಯ ಆಸ್ತಿ ಎಂಬಂತೆ ಬಳಸಿಕೊಂಡರು. ಆಗ ಉತ್ತರ ಪ್ರದೇಶದಲ್ಲಿ ಚುನಾವಣೆ ಇದ್ದಿದ್ದರಿಂದ ಬಹಿರಂಗವಾಗಿ ಘೋಷಿಸಿದರು ಎಂದು ರಾಹುಲ್ ವ್ಯಂಗ್ಯವಾಗಿ ನುಡಿದರು.
ರಾಜಸ್ಥಾನ : ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ v/s ಬಿಜೆಪಿ ಸಮರ
ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯ ಬಗ್ಗೆ ಜನಸಾಮಾನ್ಯರಿಗೆ ಈಗಲೂ ಗೊಂದಲಗಳಿವೆ. ಅದು ದೊಡ್ಡ ಹಗರಣ, ದೊಡ್ಡ ಕಂಪನಿಗಳಿಗೆ ದ್ವಾರ ತೆರೆದಂತಾಯಿತು. ಅವೆರಡೂ ದೇಶದ ಆರ್ಥಿಕತೆಯನ್ನು ಸರ್ವನಾಶ ಮಾಡಿದ್ದು ಮಾತ್ರವಲ್ಲ, ಬಡವರ ಬೆನ್ನುಮೂಳೆ ಮುರಿದವು. ಸಾಲದೆಂಬಂತೆ, ಮೋದಿ ಸರಕಾರ ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿಯೂ ವಿಫಲವಾಯಿತು ಎಂದು ರಾಹುಲ್ ಗಾಂಧಿ ತಮ್ಮ ಆಕ್ರೋಶ ಹೊರಹಾಕಿದರು.
ಮೋದಿ ಅಲೆ ರಾಜಸ್ಥಾನದಲ್ಲಿ ಬಿಜೆಪಿಯನ್ನು ಗೆಲ್ಲಿಸಲಿದೆಯೇ?
ಭಾರತದಲ್ಲಿ ಆಯುಷ್ಮಾನ್ ಭಾರತದಂತಹ ವಿಮೆ ಯೋಜನೆಯನ್ನು ಆರಂಭಿಸಲಾಗಿದ್ದರೂ ಜನರಿಗೆ ಒಳ್ಳೆಯ ಆಸ್ಪತ್ರೆಗಳಿಲ್ಲ. ಸಾರ್ವಜನಿಕ ಆರೋಗ್ಯ ಮತ್ತು ಶೈಕ್ಷಣಿಕ ವಲಯದಲ್ಲಿ ಹಣ ಹೂಡಿಕೆ ಮಾಡದೆ ದೇಶವನ್ನು ನಡೆಸಲು ಹೇಗೆ ಸಾಧ್ಯ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಕೇಂದ್ರದಲ್ಲಿ ಸರಿಯಾದ ಸರಕಾರವಿದ್ದರೆ ಮುಂದಿನ ಹದಿನೈದಿಪ್ಪತ್ತು ವರ್ಷಗಳಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ. ಅದು ಸಾಧ್ಯವಾಗಬೇಕಾದರೆ ನೈಪುಣ್ಯ ಇರುವವರಿಗೆ ಸರಿಯಾದ ಅವಕಾಶ ಸಿಗಬೇಕು. ಚೀನಾ ನಮ್ಮಿಂದ ಸಾಕಷ್ಟು ಮುಂದಿದ್ದರೂ ನಾವಿನ್ನೂ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿಲ್ಲ ಎಂದು ವಿಶ್ಲೇಷಣೆ ಮಾಡಿದರು.