ಗಡುವು ವಿಸ್ತರಿಸುವ ಪ್ರಶ್ನೆಯೇ ಇಲ್ಲ; ತಾಲಿಬಾನ್
ಕಾಬೂಲ್, ಆಗಸ್ಟ್ 25: ಅಮೆರಿಕನ್ನರನ್ನು ವಾಪಸ್ ಕರೆಸಿಕೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಗಸ್ಟ್ 31ರ ಗಡುವನ್ನು ವಿಸ್ತರಿಸುವ ಆಲೋಚನೆಯಲ್ಲಿದ್ದು, ಅಂಥ ಯಾವುದೇ ವಿಸ್ತರಣೆ ಸಾಧ್ಯವಿಲ್ಲ ಎಂದು ತಾಲಿಬಾನ್ ಮತ್ತೆ ನಿರಾಕರಿಸಿದೆ.
ಎಲ್ಲಾ ವಿದೇಶಿಯರು ಆಗಸ್ಟ್ 31ರೊಳಗೆ ದೇಶ ತೊರೆಯಬೇಕು. ದೇಶ ತೊರೆಯಲು ನೀಡಲಾದ 31ರ ಗಡುವನ್ನು ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಮತ್ತೊಮ್ಮೆ ಘೋಷಿಸಿದೆ.
ಮಂಗಳವಾರ ತಾಲಿಬಾನ್ ಬಿಕ್ಕಟ್ಟಿನ ಕುರಿತು ಚರ್ಚೆಗೆ ಜಿ 7 ದೇಶಗಳು ಸಭೆ ನಡೆಸಿದ್ದು, ಮುಖಂಡರು ಗಡುವು ವಿಸ್ತರಿಸಲು ಕೋರುವ ಚಿಂತನೆ ನಡೆಸಿದ್ದರು. ಆದರೆ ಅದೇ ದಿನ, ಗಡುವು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ತಾಲಿಬಾನ್ ನುಡಿದಿದೆ.

ಕಳೆದ ಭಾನುವಾರ ತಾಲಿಬಾನ್ ಕಾಬೂಲ್ ವಶಕ್ಕೆ ಪಡೆದಿದ್ದು, ಇಡೀ ಅಫ್ಘಾನಿಸ್ತಾನವನ್ನು ಆವರಿಸಿಕೊಂಡಿದೆ. ಕಳೆದ 10 ದಿನಗಳಲ್ಲಿ ಸುಮಾರು 60 ಸಾವಿರ ಜನರನ್ನು ಅಲ್ಲಿಂದ ತೆರವು ಮಾಡಲಾಗಿದೆ. ಆದರೆ ಬೇರೆ ದೇಶಗಳ ಇನ್ನೂ ದೊಡ್ಡ ಸಂಖ್ಯೆಯ ಜನರು ಅಫ್ಘಾನಿಸ್ತಾನದಲ್ಲಿ ಉಳಿದಿದ್ದಾರೆ. ಅವರ ತೆರವಿಗೆ ಸಮಯದ ಅಗತ್ಯವಿದೆ. ಆದರೆ ಶೀಘ್ರವೇ ದೇಶ ತೊರೆಯಬೇಕು. ಗಡುವು ವಿಸ್ತರಣೆ ಸಾಧ್ಯವೇ ಇಲ್ಲ ಎಂದು ತಾಲಿಬಾನ್ ಹೇಳಿದೆ. ಹಾಗಾಗಿ ತೆರವು ಕಾರ್ಯಾಚರಣೆ ಬಿರುಸು ಪಡೆದಿದೆ.
ಇದರ ನಡುವೆ, ಗಡುವಿನ ಬಳಿಕವೂ ಅಮೆರಿಕದ ಸೇನೆ ಅಫ್ಘಾನಿಸ್ತಾನದಲ್ಲಿ ಇರಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ತೆರವು ಕಾರ್ಯಾಚರಣೆ ಅತ್ಯಂತ ಕ್ಲಿಷ್ಟಕರ ಎಂದಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ಅಮೆರಿಕನ್ನರ ಸಂಖ್ಯೆ ಬೃಹತ್ ಆಗಿದೆ. ಹಾಗಾಗಿ ನೀಡಿರುವ ಗಡುವಿನೊಳಗೆ ಎಲ್ಲರ ತೆರವು ಸಾಧ್ಯವಿಲ್ಲ ಎಂದು ಅಮೆರಿಕ ಜನಪ್ರತಿನಿಧಿ ಸಭೆಯ ಗುಪ್ತಚರ ಸಮಿತಿ ಅಧ್ಯಕ್ಷ ಆಡಂ ಶಿಫ್ ಹೇಳಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಮುದುವರೆದಿದೆ. ದೇಶಗಳು ತಮ್ಮ ಜನರನ್ನು ವಾಪಸ್ ಕರೆಸಿಕೊಳ್ಳಲು ವ್ಯವಸ್ಥೆಯನ್ನು ಮಾಡಿವೆ. ಜನರು ದೇಶ ತೊರೆದು ಹೋಗಲು ಯಾವುದೇ ತೊಂದರೆಯಿಲ್ಲ. ಭಯಪಡುವ ಅಗತ್ಯವಿಲ್ಲ. ಎಲ್ಲರು ಸುರಕ್ಷಿತವಾಗಿರುತ್ತಾರೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ತಿಳಿಸಿದ್ದಾರೆ. ಇದರೊಂದಿಗೆ ಗಡುವಿನ ಒಳಗೇ ದೇಶ ಬಿಡಬೇಕು ಎಂದು ಎಚ್ಚರಿಕೆ ಕೊಟ್ಟಂತೆ ಹೇಳಿದ್ದಾರೆ.
ಭಾರತದ ನಡೆ: ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು ಹಾಗೂ ಅಫ್ಘಾನ್ ಪಾಲುದಾರರನ್ನು ಭಾರತಕ್ಕೆ ಕರೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ "ಆಪರೇಷನ್ ದೇವಿ ಶಕ್ತಿ" ಘೋಷಿಸಲಾಗಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

"ಮಂಗಳವಾರ ದೆಹಲಿಗೆ 78 ಪ್ರಯಾಣಿಕರನ್ನು ಕರೆ ತರಲಾಗಿದೆ' ಎಂದು ವಿದೇಶಾಂಗ ವ್ಯವಹಾರ ಸಚಿವ ಜೈಶಂಕರ್ ಹೇಳಿದ್ದಾರೆ. "ಆಪ್ ದೇವಿ ಶಕ್ತಿ ಮುಂದುವರಿಸಲಾಗುತ್ತಿದೆ. ಕಾಬೂಲ್ ನಿಂದ 78 ಸ್ಥಳಾಂತರಿಸುವವರು ದುಶಾನ್ಬೆ ಮೂಲಕ ಆಗಮಿಸುತ್ತಾರೆ. ಭಾರತೀಯ ವಾಯುಸೇನೆ, ಏರ್ ಇಂಡಿಯಾ ಮತ್ತು TeMMEA ಅವಿರತ ಪ್ರಯತ್ನಕ್ಕೆ ಧನ್ಯವಾದ" ಎಂದು ಜೈಶಂಕರ್ ತಿಳಿಸಿದ್ದಾರೆ.
ಆಗಸ್ಟ್ 16ರಂದು ಕಾಬೂಲ್ ನಿಂದ ದೆಹಲಿಗೆ 40 ಭಾರತೀಯರ ಸ್ಥಳಾಂತರ ಕಾರ್ಯಾಚರಣೆಯನ್ನು ಆರಂಭಿಸಿತು. ಕಾಬೂಲ್ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ನಡುವೆ ಭಾರತ 800ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ. ವಿವಿಧ ದೇಶಗಳು ತಮ್ಮ ನಾಗರಿಕರನ್ನು ರಕ್ಷಿಸುವ ಕಾರ್ಯವನ್ನು ಬಿರುಸುಗೊಳಿಸಿವೆ.
ಎರಡು ದಶಕಗಳ ಕಾಲ ಅಮೆರಿಕ ಸೇನೆಯ ಭದ್ರತೆಯಲ್ಲಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ವಶಪಡಿಸಿಕೊಂಡಿದೆ. 10 ದಿನದಲ್ಲಿ ದೇಶದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡ ತಾಲಿಬಾನಿಗಳು ತಮ್ಮ ಕ್ರೌರ್ಯ ಪ್ರದರ್ಶಿಸುತ್ತಿದ್ದಾರೆ. ಜನರು ದೇಶ ತೊರೆಯಲು ಮುಂದಾಗಿದ್ದಾರೆ.












Click it and Unblock the Notifications