ಇಂಡೋನೇಷ್ಯಾದಲ್ಲಿ ಗಡಗಡ ನಡುಗಿದ ಭೂಮಿ: ಸುನಾಮಿ ಭೀತಿ
ಜಕಾರ್ತಾ, ಆಗಸ್ಟ್ 2: ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಶುಕ್ರವಾರ ರಿಕ್ಟರ್ ಮಾಪನದಲ್ಲಿ 6.8 ರಷ್ಟು ಭಾರಿ ಭೂಕಂಪ ಸಂಭವಿಸಿದೆ. ಈ ಭೂಕಂಪದ ತೀವ್ರತೆ ಹೆಚ್ಚಾಗಿರುವುದರಿಂದ ಇಂಡೋನೇಷ್ಯಾದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ದ್ವೀಪದಲ್ಲಿ ಟೆಲುಕ್ ಬೆಟುಂಕ್ ನಗರದಿಂದ 227 ಕಿ.ಮೀ. ದೂರದಲ್ಲಿ ಭೂಮಿಯಿಂದ ಸುಮಾರು 59 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಅಮೆರಿಕದ ಭೂವಿಜ್ಞಾನ ಸಮೀಕ್ಷೆ (ಯುಎಸ್ಜಿಎಸ್) ತಿಳಿಸಿದೆ. ಇಂಡೋನೇಷ್ಯಾದ ಭೂಗರ್ಭಶಾಸ್ತ್ರ ಸಂಸ್ಥೆ ಸುನಾಮಿ ಎಚ್ಚರಿಕೆ ಹೊರಡಿಸಿದೆ.
ಮಹಾರಾಷ್ಟ್ರದ ಕೊಯ್ನಾ ಜಲಾಶಯದ ಬಳಿ ಲಘು ಭೂಕಂಪ
ಇದುವರೆಗೂ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆದರೆ, ಜಕಾರ್ತಾದ ಹಲವೆಡೆ ಭೂಮಿ ಪ್ರಬಲವಾಗಿ ಕಂಪಿಸಿದೆ. ಹೀಗಾಗಿ ಈ ಭಾಗದ ಜನರಲ್ಲಿ ಭಯ ಉಂಟಾಗಿದೆ.
ಭೂಕಂಪದ ತೀವ್ರತೆ ಹೆಚ್ಚಾಗಿದ್ದರಿಂದ ಭಾರತದಲ್ಲಿಯೂ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಭೂಕಂಪದ ಕಾರಣದಲ್ಲಿ ಭಾರತದಲ್ಲಿ ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಸೂಚನೆ ನೀಡಲಾಗಿದೆ ಎಂದು ಹೈದರಾಬಾದ್ ಮೂಲಕ ಭೂಶಾಸ್ತ್ರಜ್ಞ ಎಸ್ಎಸ್ಸಿ ಶೆಣೈ ಅವರು ತಿಳಿಸಿದ್ದಾರೆ.