ಭಾರತ-ಅಫ್ಘಾನ್ ನಡುವೆ ವಿಮಾನ ಸಂಚಾರ ಪುನಾರಂಭಿಸಲು ತಾಲಿಬಾನ್ ಪತ್ರ
ಕಾಬೂಲ್, ಸೆಪ್ಟೆಂಬರ್ 29: ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿರುವ ತಾಲಿಬಾನ್ ಮೊದಲ ಬಾರಿಗೆ ಭಾರತೀಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಉಭಯ ರಾಷ್ಟ್ರಗಳ ನಡುವೆ ವಿಮಾನಗಳ ಸಂಚಾರ ಪುನಾರಂಭಿಸುವಂತೆ ಮನವಿ ಮಾಡಿದೆ.
ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದಲ್ಲಿ ಹೊಸ ಆಡಳಿತವು ಭಾರತಕ್ಕೆ ಬರೆದ ಪತ್ರದ ಬಗ್ಗೆ ಇಂಡಿಯಾ ಟುಡೆ ವರದಿ ಮಾಡಿದೆ. ಕಳೆದ ಸೆಪ್ಟೆಂಬರ್ 7ರಂದು ಅಫ್ಘಾನಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರದ ಹಂಗಾಮಿ ಸಚಿವ ಅಲ್ಹಾಜ್ ಹಮೀದುಲ್ಲಾ ಅಖುಂಜ ಅವರು ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶಕ ಅರುಣ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಡಿಜಿಸಿಎಗೆ ಅಭಿನಂದನೆ ಸಲ್ಲಿಸಿದ ಅಖುಂಜದಾ ಪತ್ರದಲ್ಲಿ ಹೀಗೆ ಬರೆದಿದ್ದಾರೆ. "ನಿಮಗೆ ಇತ್ತೀಚೆಗೆ ತಿಳಿದಿರುವಂತೆ, ಕಾಬೂಲ್ ವಿಮಾನ ನಿಲ್ದಾಣವು ಅಮೆರಿಕಾದ ಸೈನ್ಯದಿಂದ ಹಿಂತೆಗೆದುಕೊಳ್ಳುವ ಮೊದಲು ಹಾನಿಗೊಳಗಾಯಿತು ಮತ್ತು ನಿಷ್ಕ್ರಿಯಗೊಂಡಿತ್ತು. ನಮ್ಮ ಕತಾರ್ ಸಹೋದರನ ತಾಂತ್ರಿಕ ನೆರವಿನಿಂದ ವಿಮಾನ ನಿಲ್ದಾಣವು ಮತ್ತೊಮ್ಮೆ ಕಾರ್ಯಾರಂಭ ಮಾಡಿದೆ. ಈ ನಿಟ್ಟಿನಲ್ಲಿ 2021ರ ಸೆಪ್ಟೆಂಬರ್ 6ರಂದು NOTAM (ಏರ್ಮೆನ್ಗೆ ಸೂಚನೆ) ಅನ್ನು ನೀಡಲಾಗಿದೆ," ಎಂದು ಬರೆದಿದ್ದಾರೆ.

ಭಾರತ-ಅಫ್ಘಾನ್ ನಡುವೆ ವಿಮಾನ ಕಾರ್ಯಾಚರಣೆ:
ಅಫ್ಘಾನಿಸ್ತಾನ ಮತ್ತು ಭಾರತದ ನಡುವೆ ವಿಮಾನಯಾನ ಸಂಚಾರ ಪುನಾರಂಭಿಸುವಂತೆ ಮನವಿ ಮಾಡಿಕೊಂಡಿದ್ದಾರೆ. "ಈ ಪತ್ರದ ಉದ್ದೇಶ ಸಹಿ ಮಾಡಲಾದ ಎಂಒಯು ಮತ್ತು ರಾಷ್ಟ್ರೀಯ ವಿಮಾನಯಾನ (ಅರಿಯಾನಾ ಅಫಘಾನ್ ಏರ್ಲೈನ್ ಮತ್ತು ಕಾಮ್ ಏರ್) ಆಧಾರದ ಮೇಲೆ ಎರಡು ದೇಶಗಳ ನಡುವೆ ಸುಗಮ ಪ್ರಯಾಣಿಕರ ಸಂಚಾರವನ್ನು ಆರಂಭಿಸುವ ಗುರಿಯನ್ನು ಹೊಂದಿದೆ. ಆದ್ದರಿಂದ ಅಫ್ಘಾನಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರವು ತಮ್ಮ ವಾಣಿಜ್ಯ ವಿಮಾನಯಾನಕ್ಕೆ ಅನುಕೂಲ ಮಾಡಿಕೊಡುವಂತೆ ನಿಮ್ಮನ್ನು ವಿನಂತಿಸುತ್ತದೆ" ಎಂದು ಪತ್ರದಲ್ಲಿ ಹೇಳಲಾಗಿದೆ. "ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ನ ನಾಗರಿಕ ವಿಮಾನಯಾನವು ತನ್ನ ಅತ್ಯುನ್ನತ ಭರವಸೆಯನ್ನು ಹೊಂದಿರುತ್ತದೆ" ಎಂದು ಅಖುಂಜಾದ ಹೇಳಿದ್ದಾರೆ.
ತಾಲಿಬಾನ್ ಆಡಳಿತ ಗುರುತಿಸದ ಭಾರತ:
ಕಳೆದ ಆಗಸ್ಟ್ 31ರಂದು ದೋಹಾದಲ್ಲಿ ಸಭೆ ನಡೆದರೂ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಭಾರತವು ಅಧಿಕೃತವಾಗಿ ಗುರುತಿಸಿರಲಿಲ್ಲ. ಕತಾರ್ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರ ಮನವಿ ಮೇರೆಗೆ ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಜಾಯ್ ಅವರನ್ನು ಭೇಟಿಯಾಗಿದ್ದರು.
ಭಾರತೀಯರನ್ನು ವಾಪಸ್ ಕರೆ ತರುವ ಕಾರ್ಯ:
ಅಫ್ಘಾನಿಸ್ತಾನದಿಂದ ಕಳೆದ ಆಗಸ್ಟ್ 30ರಂದು ಯುಎಸ್ ಸೈನ್ಯವನ್ನು ಹಿಂತೆಗೆದುಕೊಂಡ ನಂತರ ತಾಲಿಬಾನ್ ಸಂಘಟನೆಯು ಇಡೀ ದೇಶವನ್ನು ಸ್ವಾಧೀನಪಡಿಸಿಕೊಂಡಿತು. ಭಾರತವು ತನ್ನ ನಾಗರಿಕರನ್ನು ಸ್ಥಳಾಂತರಿಸಲು ಆಗಸ್ಟ್ 21ರಂದು ಕಾಬೂಲ್ ನಿಂದ ಭಾರತೀಯ ವಾಯುಪಡೆಯ ಕೊನೆಯ ವಿಮಾನ ಸಂಚಾರ ನಡೆಸಿತು. ಅಂದು ಏರ್ ಇಂಡಿಯಾ ವಿಮಾನದಲ್ಲಿ ದುಶಾನ್ಬೆ ಮೂಲಕ ದೆಹಲಿಗೆ ಕರೆದೊಯ್ಯಲಾಯಿತು.
ಸಹಜವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಕಾಬೂಲ್ ನಿಲ್ದಾಣ:
ಅಫ್ಘಾನಿಸ್ತಾನಕ್ಕೆ ವಿಮಾನಗಳ ಸಂಚಾರ ಪುನಾರಂಭಿಸುವುದಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯೆ ನೀಡಿದ್ದಾರೆ. "ನಾವು ಅಲ್ಲಿ ನಮ್ಮ ಜನರನ್ನು ಮತ್ತು ಕೆಲವು ಅಫ್ಘನ್ನರನ್ನು ಸ್ಥಳಾಂತರಿಸಲು ಆದ್ಯತೆ ನೀಡುತ್ತಿದ್ದೇವೆ. ಪ್ರಸ್ತುತ, ಕಾಬೂಲ್ ವಿಮಾನ ನಿಲ್ದಾಣವು ಸಹಜವಾಗಿ ಕಾರ್ಯನಿರ್ವಹಿಸುತ್ತಿಲ್ಲ . ಹಾಗಾಗಿ ಹೆಚ್ಚಿನ ವಿಮಾನಗಳ ಬಗ್ಗೆ ನನಗೆ ಯಾವುದೇ ಅಪ್ಡೇಟ್ ಇಲ್ಲ. ಕಾಬೂಲ್ ವಿಮಾನ ನಿಲ್ದಾಣ ಕಾರ್ಯಾರಂಭವಾದ ನಂತರ ನಾವು ಈ ಸಮಸ್ಯೆಯನ್ನು ಮರುಪರಿಶೀಲಿಸಬಹುದು ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದ್ದಾರೆ.
ತಾಲಿಬಾನ್ ಸರ್ಕಾರ ಘೋಷಣೆ:
ಅಫ್ಘಾನಿಸ್ತಾನದ ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು 25 ದಿನಗಳೊಳಗೆ ಹೊಸ ಸರ್ಕಾರ ಘೋಷಿಸಿ ಆಗಿದೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದ ನಾಯಕತ್ವವನ್ನು ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೆಗಲಿಗೆ ವಹಿಸಲಾಗಿದೆ. ತಾಲಿಬಾನ್ ಮತ್ತು ಹಕ್ಕಾನಿ ನಡುವಿನ ಭಿನ್ನಾಭಿಪ್ರಾಯಗಳ ನಡುವೆ ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾರಿಗೆ ಪಟ್ಟ ಕಟ್ಟಲಾಗಿದೆ. ತಾಲಿಬಾನ್ ಸಂಘಟನೆ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನ ನೀಡಲಾಗಿದೆ. ಅಬ್ದುಲ್ ಬರಾದರ್ ಮೊದಲ ಉಪ ಪ್ರಧಾನಿಯಾಗಿದ್ದು, ಮಾವ್ಲವಿ ಹನ್ನಾಫಿ ಎರಡನೇ ಉಪ ಪ್ರಧಾನಿ ಆಗಿದ್ದಾರೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದಲ್ಲಿ 33 ಸಚಿವರಿಗೆ ಸ್ಥಾನ ನೀಡಲಾಗಿದೆ.












Click it and Unblock the Notifications