ನೇಪಾಳದ ವಿವಾದಿತ ನಕ್ಷೆಗೆ ರಾಷ್ಟ್ರಪತಿ ಬಿಧ್ಯಾ ದೇವಿ ಭಂಡಾರಿ ಅಂಕಿತ
ಕಠ್ಮಂಡು, ಜೂನ್.18: ಭಾರತದ ತೀವ್ರ ವಿರೋಧದ ನಡುವೆಯೂ ನೇಪಾಳದ ಹೊಸ ನಕ್ಷೆಗೆ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ಸಿಕ್ಕಿದ್ದು ಆಗಿದೆ. ಗುರುವಾರ ನೇಪಾಳದ ಅಧ್ಯಕ್ಷೆ ಸಂವಿಧಾನದ ತಿದ್ದುಪಡಿ ಮಸೂದೆಗೆ ಅಂಕಿತ ಹಾಕಿದ್ದಾರೆ.
Recommended Video
ಭಾರತ ಮತ್ತು ನೇಪಾಳ ಗಡಿಯಲ್ಲಿರುವ ಲಿಪುಲೇಖ್, ಕಲಪನಿ, ಹಾಗೂ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಂತೆ ನೇಪಾಳ ಚಿತ್ರಿಸಿರುವ ಹೊಸ ನಕ್ಷೆಗೆ ನೇಪಾಳ ರಾಷ್ಟ್ರಪತಿ ಬಿಧ್ಯಾ ದೇವಿ ಭಂಡಾರಿ ಅಂಕಿತ ಹಾಕುವ ಮೂಲಕ ಒಪ್ಪಿಗೆ ಸೂಚಿಸಿದ್ದಾರೆ.
ಭಾರತದ ಗಡಿಯಲ್ಲಿರುವ ಭೂಪ್ರದೇಶವನ್ನು ಒಳಗೊಂಡಂತೆ ನೇಪಾಳದ ಹೊಸ ನಕ್ಷೆಯನ್ನು ರೂಪಿಸಲಾಗಿತ್ತು. ಈ ಹೊಸ ನಕ್ಷೆಗೆ ಕಳೆದ ಜೂನ್.09ರಂದು ನೇಪಾಳ ಸಂಸತ್ ನಲ್ಲಿ ಸರ್ವಾನುಮತಗಳಿಂದ ಎಲ್ಲ ಪಕ್ಷದ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ನಂತರದಲ್ಲಿ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿ ಕೊಡಲಾಗಿತ್ತು.

ನೇಪಾಳ ಸಂಸತ್ ನಲ್ಲಿ ಹೊಸ ಮಸೂದೆ ಅಂಗೀಕಾರ
ನೇಪಾಳ ಸರ್ಕಾರವು ಸಿದ್ಧಪಡಿಸಿದ ವಿವಾದಿತ ಹೊಸ ನಕ್ಷೆಯನ್ನು ಜನಪ್ರತಿನಿಧಿಗಳ ಸದನದಲ್ಲಿ ಮಂಡಿಸಿದಾಗ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. 275 ಸದಸ್ಯಬಲದ ನೇಪಾಳ ಜನಪ್ರತಿನಿಧಿಗಳ ಸದನದಲ್ಲಿ ಒಂದು ತಿದ್ದುಪಡಿಗೆ ಅನುಮೋದನೆ ಸಿಗಬೇಕಾದಲ್ಲಿ ಶೇ.2/3ರಷ್ಟು ಒಪ್ಪಿಗೆ ಸಿಗಬೇಕು. ನೇಪಾಳಿ ಕಾಂಗ್ರೆಸ್, ರಾಷ್ಟ್ರೀಯ ಜನತಾ ಪಕ್ಷ-ನೇಪಾಳ ಮತ್ತು ರಾಷ್ಟ್ರೀಯ ಪ್ರಜಾತಂತ್ರ ಪಕ್ಷಗಳು ಸರ್ವಾನುಮತದಿಂದ ಸಂವಿಧಾನದ ತಿದ್ದುಪಡಿಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿವೆ.

ತಿದ್ದುಪಡಿ ಮಸೂದೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ
ಭಾರತದೊಂದಿಗಿನ ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಹೊಸ ರಾಜಕೀಯ ಪ್ರೇರಿತ ನಕ್ಷೆ ಅನುಮೋದಿಸಲು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪರಿಗಣಿಸುವ ಪ್ರಸ್ತಾಪವನ್ನು ನೇಪಾಳ ಸಂಸತ್ತು ಜೂನ್.09ರಂದು ಸರ್ವಾನುಮತದಿಂದ ಅಂಗೀಕರಿಸಿತು. ಇದೀಗ ತಿದ್ದುಪಡಿ ಮಸೂದೆಯನ್ನು ರಾಷ್ಟ್ರೀಯ ಶಾಸನ ಸಭೆಗೆ ಕಳುಹಿಸಲಾಗಿದೆ. ಅಲ್ಲಿ ಇದೇ ರೀತಿಯ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷವು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮೂರನೇ ಎರಡರಷ್ಟು ಬಹುಮತ ಹೊಂದಿದೆ. ಮಸೂದೆಯ ನಿಬಂಧನೆಗಳ ವಿರುದ್ಧ ಏನಾದರೂ ತಿದ್ದುಪಡಿಗಳನ್ನು ತರಲು ರಾಷ್ಟ್ರೀಯ ಅಸೆಂಬ್ಲಿ ಶಾಸಕರಿಗೆ 72 ಗಂಟೆಗಳ ಕಾಲಾವಕಾಶ ನೀಡಲಾಗಿದೆ.

ಇತಿಹಾಸ ಪರಾಮರ್ಶೆ, ಸತ್ಯಾನ್ವೇಷನೆಗೆ ಹೊಸ ತಂಡ
ಭಾರತ-ನೇಪಾಳ ನಡುವಿನ ಗಡಿ ಹಂಚಿಕೆಯ ಇತಿಹಾಸ ಹಾಗೂ ಸಾಕ್ಷ್ಯಗಳ ಪತ್ತೆ ಮಾಡುವುದಕ್ಕೆ ನೇಪಾಳ ಸರ್ಕಾರವು ಹೊಸ ತಂಡವನ್ನು ರಚಿಸಿದೆ. ಜೂನ್.10ರ ಬುಧವಾರ 9 ಸದಸ್ಯರುಳ್ಳ ವಿಶೇಷ ತಂಡವೊಂದನ್ನು ರಚನೆ ಮಾಡಲಾಗಿದೆ. ಈ ತಂಡವು ಗಡಿಗೆ ಸಂಬಂಧಿಸಿದಂತೆ ಇತಿಹಾಸದ ಅಧ್ಯಯನ ನಡೆಸಿ ಸಾಕ್ಷ್ಯ್ ಪುರಾವೆಗಳ ಸಂಗ್ರಹಕ್ಕೆ ಮುಂದಾಗಿದೆ. ಆದರೆ ರಾಜತಾಂತ್ರಿಕರು ಮತ್ತು ತಜ್ಞರು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ. ಹೊಸ ನಕ್ಷೆ ಈಗಾಗಲೇ ಬಿಡುಗಡೆಯಾಗಿದ್ದು, ಕ್ಯಾಬಿನೆಟ್ ಅನುಮೋದಿಸಿದಾಗ ಕಾರ್ಯಪಡೆ ರಚಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ಏನಿದು ನೇಪಾಳದ ಹೊಸ ನಕ್ಷೆ ವಿವಾದ?
ಲಿಪುಲೇಖ್, ಕಲಪನಿ, ಹಾಗೂ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಂತೆ ನೇಪಾಳ ಹೊಸ ಭೂನಕ್ಷೆ ಬಿಡುಗಡೆ ಮಾಡಿದೆ. ಇದಕ್ಕೆ ಭಾರತವು ವಿರೋಧ ವ್ಯಕ್ತಪಡಿಸಿತ್ತು. ಗಡಿ ವಿಚಾರವನ್ನು ರಾಜತಾಂತ್ರಿಕ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಕೂಡಾ ಹೇಳಿದ್ದರು. ಇತ್ತೀಚಿಗಷ್ಟೇ ಲಿಪುಲೇಖ್ ಪ್ರದೇಶವನ್ನು ಸಂಪರ್ಕಿಸುವ ಉತ್ತರಾಖಂಡ್ ದಾರ್ಚುಲಾ ಪ್ರದೇಶದಲ್ಲಿನ ರಸ್ತೆ ಕಾಮಗಾರಿ ಬಗ್ಗೆ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಜೊತೆಗೆ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಚರ್ಚಿಸಿದ್ದರು.












Click it and Unblock the Notifications