'ಆ ಅಪರಿಚಿತ ರಕ್ಷಣೆಗೆ ಮುಂದಾಗದಿದ್ದರೆ ಇನ್ನಷ್ಟು ಸಾವು-ನೋವಾಗ್ತಿತ್ತು'
ಕ್ರೈಸ್ಟ್ ಚರ್ಚ್ (ನ್ಯೂಜಿಲ್ಯಾಂಡ್), ಮಾರ್ಚ್ 15: ಶಂಕಿತ ಬಲಪಂಥೀಯ ಉಗ್ರವಾದಿಗಳು ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿರುವ ಎರಡು ಮಸೀದಿಯೊಳಗೆ ನುಗ್ಗಿ, ನಲವತ್ತೊಂಬತ್ತು ಮಂದಿಯನ್ನು ಶುಕ್ರವಾರ ಬಲಿ ಪಡೆದಿದ್ದಾರೆ. ಈ ದಾಳಿ ವೇಲೆ ಬಚಾವಾದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಪರಿಚಿತ ವ್ಯಕ್ತಿಯೊಬ್ಬರ ಸಾಹಸವು ಹೇಗೆ ಇನ್ನೂ ದೊಡ್ಡ ಅನಾಹುತವನ್ನು ತಪ್ಪಿಸಿತು ಎಂದು ವಿವರಿಸಿದ್ದಾರೆ.
ನ್ಯೂಜಿಲೆಂಡ್ ಮಸೀದಿ ಹತ್ಯಾಕಾಂಡ : 9 ಪ್ರಮುಖ ಸಂಗತಿಗಳು
ನಾವು ಸಣ್ಣ ಮಸೀದಿಯಲ್ಲಿ ಇದ್ದೆವು- ನೂರು ಚದರ ಮೀಟರ್ ನಷ್ಟು ಇದ್ದಿರಬಹುದು. ಕೈಯಲ್ಲಿ ಗನ್ ಹಿಡಿದ ವ್ಯಕ್ತಿ ಒಳ ಪ್ರವೇಶಿಸಿ, ಗುಂಡು ಹಾರಿಸುವುದಕ್ಕೆ ಆರಂಭಿಸಿದರೆ ಅಂಥ ಸನ್ನಿವೇಶದಲ್ಲಿ ಎದೆ ಬಡಿತ ಹೆಚ್ಚಾಗುತ್ತದೆ. ನೀವು ಏನನ್ನೂ ಯೋಚಿಸಲು ಸಹ ಆಗಲ್ಲ ಎಂದು ಫೈಸಲ್ ಸಯಿದ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ನ್ಯೂಜಿಲೆಂಡ್ ನಲ್ಲಿ ಕರಾಳ ಶುಕ್ರವಾರ : ಮಸೀದಿಯಲ್ಲಿ ರಕ್ತದೋಕುಳಿ
ಫೈಸಲ್ ಸಯಿದ್ ಅವರು ಹತ್ತು ವರ್ಷಗಳಿಂದ ನ್ಯೂಜಿಲ್ಯಾಂಡ್ ನಲ್ಲೇ ವಾಸವಿದ್ದಾರೆ. ನಾನು ಹಾಗೂ ನನ್ನ ಸ್ನೇಹಿತ ನೋಡುತ್ತಾ ಇದ್ದೆವು. ಹಿಂದಿನಿಂದ ಬಂದ ಆ ಸಜ್ಜನ ವ್ಯಕ್ತಿ ಶೂಟರ್ ನ ಕೈ ಬಲವಾಗಿ ಹಿಡಿದು, ಗನ್ ಕೆಳಗೆ ಹಾಕುವಂತೆ ಮಾಡಿದರು. ಆಗ ಶೂಟರ್ ಗೆ ಬಾಗಿಲ ಕಡೆಗೆ ಓಡುವ ಅನಿವಾರ್ಯ ಸೃಷ್ಟಿ ಆಯಿತು. ಒಂದು ವೇಳೆ ಹಾಗೆ ಅಗಿರದಿದ್ದರೆ ಇನ್ನೂ ಹಲವರು ಸಾವನ್ನಪ್ಪುತ್ತಿದ್ದರು, ನಾನು ಇಲ್ಲಿರುತ್ತಿರಲಿಲ್ಲ. ಆ ವ್ಯಕ್ತಿಗೆ ಹ್ಯಾಟ್ಸ್ ಆಫ್. ಆ ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಲು ಯತ್ನಿಸುತ್ತೇನೆ ಎಂದಿದ್ದಾರೆ.
ಈ ಘಟನೆಯಿಂದ ನ್ಯೂಜಿಲ್ಯಾಂಡ್ ದೇಶದ ಬಗ್ಗೆ ನನಗೆ ಯಾವುದೇ ಕೆಟ್ಟ ಭಾವನೆ ಮೂಡಿಲ್ಲ. ನಾನು ಬೇರೆಯವರ ಅಭಿಪ್ರಾಯದ ಬಗ್ಗೆ ಮಾತನಾಡಲ್ಲ. ಆದರೆ ನಾನು ಈ ಸುಂದರವಾದ ದೇಶದಲ್ಲಿ ಹತ್ತು ವರ್ಷದಿಂದ ಇದ್ದೀನಿ. ನನ್ನ ಪ್ರೀತಿಪಾತ್ರರು, ಕುಟುಂಬ ಅಥವಾ ನನ್ನ ಸಮುದಾಯದವರು ಯಾವುದೇ ಸವಾಲು ಎದುರಿಸಿರುವುದು ನಾನು ನೋಡಿಲ್ಲ. ಒಂದು ಘಟನೆಯಿಂದ ನಾನು ಯಾವುದೇ ತೀರ್ಪು ಹೇಳಲಾರೆ ಎಂದಿದ್ದಾರೆ.
ನ್ಯೂಜಿಲೆಂಡ್ ನಲ್ಲಿ ರಕ್ತದೋಕುಳಿ : ಮಹಿಳೆ ಸೇರಿ ನಾಲ್ವರು ವಶಕ್ಕೆ
ಈ ದೇಶ ಬಿಟ್ಟು ಹೋಗುವ ಯಾವ ಆಲೋಚನೆ ನನಗಿಲ್ಲ. ನನ್ನ ಸುತ್ತಮುತ್ತ ಪ್ರೀತಿಸುವ ಜನರಿದ್ದಾರೆ. ಕ್ಷೇಮವಾಗಿದ್ದೀನಾ ಎಂದು ವಿಚಾರಿಸಿ, ನ್ಯೂಜಿಲ್ಯಾಂಡ್ ನ ಹಲವು ಪರಿಚಿತ ಸ್ಥಳೀಯರು ಸಂದೇಶ ಕಳುಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸಯೀದ್ ನ ಒಬ್ಬ ಸ್ನೇಹಿತರು ಗಾಯದಿಂದ ಮೃತಪಟ್ಟಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲಿದ್ದಾರೆ.