ಭಾರತೀಯ ವಿದ್ಯಾರ್ಥಿಗಳು ಬ್ರಿಟನ್ ಗೆ ಮಾತ್ರ ಹೋಗುತ್ತಿಲ್ಲ: ದಿನೇಶ್ ಪಟ್ನಾಯಕ್
ಲಂಡನ್, ಜೂನ್ 21: ಎರಡನೇ ದಿನದ 5ನೇ ಯುಕೆ-ಇಂಡಿಯಾ ಲೀಡರ್ ಶಿಪ್ ಕಾನ್ಕ್ಲೇವ್ ಇಲ್ಲಿನ ಬಕಿಂಗ್ ಹ್ಯಾಮ್ ಶೈರ್ ನಲ್ಲಿ ನಡೆಯುತ್ತಿದೆ. ಇಂದು 'ಯುವ ಸಬಲೀಕರಣಕ್ಕಿರುವ ಸವಾಲುಗಳು ಮತ್ತು ದ್ವಿಪಕ್ಷೀಯ ಸಂಬಂಧ ವೃದ್ಧಿ ಮತ್ತು ಉತ್ತಮ ಸಾಂಸ್ಕೃತಿಕ ತಿಳುವಳಿಕೆಯನ್ನು ಉತ್ತೇಜಿಸಲು ಎರಡೂ ದೇಶಗಳ ಯುವ ನಾಯಕರು ಹೇಗೆ ಸಹಾಯ ಮಾಡಬಹುದು,' ಎಂಬ ವಿಚಾರದ ಬಗ್ಗೆ ಪ್ಯಾನಲ್ ಚರ್ಚೆ ನಡೆಯಿತು.
ಇದರಲ್ಲಿ ಮಾತನಾಡಿದ ಓಲಾ ಸಂಸ್ಥೆಯ ಸ್ಟ್ರಾಟೆಜಿಕ್ ಇನಿಶಿಯೇಟಿವ್ ಮುಖ್ಯಸ್ಥ ಆನಂದ್ ಶಾ, "ನಿಮ್ಮ ಅನುಭವದ ಮೇಲೆ ನಿಮ್ಮನ್ನು ನೀವು ಗುರುತಿಸಿಕೊಳ್ಳಬೇಕು. ಇದು ನಮಗೆ ಮುನ್ನಡೆಯಲು ಶಕ್ತಿ ನೀಡುತ್ತದೆ. ನಾವು ಯಾವ ವೃತ್ತಿಯಲ್ಲಿದ್ದೇವೆ ಎಂಬುದು ಮುಖ್ಯವಲ್ಲ. ನಾವು ಯಾವ ದೇಶದಲ್ಲಿ ನೆಲೆ ನಿಂತಿದ್ದೇವೆ ಮತ್ತು ನಾವು ಯಾವ ದೇಶದಿಂದ ಬಂದಿದ್ದೇವೆ, ಇವೆರಡರ ಬಗ್ಗೆಯೂ ನಮಗೆ ಪ್ರೀತಿ ಇರಬೇಕು," ಎಂದರು.
ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, "ಈ ಜಗತ್ತಿನಲ್ಲಿ ನೀವು ನಿಮ್ಮಹೆಜ್ಜೆ ಗುರುತುಗಳ ಆಸ್ತಿಯನ್ನು ಬಿಟ್ಟುಬಿಡಬಹುದು. ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ಗುರುತನ್ನು ಪ್ರತಿನಿಧಿಸುತ್ತಾರೆ. ಅರ್ಧ ಬ್ರಿಟನ್, ಅರ್ಧ ಭಾರತೀಯ," ಎಂದರು.

35 ವರ್ಷದೊಳಗಿನ ಯುವ ಉದ್ಯಮಿಗಳು, ವೃತ್ತಿಪರರು ಮತ್ತು ಸಾರ್ವಜನಿಕ ವಲಯದ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಕಾಂಬೋಡಿಯಾ ದೇಶದ ಭಾರತ ರಾಯಭಾರಿ ದಿನೇಶ್ ಕೆ ಪಟ್ನಾಯಕ್, "ಅನಿವಾಸಿ ಭಾರತೀಯರು ಒಂದೇ ಸ್ವರದಲ್ಲಿ ಮಾತನಾಡಬೇಕಿದ್ದು, ಚಟುವಟಿಕೆಯಿಂದ ಇರಬೇಕಿದೆ. ನಮ್ಮ ನಡುವೆ ಇರುವ ರಾಜಕೀಯ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು," ಎಂದು ತಿಳಿಸಿದರು.
ಯುಕೆ ಇಂಡಿಯಾ ಕಾನ್ಕ್ಲೇವ್ ನಲ್ಲಿ ಟೆಕ್ ಎಕ್ಸ್ ಚೇಂಜ್ ಗೆ ಚಾಲನೆ ನೀಡಲಾಗಿದ್ದು ಎರಡೂ ದೇಶಗಳ ಸ್ಟಾರ್ಟ್ ಅಪ್ ಗಳಿಗೆ ಸಹಾಯವಾಗಲಿದೆ. ಆಕ್ಸೆಸ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಈಗಾಗಲೇ ಭಾರತದಲ್ಲಿ ಹೂಡಿಕೆ ಮಾಡಲು 25 ಬ್ರಿಟನ್ ಕಂಪನಿಗಳು ಸಿದ್ದವಾಗಿವೆ ಎಂದರು.
ಭಾರತೀಯ ರಾಜಕೀಯ ಪಕ್ಷದ ಸದಸ್ಯರ ಜೊತೆಗೆ ಮಾತನಾಡಿದ ಅವರು, ಭಾರತೀಯ ವಿದ್ಯಾರ್ಥಿಗಳು ಎಲ್ಲಾ ದೇಶಗಳಿಗೆ ಹೋಗುತ್ತಾರೆ ಆದರೆ ಬ್ರಿಟನ್ ಗೆ ಮಾತ್ರ ಹೋಗುತ್ತಿಲ್ಲ ಎಂದರಲ್ಲದೆ, ದೇಶ ದೇಶಗಳ ನಡುವೆ ಸುಲಭವಾಗಿ ಜನ ಸಂಚಾರ ಇರುವಂತಾಗಬೇಕು ಎಂದರು.
ಭಾರತೀಯರಾದರೂ ಬ್ರಿಟನ್ ಗೆ ಹೋಗುತ್ತಾರೆ. ಆದರೆ ಬ್ರಿಟನ್ ನಿಂದ ಭಾರತಕ್ಕೆ ಯಾರೂ ಬರುತ್ತಿಲ್ಲ ಎಂದು ದಿನೇಶ್ ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಇಂಡಿಯಾ ಇನ್ ಕಾರ್ಪ್ ಸಿಇಒ ಮನೋಜ್ ಲಡ್ವಾ,
ಬ್ರಿಟನ್ ರಫ್ತುಗಳ ಬಗ್ಗೆಯೂ ಭಾರತ ಆಸಕ್ತಿ ಹೊಂದಿದೆ. ಇದೇ ಈ ಕಾನ್ಕ್ಲೇವ್ ನ ಪ್ರಮುಖ ಅಂಶವಾಗಿದೆ. ಬ್ರಿಟಿಷ್ ಏಷ್ಯಾ ಟ್ರಸ್ಟ್ ಮೂಲಕ ಇದೀಗ ಜನರು ಒಗ್ಗಟ್ಟಾಗುತ್ತಿದ್ದಾರೆ ಎಂದು ತಿಳಿಸಿದರು.
"ನಾವು ಕಾನ್ಕ್ಲೇವ್ ನಲ್ಲಿ ಸ್ಪಷ್ಟವಾದ ಘೋಷಣೆಯನ್ನು ಮಾಡಿದ್ದೇವೆ, ಅದೇನೆಂದರೆ ಭಾರತೀಯರು ಉದ್ಯೋಗ ಸೃಷ್ಟಿಕರ್ತರೇ ಹೊರತು ಉದ್ಯೋಗ ಬಯಸುವವರಲ್ಲ. ಇವತ್ತು ಯುಕೆ-ಇಂಡಿಯಾ ಸಂಬಂಧದ ಭವಿಷ್ಯವನ್ನು ನೋಡುತ್ತಿದ್ದೇವೆ," ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications