ರಷ್ಯಾ-ಉಕ್ರೇನ್ ಯುದ್ಧದ ಕುರಿತು ಜರ್ಮನಿಯಲ್ಲಿ ಪ್ರಧಾನಿ ಮೋದಿ ಸಂದೇಶ
ಬರ್ಲಿನ್, ಮೇ 2: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಯಾವುದೇ ದೇಶವು ವಿಜಯಶಾಲಿಯಾಗುವುದಕ್ಕೆ ಸಾಧ್ಯವಿಲ್ಲ, ಏಕೆಂದರೆ ಇದರಿಂದ ಎಲ್ಲರೂ ನಷ್ಟ ಅನುಭವಿಸುತ್ತಾರೆ. ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳ ಮೇಲೂ ಇದು ಹೆಚ್ಚು ಗಂಭೀರ ಪರಿಣಾಮ ಬೀರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉಭಯ ರಾಷ್ಟ್ರಗಳ ನಡುವಿನ 6ನೇ ಅಂತರ-ಸರ್ಕಾರಿ ಸಮಾಲೋಚನೆಯ ಸಹ-ಅಧ್ಯಕ್ಷತೆಯ ನಂತರ ಸ್ಕೋಲ್ಜ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಸಂಘರ್ಷದ ಮಾನವೀಯ ಪ್ರಭಾವದ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ. ಉಕ್ರೇನ್ಗೆ ನೆರವು ನೀಡಿದೆ ಎಂದು ಹೇಳಿದರು.
"ಭಾರತ ಮತ್ತು ಜರ್ಮನಿ ನಡುವಿನ ಪಾಲುದಾರಿಕೆಯು ಜಗತ್ತಿನಲ್ಲಿ ಯಶಸ್ಸಿನ ಉದಾಹರಣೆಯಾಗಿ ಕಾರ್ಯನಿರ್ವಹಿಸುತ್ತದೆ. ಎರಡೂ ರಾಷ್ಟ್ರಗಳು ಸುಸ್ಥಿರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದು, ಅದರ ಅಡಿಯಲ್ಲಿ ಭಾರತವು 2030ರ ವೇಳೆಗೆ ಶುದ್ಧ ಇಂಧನ ಬಳಕೆಯನ್ನು ಹೆಚ್ಚಿಸಲು USD 10.5 ಶತಕೋಟಿ ಸಹಾಯವನ್ನು ಪಡೆಯುತ್ತದೆ," ಎಂದು ಹೇಳಿದರು.

ಆತ್ಮನಿರ್ಭರ್ ಭಾರತ್ ಅಭಿಯಾನದಲ್ಲಿ ಭಾಗವಹಿಸಲು ಆಹ್ವಾನ:
ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಅಂತರ್-ಸರ್ಕಾರಿ ಸಮಾಲೋಚನೆಗಳ (ಐಜಿಸಿ) ಆರನೇ ಸಮಗ್ರ ಅಧಿವೇಶನದ ಸಹ-ಅಧ್ಯಕ್ಷತೆ ವಹಿಸಿದ ಪ್ರಧಾನಿ ಮೋದಿ, ಭಾರತದ ಆತ್ಮನಿರ್ಭರ್ ಭಾರತ್' ಅಭಿಯಾನದಲ್ಲಿ ಭಾಗವಹಿಸುವಂತೆ ಜರ್ಮನಿಗೆ ಆಹ್ವಾನ ನೀಡಿದರು. ಭಾರತದ ಪ್ರಧಾನಿ ಮೋದಿ ಮತ್ತು ಜರ್ಮನ್ ಚಾನ್ಸೆಲರ್ ಅವರು ಬರ್ಲಿನ್ನಲ್ಲಿರುವ ಫೆಡರಲ್ ಚಾನ್ಸೆಲರಿಯಲ್ಲಿ ಹಸಿರು ಮತ್ತು ಸುಸ್ಥಿರ ಇಂಧನ ಪಾಲುದಾರಿಕೆಗೆ ಸಹಿ ಹಾಕಿದರು. ಭಾರತವು ಜರ್ಮನಿಯೊಂದಿಗೆ ನಡೆಸುವ ವಿಶಿಷ್ಟ ದ್ವೈವಾರ್ಷಿಕ ಸ್ವರೂಪದ ಆರನೇ ಅಂತರ-ಸರ್ಕಾರಿ ಸಮಾಲೋಚನೆ(ಐಜಿಸಿ)ಯ ನಂತರ ಈ ಒಪ್ಪಂದಕ್ಕೆ ಸಹಿ ಮಾಡಲಾಯಿತು.

ಏನಿದು ಅಂತರ-ಸರ್ಕಾರಿ ಸಮಾಲೋಚನೆ?:
ಅಂತರ-ಸರ್ಕಾರಿ ಸಮಾಲೋಚನೆ(ಐಜಿಸಿ)ಯು ಒಂದು ವಿಶಿಷ್ಟವಾದ ಕಾರ್ಯವಿಧಾನವಾಗಿದೆ. ಉಭಯ ರಾಷ್ಟ್ರಗಳ ನಾಯಕರ ಅಧ್ಯಕ್ಷತೆಯಲ್ಲಿ ಪೂರ್ಣ ಪ್ರಮಾಣದ ಅಧಿವೇಶನದಲ್ಲಿ ದ್ವಿಪಕ್ಷೀಯ ಚರ್ಚೆಯಲ್ಲಿ ತೊಡಗಲು ಎರಡೂ ಕಡೆಯ ಸಚಿವರು ಮತ್ತು ಅಧಿಕಾರಿಗಳನ್ನು ಒಟ್ಟುಗೂಡಿಸಲಾಗುತ್ತದೆ. ಕಳೆದ ಡಿಸೆಂಬರ್ 2021 ರಲ್ಲಿ ಚಾನ್ಸೆಲರ್ ಸ್ಕೋಲ್ಜ್ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಸಭೆಯಾಗಿದೆ. ಈ ಚರ್ಚೆಗಳು ಒಟ್ಟಾರೆ ಕಾರ್ಯತಂತ್ರದ ಪಾಲುದಾರಿಕೆಯ ಅಡಿಯಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಮುಖ ಕ್ಷೇತ್ರಗಳು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳನ್ನು ಒಳಗೊಂಡಿವೆ.

ಜಿ-7 ಶೃಂಗಸಭೆಗೆ ಪ್ರಧಾನಿಗೆ ಆಹ್ವಾನ:
ಇದರ ಮಧ್ಯೆ ಜೂನ್ನಲ್ಲಿ ಜರ್ಮನಿಯಲ್ಲಿ ನಡೆಯಲಿರುವ ಜಿ-7 ಶೃಂಗಸಭೆಗೆ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದಾರೆ. "ಜೂನ್ನ ಅಂತ್ಯದ G7 ಶೃಂಗಸಭೆಗೆ ನಾನು ನಿಮ್ಮನ್ನು ನಮ್ಮ ಅತಿಥಿಯಾಗಿ ಆಹ್ವಾನಿಸಿದ್ದೇನೆ ಮತ್ತು ನಿಮ್ಮನ್ನು ಜರ್ಮನಿಗೆ ಮರಳಿ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು 6ನೇ ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆಗಳ (IGC) ನಂತರ ಪಿಎಂ ಮೋದಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸ್ಕೋಲ್ಜ್ ಹೇಳಿದರು.
ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ:
ಮೂರು ದಿನಗಳ ಯುರೋಪ್ ಪ್ರವಾಸದ ಮೊದಲ ಹಂತದಲ್ಲಿ ಜರ್ಮನಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರ್ಲಿನ್ನಲ್ಲಿರುವ ಭಾರತೀಯ ವಲಸಿಗರು ಅದ್ದೂರಿ ಸ್ವಾಗತ ಕೋರಿದರು. ಮಂಗಳವಾರ ಡೆನ್ಮಾರ್ಕ್ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ನಾರ್ಡಿಕ್ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬುಧವಾರ ಪ್ಯಾರಿಸ್ನಲ್ಲಿ ವಾಸ್ಯವ್ಯ ಹೂಡಲಿದ್ದು, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಲಿದ್ದಾರೆ.












Click it and Unblock the Notifications