Breaking: ಉಕ್ರೇನ್ನಲ್ಲಿ ಯುದ್ಧ ನಿಲ್ಲಿಸಲು ರಷ್ಯಾಗೆ ವಿಶ್ವಸಂಸ್ಥೆ ಕೋರ್ಟ್ ಆದೇಶ
ಕೀವ್, ಮಾರ್ಚ್ 16: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು 21ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಬುಧವಾರ ಉಕ್ರೇನ್ ಮೇಲಿನ ಹಗೆತನವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಕೋರ್ಟ್ ರಷ್ಯಾಗೆ ಆದೇಶಿಸಿದೆ.
ಕಳೆದ ಎರಡು ವಾರಗಳ ಹಿಂದೆ ವಿಶ್ವ ನ್ಯಾಯಾಲಯ ಎಂದೂ ಕರೆಯಲ್ಪಡುವ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ ಅನ್ನು ಮಧ್ಯಪ್ರವೇಶಿಸುವಂತೆ ಉಕ್ರೇನ್ ಮನವಿ ಮಾಡಿಕೊಂಡಿತ್ತು. ರಷ್ಯಾ 1948ರ ನರಮೇಧದ ನಿಯಮವನ್ನು ಉಲ್ಲಂಘಿಸಿದೆ ಎಂದು ಉಕ್ರೇನ್ ಆರೋಪಿಸಿತು.
"ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧದ ತನ್ನ ಪ್ರಕರಣದಲ್ಲಿ ಉಕ್ರೇನ್ ಸಂಪೂರ್ಣ ಗೆಲುವು ಸಾಧಿಸಿದೆ," ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಟ್ವೀಟ್ ಸಂದೇಶ:
"ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧದ ತನ್ನ ಪ್ರಕರಣದಲ್ಲಿ ಉಕ್ರೇನ್ ಸಂಪೂರ್ಣ ಜಯ ಸಾಧಿಸಿದೆ. ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ಈ ಆದೇಶವು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಬದ್ಧವಾಗಿರುತ್ತದೆ. ರಷ್ಯಾ ತಕ್ಷಣ ಅದನ್ನು ಅನುಸರಿಸಬೇಕು. ಈ ಆದೇಶವನ್ನು ನಿರ್ಲಕ್ಷಿಸುವುದು ರಷ್ಯಾವನ್ನು ಮತ್ತಷ್ಟು ಪ್ರತ್ಯೇಕಿಸುತ್ತದೆ," ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟ್ವೀಟ್ ಮಾಡಿದ್ದಾರೆ.
ರಷ್ಯಾ-ಉಕ್ರೇನ್ ನಡುವೆ ಸಂಧಾನ ಸಭೆ:
ಕಳೆದ 21 ದಿನಗಳಿಂದ ನಡೆಯುತ್ತಿರುವ ಉಕ್ರೇನ್ ಮೇಲಿನ ದಾಳಿಯನ್ನು ನಿಲ್ಲಿಸಬೇಕಾದರೆ ನೀವು ನಮ್ಮ ಷರತ್ತಿಗೆ ಒಪ್ಪಿಕೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ಉಕ್ರೇನ್ ಒಂದು ತಟಸ್ಥ ರಾಷ್ಟ್ರವಾಗಿ ಬದಲಾಗಬೇಕು. ನೀವು ತಟಸ್ಥ ನಿಲುವು ಪಾಲನೆ ಮಾಡುವುದಾದರೆ ಯುದ್ಧಕ್ಕೆ ತೀಲಾಂಜಲಿ ಹಾಡಲು ನಾವು ಸಿದ್ಧ ಎಂದು ರಷ್ಯಾದ ಸಂಧಾನಕಾರ ವ್ಲಾಡಿಮಿರ್ ಮೆಡಿನ್ಸ್ಕಿ ಷರತ್ತು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಉಕ್ರೇನ್ ಮತ್ತು ರಷ್ಯಾ ಸಂಧಾನಕಾರರ ಸಭೆಯಲ್ಲಿ ಇಂಥದೊಂದು ಷರತ್ತನ್ನು ರಷ್ಯಾ ವಿಧಿಸಿರುವ ಬಗ್ಗೆ ವರದಿಯಾಗಿದೆ.
ಕೆನಡಾ ಸಂಸತ್ತಿನಲ್ಲಿ ಭಾವನಾತ್ಮಕವಾಗಿ ಮಾತಾಡಿದ ಝೆಲೆನ್ಸ್ಕಿ:
ಮಂಗಳವಾರ ಕೆನಡಾ ಸಂಸತ್ ಅನ್ನು ಉದ್ದೇಶಿಸಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾವನಾತ್ಮಕವಾಗಿ ಮಾತನಾಡಿದರು. "ರಷ್ಯನ್ ಸೇನೆಯು ಮೆಮೋರಿಯಲ್ ಕಾಂಪ್ಲೆಕ್ಸ್, ಆಸ್ಪತ್ರೆ, ಶಾಲೆ, ಅಪಾರ್ಟ್ ಮೆಂಟ್ ಸೇನಿದಂತೆ ಎಲ್ಲವನ್ನೂ ನಾಶಪಡಿಸಿದೆ. ಈಗಾಗಲೇ ಅವರು 97 ಮುಗ್ಧ ಮಕ್ಕಳನ್ನು ಕೊಂದಿದ್ದಾರೆ. ನಾವು ಹೆಚ್ಚಿನದ್ದನ್ನು ಕೇಳುತ್ತಿಲ್ಲ, ನ್ಯಾಯವನ್ನು ಕೇಳುತ್ತಿದ್ದೇವೆ. ನಮ್ಮವರ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ನೆರವು ಕೇಳುತ್ತಿದ್ದೇವೆ," ಎಂದು ಹೇಳಿದರು.
ಕೆನಡಾ ಮೇಲೆಯೂ ಇಂಥ ದಾಳಿ ನಡೆದರೆ ಊಹಿಸಿಕೊಳ್ಳಿ:
"ಕೆನಡಾದ ಮೇಲೆಯೂ ನಮ್ಮ ಕಟ್ಟಡಗಳು ಮತ್ತು ಸ್ಮಾರಕ ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆದಿದೆ ಎಂದು ಊಹಿಸಿಕೊಳ್ಳಿ. ಪ್ರತಿರಾತ್ರಿಯೂ ಭಯಾನಕವಾಗಿದ್ದು, ಹಲವು ಕುಟುಂಬಗಳು ಸತ್ತಿವೆ. ಇಂಥ ಸಂದರ್ಭದಲ್ಲಿ ರಷ್ಯಾದ ಮೇಲೆ ಕೇವಲ ನಿರ್ಬಂಧ ವಿಧಿಸಿದರಷ್ಟೇ ಸಾಕಾಗುವುದಿಲ್ಲ," ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾದ ಬಾಂಬ್ ಹಾಗೂ ಮಿಸೈನ್ ದಾಳಿಯನ್ನು ನಿಯಂತ್ರಿಸುವುದಕ್ಕಾಗಿ ಹಾರಾಟ ನಿರ್ಬಂಧ ವಲಯವನ್ನು ಘೋಷಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಸಲ್ಲಿಸಿದ್ದರು. ಆದರೆ ಅವರು ಮನವಿಯನ್ನು ಯುರೋಪಿಯನ್ ರಾಷ್ಟ್ರಗಳು ತಿರಸ್ಕರಿಸಿದ್ದವು.












Click it and Unblock the Notifications