ಮಹಾತ್ಮ ಗಾಂಧೀಜಿ ಮರಿಮೊಮ್ಮಗ ಸತೀಶ್ ಧುಪಾಲಿಯಾ ವಿಧಿವಶ
ಜೋಹಾನ್ಸ್ ಬರ್ಗ್, ನವೆಂಬರ್.23: ಭಾರತದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮಗ ಸತೀಶ್ ಧುಪಾಲಿಯಾ ಅವರು ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಮೂರು ದಿನಗಳ ಹಿಂದೆಯಷ್ಟೇ 66ನೇ ಜನ್ಮ ದಿನಾಚರಣೆ ಆಚರಿಸಿಕೊಂಡಿದ್ದ ಸತೀಶ್ ಧುಪಾಲಿಯಾರಿಗೆ ಕೊವಿಡ್-19 ಸೋಂಕು ತಗುಲಿದ್ದು, ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಕೊರೊನಾವೈರಸ್ ಸೋಂಕಿನಿಂದಲೇ ಸತೀಶ್ ಧುಪಾಲಿಯಾ ಮೃತಪಟ್ಟಿರುವ ಬಗ್ಗೆ ಅವರ ಸಹೋದರಿ ಉಮಾ ಧುಪಾಲಿಯಾ ಮೇಸ್ತ್ರಿ ದೃಢಪಟ್ಟಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಇದೇ ಸತೀಶ್ ಧುಪಾಲಿಯಾ ಅವರು ನಿಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿಸಿದ್ದಾರೆ.
"ಕಳೆದ ಒಂದು ತಿಂಗಳಿನಿಂದಲೂ ನಿಮೋನಿಯಾದಿಂದ ಬಳಲುತ್ತಿದ್ದ ನನ್ನ ಪ್ರೀತಿಯ ಸಹೋದರ ಮೃತಪಟ್ಟಿದ್ದಾರೆ. ಇತ್ತೀಚಿಗೆ ಅವರಲ್ಲಿ ಕೊವಿಡ್-19 ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಈ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಸಹೋದರ ಸತೀಶ್ ಧುಪಾಲಿಯಾ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ" ಎಂದು ಉಮಾ ಧುಪಾಲಿಯಾ ಮೇಸ್ತ್ರಿ ಹೇಳಿದ್ದಾರೆ.

ಗಾಂಧಿ ಗೌರವಾರ್ಥ ಯೋಜನೆಗಳಲ್ಲಿ ಕೆಲಸ:
ಮಹಾತ್ಮ ಗಾಂಧೀಜಿ ಮರಿ ಮೊಮ್ಮಕ್ಕಳಾದ ಉಮಾ ಧುಪಾಲಿಯಾ ಮತ್ತು ಸತೀಶ್ ಧುಪಾಲಿಯಾ ಅವರು ತಮ್ಮ ಮತ್ತೊಬ್ಬ ಸಹೋದರಿ ಕೀರ್ತಿ ಧುಪಾಲಿಯಾರನ್ನು ಜೋಹಾನ್ಸ್ ಬರ್ಗ್ ನಲ್ಲಿ ಬಿಟ್ಟಿದ್ದರು. ಕೀರ್ತಿ ಧುಪಾಲಿಯಾ ಅವರು ಮಹಾತ್ಮ ಗಾಂಧೀಜಿಯವರ ಗೌರವಾರ್ಥವಾಗಿ ನಡೆದಿರುವ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಸತೀಶ್ ಧುಪಾಲಿಯಾ ಅವರು ಮಾಧ್ಯಮ ಲೋಕದಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಹಾತ್ಮ ಗಾಂಧೀಜಿ ಅಭಿವೃದ್ಧಿ ಟ್ರಸ್ಟ್ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಅವರು ಉತ್ತಮ ವಿಡಿಯೋ ಗ್ರಾಫರ್ ಎನಿಸಿದ್ದರು. ಸಾಮಾಜಿಕ ಕಲ್ಯಾಣ ಸಂಸ್ಥೆಗಳು ಮತ್ತು ಸಮುದಾಗಳ ಅಭಿವೃದ್ಧಿ ಕಾರ್ಯಗಳಲ್ಲಿ ಸತೀಶ್ ಧುಪಾಲಿಯಾ ಅವರು ಕಾರ್ಯ ನಿರ್ವಹಿಸುತ್ತಿದ್ದರು.












Click it and Unblock the Notifications