ಪಾಕ್ ಸೇನಾ ಮುಖ್ಯಸ್ಥ ಮುಲ್ಲಾ ಮುನೀರ್ಗೆ ಭರ್ಜರಿ ಊಟ ಬಡಿಸಿದ ಡೊನಾಲ್ಡ್ ಟ್ರಂಪ್: ದಿಢೀರ್ ಪ್ರೇಮಕ್ಕೆ ಕಾರಣಗಳೇನು?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ವಿರೋಧಿ ನಡೆಯನ್ನು ಅನುಸರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಭಾರತ ಕೈಗೊಂಡಿದ್ದ ಆಪರೇಷನ್ ಸಿಂಧೂರವನ್ನು ನಾನೇ ತಡೆದಿದ್ದೇನೆ ಎಂಬ ಹೇಳಿಕೆಗಳನ್ನು ಟ್ರಂಪ್ ನೀಡುತ್ತಲೇ ಇದ್ದಾರೆ. ಇದೇ ವೇಳೆ, ಪಾಕಿಸ್ತಾನವನ್ನು ನಾನು ಪ್ರೀತಿಸುತ್ತೇನೆ ಎಂಬುದಾಗಿ ಹೇಳುವ ಮೂಲಕ ಟ್ರಂಪ್ ಅವರು ಭಾರತದ ವಿರೋಧಿಯಾಗಿ ಬದಲಾಗುತ್ತಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಪಾಕ್ ಸೇನಾ ಮುಖ್ಯಸ್ಥನಿಗೆ ವೈಟ್ ಹೌಸ್ನಲ್ಲಿ ಆತಿಥ್ಯ
ಈ ಬೆಳವಣಿಗೆಗಳ ನಡುವೆ ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅಲಿಯಾಸ್ ಮುಲ್ಲಾ ಮುನೀರ್ಗೆ ವೈಟ್ ಹೌಸ್ನಲ್ಲಿ ಅಪರೂಪದ ಆತಿಥ್ಯ ದೊರೆತಿದೆ. ಮುನೀರ್ರನ್ನು ಅಮೆರಿಕಕ್ಕೆ ಕರೆಸಿರುವ ಡೊನಾಲ್ಡ್ ಟ್ರಂಪ್ ಭೋಜನ ಕೂಟವನ್ನು ಏರ್ಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಟ್ರಂಪ್ ನಡೆಯು ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದು, ಇದು ಭಾರತೀಯರ ಕೆಂಗಣ್ಣಿಗೂ ಗುರಿಯಾಗಿದೆ.

ಇಸ್ರೇಲ್ ಹಾಗೂ ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಖಾಸಗಿ ಭೋಜನ ಸಭೆ ನಡೆದಿದೆ. ಈ ಸಂಘರ್ಷದಲ್ಲಿ ಅಮೆರಿಕದ ಭಾಗವಹಿಸುವಿಕೆ ಕುರಿತು ಟ್ರಂಪ್ ಆಲೋಚನೆ ನಡೆಸಿದ್ದಾರೆ ಎಂಬುದರ ಕುರಿತು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಇರಾನ್ ನಡುವಿನ ಹತ್ತಿರದ ಸಂಬಂಧಗಳು ಈ ಸಭೆಗೆ ಹೆಚ್ಚಿನ ಮಹತ್ವವನ್ನು ನೀಡಿವೆ ಎನ್ನಲಾಗುತ್ತಿದೆ.
ಜಿಯೋ ನ್ಯೂಸ್ ಪ್ರಕಾರ, ಮುಲ್ಲಾ ಮುನೀರ್ ಅವರು ವೈಟ್ ಹೌಸ್ನಲ್ಲಿ ಟ್ರಂಪ್ ಅವರೊಂದಿಗೆ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಅವರಿಬ್ಬರ ನಡುವಿನ ಚರ್ಚೆಗಳ ವಿವರಗಳು ಇನ್ನೂ ಹೊರಬಿದ್ದಿಲ್ಲ. ವಿದೇಶಿ ಸೇನಾ ಮುಖ್ಯಸ್ಥನೊಬ್ಬನಿಗೆ ವೈಟ್ ಹೌಟ್ನಲ್ಲಿ ಭೋಜನ ಕೂಟ ಏರ್ಪಡಿಸುವುದು ಅಪರೂಪವೆನ್ನಲಾಗುತ್ತಿದೆ. ಹಿಂದಿನ ಪಾಕಿಸ್ತಾನಿ ಸೇನಾ ಮುಖ್ಯಸ್ಥರಾಗಿದ್ದ ಅಯೂಬ್ ಖಾನ್, ಜಿಯಾ ಉಲ್ಲಾ ಹಕ್ ಮತ್ತು ಪರ್ವೇಜ್ ಮುಷರಫ್ ಅವರು ಇಂತಹ ಆಹ್ವಾನ ಪಡೆದಿದ್ದರೂ, ಅವರು ಆ ಸಮಯದಲ್ಲಿ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಅವರು ಕೆನಡಾದಲ್ಲಿ ನಡೆಯುತ್ತಿದ್ದ ಜಿ7 ಶೃಂಗಸಭೆಯಿಂದ ಹೊರಬಂದಿದ್ದರು. ಮಂಗಳವಾರ ಬೆಳಿಗ್ಗೆ ವಾಷಿಂಗ್ಟನ್ಗೆ ಮರಳಿದ್ದರು. ಆ ಬಳಿಕ ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನು ಮಧ್ಯಾಹ್ನ 1 ಗಂಟೆಗೆ ಕ್ಯಾಬಿನೆಟ್ ಹಾಲ್ನಲ್ಲಿ ಭೋಜನಕ್ಕೆ ಆಹ್ವಾನಿಸುವುದಾಗಿ ಘೋಷಣೆ ಮಾಡಿದ್ದರು.
ಟ್ರಂಪ್ ಆಹ್ವಾನವನ್ನು ನಿರಾಕರಿಸಿದ ಮೋದಿ
ಮಂಗಳವಾರವೇ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಟ್ರಂಪ್ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಕೆನಡಾದಿಂದ ಹಿಂತಿರುಗುವ ಮೊದಲು ಅಮೆರಿಕಕ್ಕೆ ಭೇಟಿ ನೀಡಬಹುದೇ ಎಂಬುದಾಗಿ ಟ್ರಂಪ್ ಮೋದಿ ಅವರನ್ನು ಕೇಳಿಕೊಂಡಿದ್ದಾರೆ. ಆದರೆ, ಮೊದಲು ನಿಗದಿಪಡಿಸಿದ ಕಾರ್ಯಕ್ರಮಗಳ ಕಾರಣದಿಂದ ಮೋದಿ ಅವರು ಈ ವಿನಂತಿಯನ್ನು ನಿರಾಕರಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ವಿರಾಮ ನೇರವಾಗಿ ಎರಡೂ ಸೈನ್ಯಗಳ ಸಂಪರ್ಕದಿಂದ ಸಾಧ್ಯವಾಯಿತು. ಯಾವುದೇ ಅಮೆರಿಕ ಮಧ್ಯಸ್ಥಿಕೆ ಇಲ್ಲದೆ, ನಾವು ವಿರಾಮದ ನಿರ್ಧಾರಕ್ಕೆ ಬಂದೆವು ಎಂಬುದಾಗಿ ಮೋದಿ ಟ್ರಂಪ್ ಅವರಿಗೆ ಮನವರಿಕೆ ಮಾಡಿಸಿದ್ದಾರೆ. ಭಾರತವು ಯಾವತ್ತೂ ತೃತೀಯ ದೇಶದ ಮಧ್ಯಸ್ಥಿಕೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ ವಿನಂತಿಯಿಂದಲೇ ಸೇನಾ ಅಧಿಕಾರಿಗಳ ಮಾತುಕತೆ ಆರಂಭವಾಯಿತು ಎಂಬುದಾಗಿ ಮೋದಿ ತಿಳಿಸಿದ್ದಾರೆ ಎಂದು ಮಿಸ್ರಿ ಹೇಳಿದ್ದಾರೆ. ಭಾರತ-ಪಾಕಿಸ್ತಾನ ಶಾಂತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾಗಿ ಪುನಃಪುನಃ ಟ್ರಂಪ್ ಹೇಳುತ್ತಿದ್ದಾರೆ. ಇದಕ್ಕೆ ಮೋದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪೆಹಲ್ಗಾಂವ್ ದಾಳಿಗೆ ಪ್ರತಿಯಾಗಿ ಭಾರತವು ಮೇ 7ರಂದು ಆಪರೇಷನ್ ಸಿಂಧೂರ ಆರಂಭಿಸಿತು. ಇದು ನಾಲ್ಕು ದಿನಗಳ ಭಾರೀ ಸಂಘರ್ಷಕ್ಕೆ ಕಾರಣವಾಯಿತು. ಮೇ 10ರಂದು ಎರಡೂ ದೇಶಗಳ ಸೇನಾ ಮುಖ್ಯಸ್ಥರು ಕಾರ್ಯಾಚರಣೆ ಸ್ಥಗಿತಗೊಳಿಸಲು ಒಪ್ಪಿಕೊಂಡರು.
ಕಳೆದ ತಿಂಗಳು ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಪದವಿಗೆ ಉತ್ತೀರ್ಣಗೊಳಿಸಲಾಯಿತು. 1959ರಲ್ಲಿ ಅಯೂಬ್ ಖಾನ್ ನಂತರ ಇದೇ ಮೊದಲ ಬಾರಿಗೆ ಈ ಹುದ್ದೆ ನೀಡಲಾಗಿದೆ. ವಾಷಿಂಗ್ಟನ್ನ ಪಾಕಿಸ್ತಾನಿ-ಅಮೆರಿಕನ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮುನೀರ್, ಭಾರತವು 'ಪ್ರಾದೇಶಿಕ ಪ್ರಭುತ್ವ' ಸಾಧಿಸಲು ಯತ್ನಿಸುತ್ತಿದೆ. ಇದರ ಬದಲು ಪಾಕಿಸ್ತಾನವನ್ನು 'ಸರ್ವತಂತ್ರ ಸ್ವತಂತ್ರ ರಾಷ್ಟ್ರ' ಎಂದು ಪರಿಗಣಿಸಬೇಕೆಂದು ಹೇಳಿದರು. ಪಹಲ್ಗಾಂವ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತವು ಅಂತರಾಷ್ಟ್ರೀಯ ಗಡಿಗಳನ್ನು ಉಲ್ಲಂಘಿಸುವ ಮೂಲಕ ತನ್ನದೇ ಪ್ರಭುತ್ವ ಸ್ಥಾಪಿಸಲು ಹವಣಿಸುತ್ತಿದೆ ಎಂದು ಮುನೀರ್ ಆರೋಪಿಸಿದ್ದಾರೆ. ಭಾರತದ ಈ ನಡೆಯನ್ನು ಪಾಕಿಸ್ತಾನ ಬಲವಾಗಿ ವಿರೋಧಿಸುತ್ತಲೇ ಬಂದಿದೆ ಎಂದು ತಿಳಿಸಿದ್ದಾರೆ.












Click it and Unblock the Notifications