ಅಕ್ರಮ ಸೆರವಾಸ ಅಂತ್ಯ, ಸಮುದ್ರ ಸೇರಿದ ಬೆಲುಗಾ ತಿಮಿಂಗಿಲಗಳು
ಜಪಾನ್, ನವೆಂಬರ್.06: ಸಮುದ್ರ ವಾಸಿಗಳ ಬಾಹ್ಯ ಪ್ರಪಂಚದ ನಂಟು ಕಳಚಿದೆ. ತಿಂಗಳುಗಟ್ಟಲೇ ಪ್ರಕೃತಿಯ ಜೊತೆಗೆ ಹೊಂದಿಕೊಂಡಿದ್ದ ಅಪರೂಪದ ಜಾತಿಯ ತಿಮಿಂಗಲುಗಳು ಮತ್ತೆ ಸಮುದ್ರದ ಮಡಿಲು ಸೇರಿವೆ. ಇದು ಭಾರತ ಅಥವಾ ಕರ್ನಾಟಕದ ಕಥೆಯಲ್ಲ. ಜಪಾನ್ ನಲ್ಲಿ ನಡೆದಿರುವ ಅಪರೂಪದ ಘಟನೆ.
ಬೆಲುಗಾ ಜಾತಿಯ ಅಪರೂಪ ತಿಮಿಂಗಿಲಗಳನ್ನು ವಿಜ್ಞಾನಿಗಳ ತಂಡವೊಂದು ಇಂದು ಸಮುದ್ರದಲ್ಲಿ ಬಿಟ್ಟಿದೆ. ಸುಮಾರು 50ಕ್ಕೂ ಹೆಚ್ಚು ತಿಮಿಂಗಿಲಗಳನ್ನು ಎರಡು ಹಡಗುಗಳಲ್ಲಿ ತೆಗೆದುಕೊಂಡು ಹೋಗಿ ಸಮುದ್ರದ ನಿರ್ಧರಿತ ಭಾಗದಲ್ಲಿ ಬಿಡಲು ತೀರ್ಮಾನಿಸಲಾಗಿತ್ತು. 1,600 ಕೆಜಿ ತೂಕದ ಆರು ತಿಮಿಂಗಿಲಗಳನ್ನು ಕಾಗನೋವಸ್ಕಿ ಸಂಶೋಧನಾ ಹಡಗಿನ ಮೂಲಕ ಕ್ರೇನ್ ಗಳನ್ನು ಬಳಸಿ ಸಮುದ್ರಕ್ಕೆ ಬಿಡಲಾಯಿತು. 50 ಬೆಲುಗಾ ತಿಮಿಂಗಿಲಗಳ ಪೈಕಿ ಆರು ತಿಮಿಂಗಿಲಗಳನ್ನು ಸಮುದ್ರಕ್ಕೆ ಬಿಡಲಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಕಾರ್ಯಾಚರಣೆಯನ್ನು ಮುಂದೂಡಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಜೊತೆಗೆ ವಾತಾವರಣ ಸುಧಾರಣೆ ಬಳಿಕ ಕಾರ್ಯಾಚರಣೆ ಆರಂಭಿಸುವುದಾಗಿ ಹೇಳಿದ್ದಾರೆ.
ಅಕ್ರಮವಾಗಿ ಎರಡು ಹಡಗುಗಳಲ್ಲಿ ಸೆರೆ ಹಿಡಯಲಾಗಿದ್ದ ತಿಮಿಂಗಿಲಗಳನ್ನು ರಕ್ಷಣೆ ಮಾಡಿ ಇಂದು ಜಪಾನ್ ಸಮುದ್ರದಲ್ಲಿ ಬಿಡಲಾಯಿತು. ಕಳೆದ ವರ್ಷವೂ ಸಹ ಪ್ರಿಪೋರಿ ಸಮುದ್ರ ಭಾಗದಲ್ಲಿ 87 ಬೆಲುಗಾ ತಿಮಿಂಗಿಲ ಹಾಗೂ 11 ಓರ್ಕಾಸ್ ಹಾಗೂ 5 ಸಸ್ತನಿಗಳನ್ನು ಅಕ್ರಮವಾಗಿ ಸೆರೆ ಹಿಡಿಯಲಾಗಿತ್ತು. ಇದು ಪರಿಸರ ಹಾಗೂ ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿತ್ತು. ಶೈಕ್ಷಣಿಕ ಉದ್ದೇಶದಿಂದ ಈ ತಿಮಿಂಗಿಲಗಳನ್ನು ಸೆರೆ ಹಿಡಿಯುವುದಾಗಿ ಖಾಸಗಿ ಸಂಸ್ಥೆಗಳು ಹೇಳುತ್ತಿದ್ದವು. ಆದರೆ, ಸೆರೆ ಹಿಡಿದ ತಿಮಿಂಗಿಲಗಳನ್ನು ಚೀನಾದ ಅಕ್ವಾರಿಯಂ, ಹಾಗೂ ಅಮ್ಯೂಸ್ ಮೆಂಟ್ ಪಾರ್ಕ್ ಗೆ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿತ್ತು.
ಅಳಿವಿನ ಅಂಚಿನಲ್ಲಿರುವ ತಿಮಿಂಗಿಲಗಳನ್ನು ಸೆರೆ ಹಿಡಿಯದಂತೆ ಸಾರ್ವಜನಿಕ ವಲಯದಲ್ಲಿ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಿಸ್ಥಿತಿ ಸುಧಾರಣೆಗೆ ತರುವುದಾಗಿ ಭರವಸೆ ನೀಡಿದ್ದರು. ರಷ್ಯಾದ ಕಾನೂನಿನ ಪ್ರಕಾರ ತಿಮಿಂಗಿಲಗಳನ್ನು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಉದ್ದೇಶಕ್ಕಾಗಿಯೂ ಸೆರೆ ಹಿಡಿಯುವಂತಿಲ್ಲ. ಇನ್ನು, ಮಾರಾಟ ಮಾಡುವುದಂತೂ ಅಕ್ಷಮ್ಯ ಅಪರಾಧವೇ ಸರಿ. ಹೀಗಿದ್ದರೂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ, ಅಕ್ರಮವಾಗಿ ತಿಮಿಂಗಿಲಗಳನ್ನು ಸೆರೆ ಹಿಡಿಯಲಾಗುತ್ತಿದೆ. ಇನ್ನೊಂದೆಡೆ ರಷ್ಯಾ ಸರ್ಕಾರ ಇಂದಿಗೂ ಕಠಿಣ ಕಾನೂನು ಜಾರಿಗೊಳಿಸುವುದಾಗಿ ಭರವಸೆ ನೀಡುತ್ತಲೇ ಇದೆ. ಆದರೆ, ಇದುವರೆಗೂ ಯಾವುದೇ ರೀತಿಯ ಕಠಿಣ ಕಾನೂನನ್ನು ಜಾರಿಗೆ ತಂದಿಲ್ಲ.