'ವಿಶ್ವಸಂಸ್ಥೆ ನಮ್ಮ ಬೆಂಬಲಕ್ಕಿಲ್ಲ', ಪಾಕ್ ವಿದೇಶಾಂಗ ಸಚಿವರ ಅಳಲು!
ಇಸ್ಲಾಮಾಬಾದ್, ಆಗಸ್ಟ್ 13: "ಭಾರತ ಕಾಶ್ಮೀರ ವಿಷಯದಲ್ಲಿ ನಡೆದುಕೊಂಡ ರೀತಿಯ ಬಗ್ಗೆ ನಾವು ವಿಶ್ವಸಂಸ್ಥೆಯ ಗಮನಕ್ಕೆ ತಂದರೂ ಅದರಿಂದ ಯಾವುದೇ ಪ್ರಯೋಜನವಾಗುತ್ತದೆ ಎಂಬ ನಿರೀಕ್ಷೆ ಬೇಡ. ವಿಶ್ವಸಂಸ್ಥೆಯ ಅಧಿಕಾರಿಗಳೇನು ನಮಗಾಗಿ ಮಾಲೆ ಹಿಡಿದು ನಿಲ್ಲುವುದಿಲ್ಲ" ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಹೇಳಿದ್ದಾರೆ.
ಲಡಾಖ್ ಬಳಿ ಪಾಕ್ ಯುದ್ಧ ವಿಮಾನ, ಎದುರಿಸಲು ಭಾರತವೂ ಸಿದ್ಧ
"ಭಾವನೆಗಳನ್ನು ಹರಿಬಿಡುವುದು, ವಿರೋಧ ವ್ಯಕ್ತಪಡಿಸುವುದು ಸುಲಭ. ಆದರೆ ನೈಜ ಸ್ಥಿತಿಯನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳುವುದು ಕಷ್ಟ. ಪಾಕಿಸ್ತಾನಿಯರು ''ಮೂರ್ಖರ ಸ್ವರ್ಗ"(fools' paradise) ದಲ್ಲಿ ಬದುಕಬೇಡಿ. ವಿಶ್ವಸಂಸ್ಥೆ ಎಂದಿಗೂ ನಮ್ಮ ಸಹಾಯಕ್ಕೆ ಬರುವುದಿಲ್ಲ" ಎಂದು ಖುರೇಷಿ ಹೇಳಿದ್ದಾರೆ.
ವಿಶ್ವಸಂಸ್ಥೆಯ ಶಾಶ್ವತ ಸದಸ್ಯತ್ವ ಹೊಂದಿದ P-5 ರಾಷ್ಟ್ರಗಳ ಪೈಕಿ, ಜಮ್ಮು ಮತ್ತು ಕಾಶ್ಮೀರದ ಕುರಿತ ಭಾರತದ ನಡೆಯನ್ನು ರಷ್ಯಾ ಬೆಂಬಲಿಸಿದ್ದಲ್ಲದೆ, ಹೀಗೆ ಬೆಂಬಲ ನೀಡಿದ ಮೊದಲ ರಾಷ್ಟ್ರ ಎನ್ನಿಸಿದೆ. ರಷ್ಯಾದ ಈ ನಡೆಗೆ ಪ್ರತಿಕ್ರಿಯೆ ನೀಡಿದ್ದ ಖುರೇಷಿ ವಿಶ್ವ ಸಂಸ್ಥೆಯ ಶಾಶ್ವತ ಸದಸ್ಯತ್ವ ಹೊಂದಿರುವ ಚೀನಾ, ಫ್ರಾನ್ಸ್, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕ ಕಡೆಯಿಂದ ಪಾಕಿಸ್ತಾನದ ನಡೆಗೆ ಬೆಂಬಲ ಸಿಗುವ ಸಾಧ್ಯತೆ ಕ್ಷೀಣಿಸುತ್ತಿದೆ ಎಂದಿದ್ದಾರೆ.
ಭಾರತೀಯ ಸಂವಿಧಾನದ 370 ನೇ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿತ್ತು. ಸಂವಿಧಾನದ 370 ನೇ ವಿಧಿಯನ್ನೇ ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು. ಆದರೆ ಭಾರತ ಕಾಶ್ಮೀರದ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುಂತಿಲ್ಲ ಎಂದು ದೂರಿದ್ದ ಪಾಕಿಸ್ತಾನ ವಿಶ್ವಸಂಸ್ಥೆಗೆ ಪತ್ರ ಬರೆದು, ಅದರ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಆದರೆ ವಿಶ್ವಸಂಸ್ಥೆಯ ಕಡೆಯಿಂದ ಇದುವರೆಗೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದಿರುವುದು ಮುಜುಗರವನ್ನುಂಟು ಮಾಡಿದ್ದಲ್ಲದೆ, ರಷ್ಯಾ ಸಹ ಭಾರತಕ್ಕೇ ತನ್ನ ಬೆಂಬಲ ನೀಡಿದರುವುದು ಮಂಗಳಾರತಿ ಮಾಡಿದಂತಾಗಿದೆ!