ಸೋನಿಯಾ ಗಾಂಧಿ ಮುಂದೆ ಮಂಡಿಯೂರಿದರೇ ಸಚಿನ್ ಪೈಲಟ್: ಅಸಲಿಯತ್ತೇನು?
ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರವನ್ನು ತಂದೊಡ್ಡಿದ್ದ ರಾಜಸ್ಥಾನದ ರಾಜಕೀಯ ಬೆಳವಣಿಗೆ ಒಂದು ಹಂತಕ್ಕೆ ಸರಿದಾರಿಗೆ ಬರುತ್ತಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪಕ್ಷದೊಳಗೆ ನಡೆದ ಭಿನ್ನಮತೀಯ ವಿದ್ಯಮಾನ ಬಿಜೆಪಿಗೆ ಸುಖಾಸುಮ್ಮನೆ ಆಹಾರವಾಗಿತ್ತು.
ಎಸಿಸಿಸಿ ಅಧ್ಯಕ್ಷ ಹುದ್ದೆಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಣಕ್ಕಿಳಿಯಲಿದ್ದಾರೆ ಎನ್ನುವ ವಿಚಾರ ಬಹುತೇಕ ಅಂತಿಮವಾಗಿತ್ತು. ಆದರೆ, ಗೆಹ್ಲೋಟ್ ಸಿಎಂ ಹುದ್ದೆ ಬಿಟ್ಟು ಕೊಡಲು ಸಿದ್ದವಿರಲಿಲ್ಲ. ಆದರೆ, ಉದಯಪುರದಲ್ಲಿ ನಡೆದ ಚಿಂತನ ಶಿಬಿರದಲ್ಲಿ ಒಬ್ಬರಿಗೆ ಒಂದೇ ಹುದ್ದೆಗೆ ರಾಹುಲ್ ಗಾಂಧಿ ಅಂಟಿಕೊಂಡಿದ್ದರು.
ರಾಜಸ್ಥಾನದ ಬಿಕ್ಕಟ್ಟಿನ ಬೆನ್ನಲ್ಲೇ ಗೆಲುವಿನ ಮಂತ್ರ ಜಪಿಸಿದ ಸಚಿನ್ ಪೈಲಟ್!
ಮುಖ್ಯಮಂತ್ರಿ ಹುದ್ದೆ ಗೆಹ್ಲೋಟ್ ಬಿಟ್ಟು ಕೊಡಬೇಕಾಗಿ ಬರಬಹುದು ಎನ್ನುವುದನ್ನು ಅರಿತ ಅವರ ಬೆಂಬಲಿಗರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದರು. ಗೆಹ್ಲೋಟ್ ಪ್ರತಿಸ್ಪರ್ಧಿ ಸಚಿನ್ ಪೈಲಟ್ ನಮ್ಮ ಆಯ್ಕೆಯಲ್ಲ ಎನ್ನುವುದು ಅವರ ನಿಲುವಾಗಿತ್ತು.
ರಾಜಸ್ಥಾನದ ವಿರೋಧ ಪಕ್ಷವಾಗಿರುವ ಬಿಜೆಪಿ ಕಾಂಗ್ರೆಸ್ಸಿನ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಲಬಹುದು ಎಂದು ವಿಶ್ಲೇಷಿಸಲಾಗಿತ್ತು. ಅದಕ್ಕೆ ದಾಳವಾಗಿ ಬಿಜೆಪಿ ಹೈಕಮಾಂಡ್ ಸಚಿನ್ ಪೈಲಟ್ ಅವರನ್ನು ಬಳಸಿಕೊಳ್ಳಬಹುದು ಎಂದೂ ವ್ಯಾಖ್ಯಾನಿಸಲಾಗಿತ್ತು. ಆದರೆ, ನಡೆದದ್ದು ಬೇರೆ..
ರಾಜಸ್ಥಾನದಲ್ಲಿ ಗೆಹ್ಲೋಟ್ ಮತ್ತು ಪೈಲಟ್ ಬಣ
ರಾಜಸ್ಥಾನದಲ್ಲಿ ಗೆಹ್ಲೋಟ್ ಮತ್ತು ಪೈಲಟ್ ಬಣವಿರುವುದು ಅಧಿಕಾರಕ್ಕೆ ಬಂದಾಗಿನಿಂದ ಗೊತ್ತಿರುವ ವಿಚಾರ. ಈ ಹಿಂದೆಯೂ ಇಬ್ಬರ ನಡುವೆ ಸಿಎಂ ಹುದ್ದೆಯ ಪಾಲಿಟಿಕ್ಸ್ ತಾರಕಕ್ಕೇರಿತ್ತು. ಆಗ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಸರಿದಾರಿಗೆ ತಂದಿದ್ದರು. ಆಗ, ಕೂಡಾ ಸಚಿನ್ ಪೈಲಟ್ ಇನ್ನೇನು ಕೆಲವೇ ದಿನಗಳಲ್ಲಿ ಬಿಜೆಪಿಗೆ ಹಾರಲಿದ್ದಾರೆ ಎಂದು ಸುದ್ದಿಯಾಗಿತ್ತು. ವಾರದ ಹಿಂದಿನ ವಿದ್ಯಮಾನದ ವೇಳೆಯೂ ಮತ್ತದೇ ಸುದ್ದಿಯಾಗಿತ್ತು. ಆದರೆ, ಸಚಿನ್ ಪೈಲಟ್ ಅವರನ್ನು ಸೇರಿಸಿಕೊಳ್ಳಲು ಬಿಜೆಪಿ ಅಷ್ಟೇನೂ ಉತ್ಸುಕವಾಗಿಲ್ಲ ಎಂದು ಹೇಳಲಾಗುತ್ತಿದೆ.
ಬಿಜೆಪಿ ತಮ್ಮ ಕಾರ್ಯತಂತ್ರವನ್ನು ರೂಪಿಸುತ್ತಿತ್ತು
ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ರಾಜೀನಾಮೆ ನೀಡುವುದಾಗಿ ತೊಂಬತ್ತು ಶಾಸಕರು ಬೆದರಿಕೆ ಹಾಕಿರುವುದು ಸಚಿನ್ ಪೈಲಟ್ ಹಿನ್ನಡೆಗೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾಗೆ ಇದ್ದ ಜನ/ಶಾಸಕರ ಬೆಂಬಲ ಪೈಲಟಿಗೆ ಇಲ್ಲದೇ ಇರುವುದೇ ಬಿಜೆಪಿಯ ನಿರಾಸಕ್ತಿಗೆ ಕಾರಣವೆಂದು ವಿವರಿಸಲಾಗುತ್ತಿದೆ. ವಾರದ ಹಿಂದಿನ ಭಿನ್ನಮತೀಯ ಬೆಳವಣಿಗೆಯಲ್ಲಿ ಕನಿಷ್ಟ ಅರ್ಧಕರ್ಧ ಕಾಂಗ್ರೆಸ್ ಶಾಸಕರ ಬೆಂಬಲವೇನಾದರೂ ಪೈಲಟಿಗೆ ಇದ್ದಿದ್ದೇ ಆದಲ್ಲಿ ಬಿಜೆಪಿ ತಮ್ಮ ಕಾರ್ಯತಂತ್ರವನ್ನು ರೂಪಿಸುತ್ತಿತ್ತು ಎಂದು ವಾಖ್ಯಾನಿಸಲಾಗುತ್ತಿದೆ.
ಹೈಕಮಾಂಡ್ ಅವರನ್ನು ಭೇಟಿಯಾಗಿ ಗೆಲುವಿನ ಮಂತ್ರ
ಎರಡು ವರ್ಷಗಳ ಹಿಂದೆ ಬಣ ರಾಜಕೀಯದಿಂದ ಗೆಹ್ಲೋಟ್ ಸರಕಾರ ಪತನದ ಅಂಚಿಗೆ ಬಂದಿತ್ತು. ಆಗ, ಪಕ್ಷವನ್ನು ಉಳಿಸಿದ ಶಾಸಕರಲ್ಲೊಬ್ಬರೇ ಗೆಹ್ಲೋಟ್ ಉತ್ತರಾಧಿಕಾರಿಯಾಗ ಬೇಕೆಂದು ಕಾಂಗ್ರೆಸ್ಸಿನ ಬಹುತೇಕ ಶಾಸಕರು ಪಟ್ಟು ಹಿಡಿದಿದ್ದರಿಂದ ಸಚಿನ್ ಪೈಲಟ್ ಈಗ ಬೇರೆ ದಾರಿಯಿಲ್ಲದೇ ಹೈಕಮಾಂಡ್ ಅವರನ್ನು ಭೇಟಿಯಾಗಿ ಗೆಲುವಿನ ಮಂತ್ರ ಆಡಿ ಬಂದಿದ್ದಾರೆ.
ರಾಜಸ್ಥಾನದ ಕಾಂಗ್ರೆಸ್ ಸದ್ಯಕ್ಕೆ ಹಿತಕರ ಎನ್ನುವ ನಿರ್ಧಾರ
ಇನ್ನೊಂದು ಆಯಾಮದ ಪ್ರಕಾರ ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದೇ ಆದಲ್ಲಿ ಮೂವರು ಹಿರಿಯ ಮುಖಂಡರು (ಸತೀಶ್ ಪೂನಿಯಾ, ಗಜೇಂದ್ರ ಶಿಂಗ್ ಶೆಖಾವತ್, ವಸುಂಧರಾ ರಾಜೇ) ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿ, ಅಲ್ಲೂ ಬಯಸಿದ ಹುದ್ದೆ ಸಿಗದು, ಜೊತೆಗೆ, ಬಿಜೆಪಿ ಅಷ್ಟೇನೂ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ನಡೆಸದೇ ಇರುವುದರಿಂದ, ರಾಜಸ್ಥಾನದ ಕಾಂಗ್ರೆಸ್ಸೇ ಸದ್ಯಕ್ಕೆ ಹಿತಕರ ಎನ್ನುವ ನಿರ್ಧಾರಕ್ಕೆ ಸಚಿನ್ ಪೈಲಟ್ ಬಂದಿದ್ದಾರೆ ಎಂದು ರಾಜಕೀಯ ಪಂಡಿತರ ಅಂಬೋಣ.