ಶ್ರೀಲಂಕಾ ಚುನಾವಣೆ: ಮುಸ್ಲಿಂ ಮತದಾರರಿದ್ದ ಬಸ್ ಮೇಲೆ ಗುಂಡಿನ ದಾಳಿ
ಕೊಲಂಬೋ, ನವೆಂಬರ್ 16: ಉಗ್ರರ ದಾಳಿ ಹಾಗೂ ರಾಜಕೀಯ ಅಸ್ಥಿರತೆಯಿಂದ ಕಂಗೆಟ್ಟಿರುವ ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಶನಿವಾರ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಮತದಾನಕ್ಕಾಗಿ ತೆರಳುತ್ತಿದ್ದ ಅಲ್ಪಸಂಖ್ಯಾತ ಮುಸ್ಲಿಮ್ ಮತದಾರರಿದ್ದ ಬಸ್ಗಳ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ.
ಬಂದೂಕುಧಾರಿಗಳು ನೂರಕ್ಕೂ ಅಧಿಕ ವಾಹನಗಳಿಗೆ ಬೆಂಗಾವಲಾಗಿ ತೆರಳುತ್ತಿದ್ದ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿ ಬಸ್ಗಳ ಮೇಲೆ ಕಲ್ಲುತೂರಾಟ ನಡೆಸಿದರು. ಜತೆಗೆ ರಸ್ತೆಯಲ್ಲಿ ಟೈರ್ಗಳನ್ನು ಸುಟ್ಟು ರಸ್ತೆ ತಡೆ ನಡೆಸಿದರು. ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
35 ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದು, 15 ಮಿಲಿಯನ್ಗೂ ಅಧಿಕ ಮತದಾರರು ಒಬ್ಬರನ್ನು ಆಯ್ಕೆ ಮಾಡಲಿದ್ದಾರೆ. ಸೋಮವಾರದ ವೇಳೆಗೆ ಚುನಾವಣೆಯ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ.

ಕಣದಲ್ಲಿ 35 ಅಭ್ಯರ್ಥಿಗಳಿದ್ದರೂ, ಇಲ್ಲಿ ಆಡಳಿತಾರೂಢ ಯುಎನ್ಪಿ ನಾಯಕ ಸಜಿತ್ ಪ್ರೇಮದಾಸ ಮತ್ತು ಮಾಜಿ ರಕ್ಷಣಾ ಕಾರ್ಯದರ್ಶಿ, ವಿರೋಧಪಕ್ಷವಾದ ಶ್ರೀಲಂಕಾ ಪೊಡುಜನ ಪೆರಾಮುನಾದ (ಎಸ್ಪಿಪಿ) ಗೋಟಬಾಯ ರಾಜಪಕ್ಸ ಅವರ ನಡುವೆ ನೇರ ಹಣಾಹಣಿ ಇದೆ.
ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಅವರ ಸಹೋದರನಾದ ಗೋಟಬಾಯ ರಾಜಪಕ್ಸ ಎಲ್ಟಿಟಿಇ ವಿರುದ್ಧದ ಶ್ರೀಲಂಕಾ ಸೇನೆಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಅಲ್ಲಿನ ಬಹುಸಂಖ್ಯಾತ ಬೌದ್ಧ ಸಮುದಾಯದ ಬೆಂಬಲ ಅವರ ಕಡೆಗಿದೆ.
ಅವರ ಎದುರಾಳಿಯಾಗಿರುವ ಸಜಿತ್ ಪ್ರೇಮದಾಸ ಮಾಜಿ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರ ಮಗ. ಈಗಿನ ಯುಎನ್ಪಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಶ್ರೀಲಂಕಾದ ತಮಿಳರನ್ನು ಪ್ರತಿನಿಧಿಸುವ ತಮಿಳ್ ನ್ಯಾಷನಲ್ ಅಲೈಯನ್ಸ್, ತಮ್ಮ ಬೆಂಬಲವನ್ನು ಪ್ರೇಮದಾಸ ಅವರಿಗೆ ನೀಡಿದೆ.












Click it and Unblock the Notifications