ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಹಡಗಿನ ಭಾರತೀಯ ಸಿಬ್ಬಂದಿಗೆ ಕಾನೂನು ಸಮಸ್ಯೆ ಭೀತಿ
ಕೈರೋ, ಏಪ್ರಿಲ್ 1: ಜಗತ್ತಿನಾದ್ಯಂತ ಸದ್ದು ಮಾಡಿದ್ದ ಸುಯೆಜ್ ಕಾಲುವೆಯಲ್ಲಿ ಹಡಗು ಸಿಲುಕಿಕೊಂಡಿದ್ದ ಪ್ರಕರಣ ಸಂಪೂರ್ಣವಾಗಿ ಬಗೆಹರಿಸಲು ಹಲವು ತಿಂಗಳು ಬೇಕಾಗಬಹುದು ಎನ್ನಲಾಗಿದೆ. 'ಎವರ್ ಗ್ರೀನ್' ಹಡಗಿನಲ್ಲಿದ್ದ ಎಲ್ಲ 25 ಸಿಬ್ಬಂದಿ ಭಾರತೀಯರಾಗಿದ್ದು, ಎಲ್ಲರ ಆರೋಗ್ಯವೂ ಚೆನ್ನಾಗಿದೆ. ಹೀಗಾಗಿ ಅವರನ್ನು ಸದ್ಯಕ್ಕೆ ಬದಲಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 23ರಂದು ಸರಕು ಸಾಗಣೆ ಹಡಗು ಎವರ್ ಗ್ರೀನ್ ಸುಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡ ಸಂದರ್ಭದಿಂದಲೂ ಅದರೊಳಗೆ ಇದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಆದರೆ ಈ ಸಿಬ್ಬಂದಿ ಅಪರಾಧ ಪ್ರಕರಣ ಸೇರಿದಂತೆ ವಿವಿಧ ಕಾನೂನಾತ್ಮಕ ಕ್ರಮಗಳನ್ನು ಎದುರಿಸುವ ಸಾಧ್ಯತೆ ಇದೆ ಎಂಬ ಆತಂಕ ಭಾರತ ಸರ್ಕಾರ ಹಾಗೂ ಸಾಗರ ವ್ಯವಹಾರದ ವಿವಿಧ ಸಂಘಟನೆಗಳಲ್ಲಿ ಉಂಟಾಗಿದೆ.
ಈ ಘಟನೆ ನಡೆಯಲು ಕಾರಣದ ತನಿಖೆ ಪೂರ್ಣಗೊಳ್ಳುವವರೆಗೂ ಭಾರತದ ಈ ಸಿಬ್ಬಂದಿಯನ್ನು ಗೃಹಬಂಧನದಲ್ಲಿ ಇರಿಸುವ ಸಾಧ್ಯತೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪ್ರಾಕೃತಿಕ ಸಮಸ್ಯೆ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದ್ದರೂ, ಸಿಬ್ಬಂದಿಯನ್ನು ಹರಕೆ ಕುರಿಯಂತೆ ಈ ಪ್ರಕರಣದಲ್ಲಿ ಸಿಲುಕಿಸುವ ಸಂಭವವೂ ಇದೆ ಎನ್ನಲಾಗಿದೆ.

'ಎವರ್ ಗ್ರೀನ್' ಹಡಗನ್ನು ನಿರ್ವಹಿಸುತ್ತಿರುವ ಜರ್ಮನ್ ಕಂಪೆನಿ ಬರ್ನ್ಹಾರ್ಡ್ ಶಲ್ಟ್ ಶಿಪ್ ಮ್ಯಾನೇಜ್ಮೆಂಟ್ (ಬಿಎಸ್ಎಂ), 'ಸಿಬ್ಬಂದಿ ಸುರಕ್ಷಿತ ಮತ್ತು ಆರೋಗ್ಯವಂತರಾಗಿದ್ದಾರೆ. ಅವರ ಕಠಿಣ ಶ್ರಮ ಮತ್ತು ದಣಿವರಿಯದ ವೃತ್ತಿಪರತೆಯನ್ನು ಶ್ಲಾಘಿಸಲಾಗುತ್ತಿದೆ' ಎಂದು ಹೇಳಿದೆ. ಆದರ ಹಡಗಿನ ಸಿಬ್ಬಂದಿ ಕಾನೂನಾತ್ಮಕ ಸಮಸ್ಯೆಗಳನ್ನು ಎದುರಿಸಲಿದ್ದಾರೆಯೇ ಎಂಬ ಬಗ್ಗೆ ಅದು ವಿವರಣೆ ನೀಡಿಲ್ಲ.












Click it and Unblock the Notifications