ಉಕ್ರೇನಿಯರಿಗೆ ವೀಸಾ ಮನ್ನಾ ತಾತ್ಕಾಲಿಕ ರದ್ದು ಮಾಡಿದ ಯುಎಇ
ಅಬುದಾಬಿ, ಮಾರ್ಚ್ 03: ಉಕ್ರೇನ್ ಮೇಲೆ ರಷ್ಯಾವು ದಾಳಿ ನಡೆಸಿದೆ. ಈ ಹಿನ್ನೆಲೆಯಿಂದಾಗಿ ಹಲವಾರು ಉಕ್ರೇನ್ ಪ್ರಜೆಗಳು ದೇಶದಿಂದ ಪಲಾಯನ ಮಾಡುತ್ತಿದ್ದಾರೆ. ಉಕ್ರೇನ್ನಲ್ಲಿರುವ ಇತರೆ ದೇಶದ ಜನರನ್ನು ಆಯಾ ರಾಷ್ಟ್ರಗಳು ವಾಪಾಸ್ ಕರೆಸಿಕೊಳ್ಳುತ್ತಿದೆ. ಈ ನಡುವೆ ಉಕ್ರೇನ್ ನಾಗರಿಕರಿಗೆ ವೀಸಾ ಮನ್ನಾವನ್ನು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ಈ ಬಗ್ಗೆ ಗಲ್ಫ್ ಅರಬ್ ರಾಷ್ಟ್ರದಲ್ಲಿರುವ ಕೀವ್ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಉಕ್ರೇನ್ ನಾಗರಿಕರಿಗೆ ವೀಸಾ ಮನ್ನಾವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ ಎಂದು ಹೇಳಿದೆ. ಈ ಯುದ್ಧದ ಸಂದರ್ಭದಲ್ಲಿ ಸಾವಿರಾರು ಜನರು ಉಕ್ರೇನ್ನಿಂದ ಪಲಾಯನ ಮಾಡುತ್ತಿದ್ದಾರೆ. ಈ ನಡುವೆ ವೀಸಾ ಮನ್ನಾವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಯುಎಇ ನಿರ್ಧಾರವು ಮಂಗಳವಾರದಿಂದ ಜಾರಿಗೆ ಬಂದಿದೆ ಎಂದು ರಾಯಭಾರ ಕಚೇರಿಯು ತನ್ನ ಫೇಸ್ಬುಕ್ ಮೂಲಕ ನಾಗರಿಕರಿಗೆ ತಿಳಿಸಿದೆ. ಆದರೆ ಈ ಬಗ್ಗೆ ಯಾವುದೇ ಒಂದು ನಿರ್ದಿಷ್ಟ ಕಾರಣವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಉಲ್ಲೇಖ ಮಾಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆಯನ್ನು ಎಮಿರೇಟ್ ಅಧಿಕಾರಿಗಳು ಕೂಡಾ ನೀಡಿಲ್ಲ.

ದುಬೈನಲ್ಲಿರುವ ಉಕ್ರೇನ್ನಿಯರ ಆಕ್ರೋಶ
ಉಕ್ರೇನಿಯನ್ ಅನ್ನಾ ಗೊನ್ಚಾರ್ನ್ಕೊ, ದುಬೈನಲ್ಲಿ ರಾಯಿಟರ್ಸ್ನೊಂದಿಗೆ ಮಾತನಾಡುತ್ತಾ, "ಇಡೀ ಜಗತ್ತು ಸಹಾಯ ಮಾಡುತ್ತಿದೆ. ಈ ಸಂದರ್ಭದಲ್ಲಿ ಯುಎಇ ಈ ನಿರ್ಧಾರವನ್ನು ಮಾಡಿದೆ," ಎಂದು ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ ತಾನು ನೆದರ್ಲ್ಯಾಂಡ್ನಲ್ಲಿ ವಾಸ ಮಾಡುತ್ತಿದ್ದೇನೆ. ಆದರೆ ತನ್ನ ಮಗಳು ಹಾಗೂ ಪತಿ ಕೀವ್ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
"ಉಕ್ರೇನ್ನಿಯನ್ನರು ಈ ದೇಶಕ್ಕೆ ಪ್ರವೇಶಿಸಲು ಮತ್ತು ವೀಸಾವನ್ನು ಬಯಸದಿದ್ದರೆ, ಅದಕ್ಕೆ ಈ ದೇಶದಲ್ಲಿ (ಯುಎಇ) ಅವಕಾಶ ನೀಡದಿದ್ದರೆ, ನಾನು ಅದನ್ನು ಅಪರಾಧ ಎಂದು ಪರಿಗಣಿಸುತ್ತೇನೆ. ಈ ಕಷ್ಟದ ಸಂದರ್ಭದಲ್ಲಿ ಉಕ್ರೇನ್ ಜನರು ವೀಸಾ ಪಡೆಯುವುದು ಹೇಗೆ ಅದು ಅಸಾಧ್ಯವಾದ ಮಾತು," ಎಂದು ಕೂಡಾ ಹೇಳಿದ್ದಾರೆ.
ಉಕ್ರೇನ್ ನಾಗರಿಕರಿಗೆ 5 ಮಿಲಿಯನ್ ಡಾಲರ್ ನೆರವು
ರಷ್ಯಾದ ಆಕ್ರಮಣದ ನಂತರ 650,000 ಕ್ಕೂ ಹೆಚ್ಚು ಜನರು ಉಕ್ರೇನ್ನಿಂದ ನೆರೆಯ ಯುರೋಪಿಯನ್ ರಾಜ್ಯಗಳಿಗೆ ಪಲಾಯನ ಮಾಡಿದ್ದಾರೆ. ಲಕ್ಷಾಂತರ ನಿರಾಶ್ರಿತರಿಗಾಗಿ ತಯಾರಿ ನಡೆಸುತ್ತಿದೆ ಎಂದು ಯುರೋಪಿಯನ್ ಯೂನಿಯನ್ ಹೇಳಿದೆ. ಸಂಘರ್ಷದಲ್ಲಿ ತಟಸ್ಥ ನಿಲುವು ಅಳವಡಿಸಿಕೊಂಡಿರುವ ಯುಎಇ, ಕದನ ವಿರಾಮ ಮತ್ತು ರಾಜತಾಂತ್ರಿಕತೆಗೆ ಕರೆ ನೀಡಿದೆ. ಉಕ್ರೇನ್ನಲ್ಲಿರುವ ನಾಗರಿಕರಿಗೆ 5 ಮಿಲಿಯನ್ ಡಾಲರ್ ಮೊತ್ತದ ನೆರವು ನೀಡುವುದಾಗಿ ಬುಧವಾರ ಹೇಳಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.
ವಿಶ್ವ ಮೇಳಕ್ಕಾಗಿ ದುಬೈಗೆ ಭೇಟಿ ನೀಡುತ್ತಿರುವ ಇನ್ನಾ ಮತ್ತು ಅವರ ಮಗಳು ಸೋನಿಯಾ, ಕಪ್ಪು ಸಮುದ್ರದ ಬಂದರು ನಗರವಾದ ಒಡೆಸ್ಸಾದಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದಾರೆ. "ಇದು ತುಂಬಾ ಭಯಾನಕವಾಗಿದೆ, ತುಂಬಾ ದುಃಖವಾಗಿದೆ. ನಾವು ನಮ್ಮ ಸ್ನೇಹಿತರಿಗಾಗಿ, ನಮ್ಮ ಕುಟುಂಬ ಹೇಗಿದೆಯೋ ಎಂದು ಭಯಪಡುವಂತಾಗಿದೆ. ಅವರೆಲ್ಲರೂ ಉಕ್ರೇನ್ನಲ್ಲಿ ಇದ್ದಾರೆ. ಅವರಿಗೆ ದೇಶ ತೊರೆದು ಇಲ್ಲಿಗೆ ಬರಲು ಸಾಧ್ಯವಿಲ್ಲ," ಎಂದು ಇನ್ನಾ ಹೇಳಿದ್ದಾರೆ. ಆದರೆ ತನ್ನ ಕೊನೆಯ ಹೆಸರು ಹೇಳಲು ಮಾತ್ರ ನಿರಾಕರಿಸಿದ್ದಾರೆ.
ಇನ್ನು ಪುತ್ರಿ ಸೋನಿಯಾ ತಾನು ಮನೆಗೆ ಹೋಗ ಬೇಕು ಎಂದಿದ್ದಾರೆ. "ಈ ವರ್ಷ ನಾನು ಪದವಿ ಪಡೆಯಬೇಕಾಗಿತ್ತು. ಈಗ ನಾಳೆ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ. ..ದಯವಿಟ್ಟು ನಮ್ಮ ದೇಶದಲ್ಲಿ ಯುದ್ಧವನ್ನು ನಿಲ್ಲಿಸಿ, ಇದು ತುಂಬಾ ಭಯಾನಕವಾಗಿದೆ," ಎಂದು ಮನವಿ ಮಾಡಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications