ಎಲ್ಲಿಂದಲೋ ಬಂದವರು, ಎಲ್ಲೂ ಇಲ್ಲವಾದ ರೋಹಿಂಗ್ಯಾ ಮುಸ್ಲಿಮರ ಸುತ್ತಮುತ್ತ
ಸ್ವಂತದ್ದೂ ಅಂತ ಒಂದು ಮನೆಯಿಲ್ಲದಿದ್ದರೂ ಪರವಾಗಿಲ್ಲ, ಆದ್ರೆ ನಮ್ಮದು ಅಂತ ಹೇಳ್ಕೊಳ್ಳೋಕೆ ಒಂದು ದೇಶವಾದರೂ ಇರಬೇಕು! ಒಂದು ರಾಷ್ಟ್ರೀಯತೆ ಬೇಕು. ಸಂವಿಧಾನವೆಂಬ ಮಹಾಕಾನೂನಿನ ಅಡಿಯಲ್ಲಿ ನಮಗೊಂದಷ್ಟು ಕರ್ತವ್ಯಗಳು, ಹಕ್ಕುಗಳು ನಿಗದಿಯಾಗಬೇಕು, ಒಂದು ಪ್ರಜಾತಂತ್ರದ ನಾಗರಿಕರಾಗಿ ಮತಚಲಾಯಿಸಬೇಕು, ಒಂದು ಸಮಾಜದ ಭಾಗವಾಗಬೇಕು. ಆದರೆ ಇದ್ಯಾವುದೂ ಇಲ್ಲದ ವ್ಯಕ್ತಿ ಪ್ರಪಂಚದಲ್ಲಿ ಬದುಕುವುದು ಹೇಗೆ?
ಹೌದು, ಮಯನ್ಮಾರಿನ ರೋಹಿಂಗ್ಯಾ ಮುಸ್ಲಿಮರು ಇದ್ಯಾವುದೂ ಇಲ್ಲದೆ ಬದುಕುತ್ತಿದ್ದಾರೆ! ಈ ವಿಶಾಲ ಭೂಮಿಯಲ್ಲಿ 1.1 ಕೋಟಿ ರೋಹಿಂಗ್ಯಾ ಮುಸ್ಲಿಮರಿಗೆ ಅಂಗೈ ಅಗಲ ಜಾಗವೂ ಇಲ್ಲ! ಮಯನ್ಮಾರಿನ ರಖಿನೆ ಎಂಬ ರಾಜ್ಯದಲ್ಲಿ ವಾಸಿಸುವ ಇವರು ಮಯನ್ಮಾರಿಗೆ ಸೇರಿದವರಲ್ಲ ಎಂಬುದು ಮಯನ್ಮಾರ್ ಸರ್ಕಾರದ ಹಟ. 1948 ರಲ್ಲಿ ಬ್ರಿಟಿಶರಿಂದ ಸ್ವಾತಂತ್ರ್ಯ ಪಡೆದ ಮಯನ್ಮಾರ್ ನಿಟ್ಟುಸಿರು ಬಿಟ್ಟರೆ, ರೋಹಿಂಗ್ಯಾ ಮುಸ್ಲಿಮರ ಸಂಕಷ್ಟ ಮಾತ್ರ ಅಲ್ಲಿಂದಲೇ ಆರಂಭವಾಗಿತ್ತು!
ಇಲ್ಲಿನ ಸರ್ಕಾರ ರೋಹಿಂಗ್ಯಾ ಜನರನ್ನು ಅಸ್ಪೃಶ್ಯರಂತೆ ಕಾಣುತ್ತಿರುವುದರಿಂದ ಈ ರಾಜ್ಯ ಯಾವುದೇ ಅಭಿವೃದ್ಧಿಯನ್ನೂ ಕಾಣುತ್ತಿಲ್ಲ. ಈ ಜನರಿಗೆ ಪೌರತ್ವವೇ ಇಲ್ಲದಿರುವುದರಿಂದ ಇವರನ್ನು ಉದ್ಧಾರ ಮಾಡುವುದರಿಂದ ತನಗೇನೂ ರಾಜಕೀಯ ಲಾಭವಿಲ್ಲ ಎಂದು ಮಯನ್ಮಾರ್ ಸರ್ಕಾರ ಭಾವಿಸಿದಂತಿದೆ. ಈ ಎಲ್ಲವನ್ನೂ ಕಂಡೂ, ಮಯನ್ಮಾರ್ ನಾಯಕಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ ಮೌನವಾಗಿಯೇ ಕುಳಿತಿದ್ದಾರೆ!
ತುಂಡು ಜಾಗಕ್ಕಾಗಿ ಮಯನ್ಮಾರಿನ ನೆರೆಹೊರೆ ದೇಶಗಳೆದುರು ಕರುಣಾಜನಕವಾಗಿ ಬಂದು ನಿಂತ ರೋಹಿಂಗ್ಯಾ ಸಮುದಾಯದ ದೈನೇಸಿ ಸ್ಥಿತಿಯ ಕುರಿತ 10 ಪ್ರಮುಖ ಸಂಗತಿಗಳು ಇಲ್ಲಿವೆ.(ಚಿತ್ರಕೃಪೆ: ಪಿಟಿಐ)

ಯಾರು ಈ ರೋಹಿಂಗ್ಯಾ ಮುಸ್ಲಿಮರು?
ಮಯನ್ಮಾರಿನ ರಖಿನೆ ಎಂಬಲ್ಲಿ ಬದುಕುತ್ತಿರುವ ರೋಹಿಂಗ್ಯಾ ಎಂಬ ಭಾಷೆಯನ್ನು ಮಾತನಾಡುವ ಮುಸ್ಲಿಂ ಸಮುದಾಯದವರನ್ನು ರೋಹಿಂಗ್ಯಾ ಮುಸ್ಲಿಮರೆಂದೇ ಕರೆಯಲಾಗುತ್ತದೆ. ಏಷ್ಯಾದಾದ್ಯಂತ ಇವರ ಜನಸಂಖ್ಯೆ 1.1 ಕೋಟಿ ಅಷ್ಟೇ!

ಯಾಕೀ ತಾರತಮ್ಯ?
1948ರಲ್ಲಿ ಮಯನ್ಮಾರ್ ಸ್ವತಂತ್ರ್ಯವಾಗುತ್ತಿದ್ದಂತೆಯೇ ಮಯನ್ಮಾರಿನ ಪ್ರಜೆಗಳಿಗೆ ಪೌರತ್ವ ನೀಡಲು ಮುಂದಾದ ಸರ್ಕಾರ ರೋಹಿಂಗ್ಯಾ ಮುಸ್ಲಿಮರನ್ನು ಈ ಪಟ್ಟಿಯಿಂದ ಹೊರಗಿಟ್ಟಿತು. ಬಹುಸಂಖ್ಯಾತ ಬೌದ್ಧರು ರೋಹಿಂಗ್ಯಾ ಮುಸ್ಲಿಮರನ್ನು ತಮ್ಮವರೆಂದು ಒಪ್ಪಿಕೊಳ್ಳಲು ಎಂದಿಗೂ ಸಿದ್ಧರಾಗಲಿಲ್ಲ.

ಭಾರತದಿಂದ ವಲಸೆ ಹೋದವರೇ?
ರೋಹಿಂಗ್ಯಾ ಮಸ್ಲಿಮರು ಮಯನ್ಮಾರ್ ನವರೇ ಎಂದು ಹೇಳುವುದಕ್ಕೆ ಹಲವು ದಾಖಲೆಗಳಿದ್ದರೂ ಅದನ್ನು ಒಪ್ಪಿಕೊಳ್ಳದ ಮಯನ್ಮಾರ್, ಇವರು ಭಾರತ ಮತ್ತು ಬಾಂಗ್ಲಾದಿಂದ ವಲಸೆ ಬಂದ ಜನರು ಎಂದು ವಾದಮಾಡುತ್ತಿದೆ!

ಮರೀಚಿಕೆಯಾದ ಪೌರತ್ವದ ಕನಸು
ಮಯನ್ಮಾರ್ ನ ಪೌರತ್ವ ಪಡೆಯಬೇಕೆಂಬುದು ಇಲ್ಲಿನ ಪ್ರತಿಯೊಬ್ಬ ರೋಹಿಂಗ್ಯಾ ವ್ಯಕ್ತಿಯ ಕನಸು. ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳಲ್ಲಿ ಎರಡು ತಲೆಮಾರಿನಿಂದ ಮಯನ್ಮಾರ್ ನಲ್ಲಿ ವಾಸವಿರುವ ರೋಹಿಂಗ್ಯಾ ಮುಸ್ಲಿಮರಿಗೆ ಪೌರತ್ವ ನೀಡುವ ಕಾನೂನು ಜಾರಿಗೆ ಬಂತಾದರೂ ಆ ಖುಷಿಯೂ ಹೆಚ್ಚು ದಿನ ಉಳಿಯಲಿಲ್ಲ!

ನಿಜವಾದ ಸಂಕಷ್ಟದ ದಿನ ಆರಂಭವಾಗಿದ್ದು...
ರಾಷ್ಟ್ರೀಯ ನೋಂದಣಿ ಪತ್ರಗಳನ್ನು 1962 ಜಾರಿಗೆ ತಂದ ಇಲ್ಲಿನ ಸೇನೆ ಈ ಗುರುತಿನ ಚೀಟಿಯನ್ನು ರೋಹಿಂಗ್ಯಾ ಮುಸ್ಲಿಮರಿಗೆ ನೀಡಲು ಸಿದ್ಧವಿರಲಿಲ್ಲ. ಅವರನ್ನು ವಿದೇಶಿಯರೆಂಬಂತೆಯೇ ನೋಡಿ, ಅಂಥದೇ ಗುರುತಿನ ಚೀಟಿ ನೀಡಲಾಯಿತು. ಅಲ್ಲಿಂದ ರೋಹಿಂಗ್ಯಾ ಸಮುದಾಯದ ನಿಜವಾದ ಸಂಕಷ್ಟದ ದಿನಗಳು ಆರಂಭವಾದವು.

ಉಸಿರಾಡುವುದಕ್ಕೂ ಅನುಮತಿ ಕೇಳಬೇಕಾ?
1982 ರಲ್ಲೂ ಹೊಸ ಪೌರತ್ವ ಕಾಯದೆ ತಂದು ಅದರಿಂದಲೂ ರೊಹಿಂಗ್ಯಾ ಸಮುದಾಯವನ್ನು ಹೊರಗಿಟ್ಟು ಉದ್ಯೋಗ, ಶಿಕ್ಷಣ, ಧಾರ್ಮಿಕ ಸ್ವಾತಂತ್ರ್ಯ, ಆರೋಗ್ಯ ಸೇವೆ, ಮದುವೆ ಪ್ರತಿಯೊಂದಕ್ಕೂ ನಿರ್ಬಂಧ ಹೇರಲಾಯಿತು. ಇವುಗಳನ್ನೆಲ್ಲ ನೋಡಿ ಬೇಸತ್ತ ರೋಹಿಂಗ್ಯಾ ಜನರು, ಇನ್ನು ಮುಂದೆಯೂ ಇಲ್ಲಿಯೇ ಬದುಕಿದ್ದರೆ ಉಸಿರಾಡುವುದಕ್ಕೂ ಅನುಮತಿ ಕೇಳಬೇಕಾದೀತು ಎಂದು ಹೆದರಿ ನೆರೆ ರಾಷ್ಟ್ರಗಳಲ್ಲಿ ಆಸರೆ ಬೇಡಿದವು.

ಶುರುವಾಯ್ತು ವಲಸೆ
ಈ ಎಲ್ಲ ನಿಯಮಗಳು ಜಾರಿಗೆ ಬರುತ್ತಿದ್ದಂತೆಯೇ ನೆರೆಯ ಬಾಂಗ್ಲಾ, ಥಾಯ್ಲೆಂಡ್, ಮಲೇಶ್ಯಾ ಮುಂತಾದ ದೇಶಗಳಿಗೆ ಇವರು ವಲಸೆ ಹೊರಟರು. ಬಾಂಗ್ಲಾ ಸಹ ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಲು ಒಪ್ಪುತ್ತಿಲ್ಲ. ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡುವುದು ಭಾರತದ ಭದ್ರತೆಗೆ ಅಪಾಯ ಎಂದು ಗೃಹಸಚಿವ ರಾಜನಾಥ್ ಸಿಂಗ್ ಈಗಾಗಲೇ ಹೇಳಿದ್ದಾರೆ. ಹಲವು ಮುಸ್ಲಿಂ ರಾಷ್ಟ್ರಗಳೇ ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಲು ಹಿಂದೇಟು ಹಾಕುತ್ತಿವೆ. ಒಟ್ಟಿನಲ್ಲಿ ಯಾರಿಗೂ ಬೇಡದ ಸಮುದಾಯವಾಗಿ ರೋಹಿಂಗ್ಯಾ ಜನರು ದೈನೇಸಿ ಸ್ಥಿತಿಯಲ್ಲಿ ಬದುಕು ಸವೆಸುತ್ತಿದ್ದಾರೆ.

ಗಾಯದ ಮೇಲೆ ಬರೆ!
ಮಯನ್ಮಾರ್ ಸರ್ಕಾರದಿಂದ ಗಾಯದ ಮೇಲೆ ಗಾಯ ಮಾಡಿಕೊಳ್ಳುತ್ತಿದ್ದ ರೊಹಿಂಗ್ಯಾ ಜನರಿಗೆ ಆ ನೋವು ಸಾಲದೆಂಬಂತೆ ಬರೆ ನೀಡಿದ್ದು ಸೇನೆ. 2016 ರಲ್ಲಿ ಮಯನ್ಮಾರ್ ನ ಗಡಿಭದ್ರತಾ ಪಡೆಯ ಪೊಲೀಸರನ್ನು ಸಾಯಿಸಿದ್ದು ರೋಹಿಂಗ್ಯಾ ಸಮುದಾಯದವರೇ ಎಂದ ಇಲ್ಲಿನ ಸರ್ಕಾರ ಅವರ ಮೇಲೆ ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಹಿಂಸೆ ನಡೆಸುತ್ತಲೇ ಬಂದಿದೆ ಎಂಬುದು ಮಾನವ ಹಕ್ಕು ಹೋರಾಟಗಾರರ ದೂರು. ಇದರೊಟ್ಟಿಗೆ ಪಕ್ಕದ ಮಲೆಷ್ಯಾ ಸರ್ಕಾರವೂ ರೋಹಿಂಗ್ಯಾ ಜನರ ಮೇಲೆ ಸವಾರಿ ಮಾಡುತ್ತಿದೆ ಎಂಬ ಕೂಗೂ ಕೇಳಿಬರುತ್ತಿದೆ.

ತಾತ್ಕಾಲಿಕ ನೆಲ
ಪ್ರಸ್ತುತ ಮಯನ್ಮಾರ್ ಮತ್ತು ಬಾಂಗ್ಲಾ ಗಡಿಯಗಳ ಮಧ್ಯೆ ಇರುವ ಎರಡೂ ದೇಶಕ್ಕೂ ಸೇರದ ಭೂಮಿಯೊಂದರಲ್ಲಿ ಅವರು ಬದುಕುತ್ತಿದ್ದಾರೆ. ಹಾಗೆಯೇ ಬಾಂಗ್ಲಾದತ್ತ ವಲಸೆ ಹೋಗುವವರ ಸಂಖ್ಯೆಯೂ ಹೆಚ್ಚುತ್ತಿದೆ. 1970 ರಿಂದ ಇಲ್ಲಿಯವರೆಗೆ ಸುಮಾರು 10 ಲಕ್ಷ ರೋಹಿಂಗ್ಯಾ ಮುಸ್ಲಿಮರು ಪ್ರಪಂಚದ ವಿವಿಧ ದೇಶಗಳಿಗೆ ವಲಸೆ ಹೋಗಿದ್ದಾರೆ. ಭಾರತದಲ್ಲೇ ಸುಮಾರು 15,000 ರೋಹಿಂಗ್ಯಾ ಮುಸ್ಲಿಮರು ಇದ್ದಿರಬಹುದು ಎನ್ನಲಾಗಿದೆ. ಎಲ್ಲ ದೇಶಗಳಲ್ಲೂ ಅವರಿಗೆ ಸಿಕ್ಕಿರುವುದು ತಾತ್ಕಾಲಿಕ ನೆಲೆಯಷ್ಟೇ! ಶಾಶ್ವತವಾಗಿ ಸೂರೊಂದನ್ನು ಕಂಡುಕೊಳ್ಳುವ ಅವರ ಕನಸು ಕೊನೆತನಕ ಕನಸಾಗಿಯೇ ಉಳಿದರೂ ಅಚ್ಚರಿಯೇನಿಲ್ಲ.

ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ
ರೋಹಿಂಗ್ಯಾ ಸಮುದಾಯವನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಮಯನ್ಮಾರ್ ಸರ್ಕಾರವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗಟರ್ಸ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿನ ಸರ್ಕಾರ ಸೇನೆಯ ಹಿಡಿತದಲ್ಲಿರುವುದರಿಂದ ಆಂಗ್ ಸಾನ್ ಸೂಕಿ ಸಹ ಸೊಲ್ಲೆತ್ತುತ್ತಿಲ್ಲ ಎಂಬ ಮಾತೂ ಕೇಳಿಬರುತ್ತಿದೆ. ಒಟ್ಟಿನಲ್ಲಿ ರಾಜಕೀಯ, ಮತಾಂಧತೆ, ಅಮಾನವೀಯತೆ, ಅಹಂಕಾರ ಎಲ್ಲವೂ ಒಟ್ಟಾಗಿ ರೋಹಿಂಗ್ಯಾ ಸಮುದಾಯವನ್ನು ಜಗತ್ತಿನ ಭೂಪಟದಿಂದಲೇ ಅಳಿಸಿಹಾಕುವ ಯತ್ನಮಾಡುತ್ತಿರುವುದು ಸುಳ್ಳಲ್ಲ.
-
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ












Click it and Unblock the Notifications