ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆಯೇ ಮಾಸ್ಕೋಗೆ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್
ಮಾಸ್ಕೋ, ಅಕ್ಟೋಬರ್ 27: ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ತೈಲ ಬೆಲೆಗಳ ಏರಿಳಿತವು ಆರ್ಥಿಕ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿದೆ. ಇನ್ನೊಂದು ಮಗ್ಗಲಿನಲ್ಲಿ ಕೊಳಕು ಬಾಂಬ್ ದಾಳಿ ಹಾಗೂ ಪರಮಾಣು ದಾಳಿಯ ಕಳವಳದ ನಡುವೆ ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾಸ್ಕೋಗೆೆ ಭೇಟಿ ನೀಡಲಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ನವೆಂಬರ್ 8ರಂದು ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಘೋಷಣೆ ಮಾಡಿರುವ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಾಖರೋವಾ, ದ್ವಿಪಕ್ಷೀಯ ಸಂಬಂಧ ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ.
ಉಕ್ರೇನ್ ಮೂಲಕ ಕೊಳಕು ಬಾಂಬ್ ಭೀತಿ; ರಾಜನಾಥ್ ಸಿಂಗ್ ಜೊತೆ ಶೋಯಿಗು ಚರ್ಚೆ
ರಷ್ಯಾದ ತೈಲ ಬೆಲೆಗಳ ಮೇಲಿನ ನಿರ್ಬಂಧದ ಭಾಗವಾಗಿ ಪಾಶ್ಚಿಮಾತ್ಯ ಮಿತಿಯನ್ನು ವಿಧಿಸಲಾಗಿದೆ. ಈ ನಿಯಮಗಳು ಡಿಸೆಂಬರ್ನಲ್ಲಿ ಜಾರಿಗೆ ಬರುತ್ತದೆ. G7 ರಾಷ್ಟ್ರಗಳ ಗುಂಪು ಬೆಲೆಯ ಮಿತಿಯಲ್ಲಿ ತೈಲವನ್ನು ಪಡೆಯುವುದು ಎಂದರೆ G7 ಜೊತೆಗೆ ಪಕ್ಷಪಾತ ಮಾಡದಿರುವುದೇ ಆಗಿದೆ.
ವಿಶ್ವಸಂಸ್ಥೆಯಲ್ಲಿ ರಷ್ಯಾ ವಿಚಾರವಾಗಿ ಭಾರತದ ತಟಸ್ಥ ನೀತಿ
ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತಡದ ಹೊರತಾಗಿಯೂ ರಷ್ಯಾ ವಿರುದ್ಧದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಮುಖ ನಿರ್ಣಯಗಳಲ್ಲಿ ಭಾರತವು ಮತದಾನದಿಂದ ದೂರ ಉಳಿಯಿತು. ಕಳೆದ ತಿಂಗಳು ಸಮರ್ಕಂಡ್ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ್ದರು. ಈ ಸಭೆಯಲ್ಲಿ "ಇದು ಯುದ್ಧದ ಯುಗವಲ್ಲ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಹೇಳಿಕೆಯನ್ನು ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಸಾರ್ವಜನಿಕ ಬೆಂಬಲಿಸಿದ್ದವು.
ಕೀವ್ ವಿರುದ್ಧ ಕೊಳಕು ಬಾಂಬ್ ಆರೋಪ ಹೊರಿಸಿದ್ದ ಮಾಸ್ಕೋ
ಕೀವ್ ವಿಕಿರಣಶೀಲ ಕೊಳಕು ಬಾಂಬ್ ಅನ್ನು ಬಳಸಲು ಯೋಜಿಸಿದೆ ಎಂದು ಮಾಸ್ಕೋ ಆರೋಪಿಸಿದ ನಂತರ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉಕ್ರೇನ್ ಯುದ್ಧದಲ್ಲಿ ಯಾವುದೇ ಕಡೆಯಿಂದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಾರದು ಎಂದು ರಷ್ಯಾದ ಸಹವರ್ತಿ ಸೆರ್ಗೆಯ್ ಶೋಯಿಗು ಅವರಿಗೆ ತಿಳಿಸಿದ್ದರು.
ರಷ್ಯಾದ ರಕ್ಷಣಾ ಸಚಿವ ಸೆರ್ಗೆ ಶೋಯಿಗು ಬುಧವಾರ ತಮ್ಮ ಭಾರತೀಯ ಸಹವರ್ತಿ ರಾಜನಾಥ್ ಸಿಂಗ್ ಜೊತೆ ದೂರವಾಣಿ ಕರೆಯಲ್ಲಿ ಚರ್ಚೆ ನಡೆಸಿದರು. ಉಕ್ರೇನ್ನಿಂದ "ಕೊಳಕು ಬಾಂಬ್" ಅನ್ನು ಬಳಸುವ ಸಾಧ್ಯತೆಯ ಬಗ್ಗೆ ರಷ್ಯಾದ ಕಳವಳ ವ್ಯಕ್ತಪಡಿಸಿದ್ದು, ಈ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ನವದೆಹಲಿಯಲ್ಲಿ ಇರುವ ರಷ್ಯಾದ ರಾಯಭಾರ ಕಚೇರಿ ಟ್ವೀಟ್ ಮಾಡಿತ್ತು.
ನ್ಯಾಟೋ ದೇಶಗಳೊಂದಿಗೆ ಶೋಯಿಗು ಫೋನ್ ಕರೆ
ನ್ಯಾಟೋ ರಾಷ್ಟ್ರ ರಕ್ಷಣಾ ಸಚಿವರೊಂದಿಗೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಷ್ಯಾದ ಸಚಿವ ಶೋಯಿಗು ಭಾನುವಾರದಿಂದ ಹಲವಾರು ಫೋನ್ ಕರೆಗಳನ್ನು ಮಾಡಿದ್ದರು. ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಉಕ್ರೇನ್ ವಿಕಿರಣಶೀಲ "ಕೊಳಕು ಬಾಂಬ್" ಅನ್ನು ಬಳಸಲು ತಯಾರಿ ನಡೆಸುತ್ತಿದೆ ಎಂಬ ರಷ್ಯಾದ ಆರೋಪ ತಿರಸ್ಕರಿಸಿದೆ. ಮಾಸ್ಕೋ ಯುದ್ಧದಲ್ಲಿ ಮತ್ತಷ್ಟು ಉಲ್ಬಣಗೊಳ್ಳಲು ನೆಪವಾಗಿ ಇದನ್ನು ಬಳಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಭಾರತದಿಂದ ಪರಮಾಣು ಬಾಂಬ್ ಬಳಕೆಗೆ ವಿರೋಧ
ಉಕ್ರೇನ್-ರಷ್ಯಾ ನಡುವಿನ ಸಂಘರ್ಷದ ಆರಂಭಿಕ ಪರಿಹಾರಕ್ಕಾಗಿ ಮಾತುಕತೆ ನಡೆಸುವುದು. ರಾಜತಾಂತ್ರಿಕತೆಯ ಹಾದಿಯನ್ನು ಅನುಸರಿಸುವ ಅಗತ್ಯತೆಯ ಬಗ್ಗೆ ರಾಜನಾಥ್ ಸಿಂಗ್ ಭಾರತದ ನಿಲುವನ್ನು ಪುನರುಚ್ಚರಿಸಿದರು ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. "ಪರಮಾಣು ಅಥವಾ ವಿಕಿರಣ ಶಸ್ತ್ರಾಸ್ತ್ರಗಳ ಬಳಕೆ ನಿರೀಕ್ಷೆಯು ಮಾನವೀಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಪರಮಾಣು ಆಯ್ಕೆಯನ್ನು ಯಾವುದೇ ಕಡೆಯಿಂದ ಆಶ್ರಯಿಸಬಾರದು ಎಂದು ರಾಜನಾಥ್ ಸಿಂಗ್ ಸೂಚಿಸಿದರು," ಎಂದು ಅದು ಹೇಳಿದೆ.