ಮಲ್ಯ ಹಸ್ತಾಂತರ: ಲಂಡನ್ ಕೋರ್ಟ್ ತೀರ್ಪು ಸೆ. 12ಕ್ಕೆ ಮುಂದೂಡಿಕೆ
ಲಂಡನ್, ಜುಲೈ 31: ಬ್ಯಾಂಕುಗಳಿಗೆ ಹಣ ವಂಚಿಸಿ ಪರಾರಿಯಾದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧದ ಅಂತಿಮ ತೀರ್ಪನ್ನು ಲಂಡನ್ ಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ.
ವೆಸ್ಟ್ ಮಿನ್ಸ್ಟರ್ ಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ, ಭಾರತದ ಜೈಲುಗಳ ಸ್ಥಿತಿಯನ್ನು ತೋರಿಸುವ ಫೋಟೊಗಳನ್ನು ಹಾಜರುಪಡಿಸಲಾಯಿತು.
ಆದರೆ, ಅದರಿಂದ ತೃಪ್ತವಾಗದ ಕೋರ್ಟ್, ವಿಡಿಯೋಗಳನ್ನು ಹಾಜರುಪಡಿಸುವಂತೆ ಹಾಗೂ ವರದಿ ನೀಡುವಂತೆ ಸೂಚಿಸಿತು.

ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲ್ಯ, 'ನಾನು ಕರ್ನಾಟಕ ಕೋರ್ಟ್ ಮುಂದೆ ಸಂಪೂರ್ಣ ಆಸ್ತಿಗಳನ್ನು ಒಪ್ಪಿಸಿದ್ದೇನೆ. 14,000 ಕೋಟಿ ರೂ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿ ಎಲ್ಲ ಹಣವನ್ನೂ ಮರುಪಾವತಿ ಮಾಡಲು ಒಪ್ಪಿಕೊಂಡಿದ್ದೇನೆ' ಎಂದರು.
ಹಣ ವಂಚನೆ ಆರೋಪವನ್ನು ನಿರಾಕರಿಸಿದ ಅವರು, ಯಾವುದೇ ರೀತಿ ಹಣ ವಂಚನೆ ಪ್ರಶ್ನೆಯೇ ಇಲ್ಲ. ಇವೆಲ್ಲವೂ ಸಂಪೂರ್ಣ ಸುಳ್ಳು ಆರೋಪಗಳು. ಇವೆಲ್ಲವೂ ಕೋರ್ಟ್ ಮುಂದಿವೆ. ನಾನೂ ಕೋರ್ಟ್ ಅಧೀನದಲ್ಲಿ ಇದ್ದೇನೆ. 2015ರಿಂದಲೇ ಲಂಡನ್ನಲ್ಲಿ ನೆಲೆಯೂರಲು ಪ್ರಯತ್ನಿಸಿದ್ದಾಗಿ ಹೇಳಿದರು.
ಕೋರ್ಟ್ ನೀಡುವ ತೀರ್ಪಿಗೆ ನಾನು ಬದ್ಧನಾಗಿರುತ್ತೇನೆ ಎಂದು ಮಲ್ಯ ಪ್ರತಿಕ್ರಿಯೆ ನೀಡಿದರು.












Click it and Unblock the Notifications