ಚಿತ್ರಸುದ್ದಿ : ಏಕೋ ಈ ಕೋಪ ಶಂಕರ, ಶಿವಶಂಕರ
ಕಠ್ಮಂಡು, ಏ. 25 : ಭೂಮಿತಾಯಿಗೆ ಅದೇನು ಮುನಿಸು ಬಂದಿತ್ತೋ... ಅಥವಾ ಹಿಮಾಲಯವಾಸಿ ಶಿವನೇ ರುದ್ರತಾಂಡವ ಆರಂಭಿಸಿದನೋ... ನೇಪಾಳದ ಭೂಮಿಯಾಳದಲ್ಲಿ ಮೈಯನ್ನು ನಡುಗಿಸಿದ್ದಕ್ಕೆ ಸಾವಿರಾರು ಕಟ್ಟಡಗಳು ನೆಲಸಮವಾಗಿವೆ, ನೂರಾರು ಜೀವಗಳು ಬಲಿಯಾಗಿವೆ, ಹಿಮಾಲಯದ ತಪ್ಪಲಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.
ನೇಪಾಳದಲ್ಲಿ ನೂರಾರು ಐತಿಹಾಸಿಕ ದೇಗುಲಗಳು, ಕಟ್ಟಡಗಳು ಉರುಳಿವೆ, ಅವುಗಳಡಿಯಲ್ಲಿ ಸಾವಿರಾರು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪ್ರವಾಸಕ್ಕೆಂದು ತೆರಳಿದ್ದ 85ಕ್ಕೂ ಹೆಚ್ಚು ಕನ್ನಡಿಗರು ಕೂಡ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. [ನೇಪಾಳದಲ್ಲಿ ಕನ್ನಡಿಗರು ಸಂಕಷ್ಟದಲ್ಲಿ]
ಭೂಕಂಪನ ನೇಪಾಳದಲ್ಲಿ ಮಾತ್ರವಲ್ಲ, ಭಾರತದಲ್ಲಿಯೂ ಸಂಭವಿಸಿದೆ. ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಸಿಕ್ಕಿಂ, ದೆಹಲಿಗಳಲ್ಲಿ ಕಟ್ಟಡಗಳು ಬಿರುಕು ಬಿಟ್ಟಿವೆ, ಹಲವಾರು ಮನೆಗಳು ಧರೆಗುರುಳಿವೆ. ಇದರ ಪರಿಣಾಮ ಇಪ್ಪತ್ತಕ್ಕೂ ಹೆಚ್ಚು ಜನರು ಬಲಿಯಾದ ವರದಿ ಬಂದಿದೆ. [ನೇಪಾಳ, ಭಾರತ ಭೂಕಂಪ ಪೀಡಿತರಿಗೆ ಸಹಾಯವಾಣಿ]
ಈ ನಡುವೆ, ನೇಪಾಳದ ರಾಜಧಾನಿ ಹೆಚ್ಚು ಹಾನಿಗೊಳಗಾಗಿದ್ದು, ರಸ್ತೆರಸ್ತೆಗಳಲ್ಲಿಯೇ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಟ್ಟಡಗಳು ನಾಮಾವಶೇಷವಾಗಿದ್ದು, ಗಾಯಾಳುಗಳು ನೋವಿನಿಂದ ಚೀತ್ಕರಿಸುತ್ತಿರುವ ಚಿತ್ರಗಳು ನಿಜಕ್ಕೂ ಭೀತಿ ಹುಟ್ಟಿಸುವಂತಿವೆ. [ಭೂಕಂಪದ ಟ್ವಿಟ್ಟರ್ ಚಿತ್ರಗಳು] [ಪಿಟಿಐ ಚಿತ್ರಗಳು]

ಗಾಯಾಳುಗಳಿಗೆ ರಸ್ತೆಯಲ್ಲಿಯೇ ಚಿಕಿತ್ಸೆ
ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದರೂ ಪಾರಾದ ಗಾಯಾಳುಗಳಿಗೆ ರಸ್ತೆರಸ್ತೆಯಲ್ಲಿಯೇ ತ್ವರಿತ ಚಿಕಿತ್ಸೆ ನೀಡಲಾಗುತ್ತಿದೆ.

ಆತಂಕದಿಂದ ಓಡೋಡಿ ಬಂದ ಉದ್ಯೋಗಿಗಳು
ಇದು ಕೋಲ್ಕತಾದ ದೃಶ್ಯ. ಪ್ರಬಲ ಭೂಕಂಪನ ಸಂಭವಿಸುತ್ತಿದ್ದಂತೆ ಉದ್ಯೋಗಿಗಳು ಹೊರಗೆ ಓಡೋಡಿ ಬಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು ಐವರು ಮೃತಪಟ್ಟಿರುವ ಸುದ್ದಿ ಬಂದಿದೆ.

ಜೀವ ಉಳಿದರೆ ಸಾಕಪ್ಪಾ ಸಾಕು
ನೇಪಾಳದಲ್ಲಿ ಭೂಕಂಪದ ಕೇಂದ್ರಬಿಂದುವಿದ್ದರೂ ಭಾರತದ ಅನೇಕ ರಾಜ್ಯಗಳಲ್ಲಿ ಭೂಮಿ ಪ್ರಬಲವಾಗಿ ಕಂಪಿಸಿದೆ. ಕೋಲ್ಕತಾದಲ್ಲಿ ಜನರು ಆತಂಕದಿಂದ ನೋಡುತ್ತಿರುವ ದೃಶ್ಯ.

ರಸ್ತೆಗಳಲ್ಲಿ ನರಳಾಟದ ಕರುಣಾಜನಕ ದೃಶ್ಯ
ನೇಪಾಳದಲ್ಲಿ ಸಂಜೆ 4ರ ಹೊತ್ತಿಗೆ 150ಕ್ಕೂ ಹೆಚ್ಚು ಜನರು ಸತ್ತ ವರದಿ ಬಂದಿದೆ. ಕಠ್ಮಂಡುವಿನ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ತುಳುಕುತ್ತಿವೆ. ಉಳಿದವರಿಗೆ ರಸ್ತೆಯಲ್ಲೇ ಪ್ರಾಥಮಿಕ ಚಿಕಿತ್ಸೆ.

ಎರಡು ನಿಮಿಷ ಸತತ ನಡುಗಿದ ಭೂಮಿ
ಕಠ್ಮಂಡುವಿನ ಎಲ್ಲೆಡೆಯಲ್ಲಿ ಇದೇ ದೃಶ್ಯ. ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದೆಲ್ಲ ಸರಿಹೋಗಲು ಇನ್ನೆಷ್ಟು ವರ್ಷಗಳು ಬೇಕೋ?

ಮತ್ತೆ ಮತ್ತೆ ಕಂಪಿಸುತ್ತಿರುವ ಭೂಮಿ
ಪ್ರಬಲ ಭೂಕಂಪ ಸಂಭವಿಸಿದ ನಂತರ ಹಲವಾರು ಮತ್ತೆ ಭೂಮಿ ಕಂಪಿಸಿದೆ. ರಸ್ತೆ ಸಂಚಾರ ಸಂಪೂರ್ಣ ತಾಳತಪ್ಪಿದೆ. ಜನಜೀವನ ನಿಂತ ನೀರಾಗಿದೆ.

ಜಾರಬಂಡಿಯಾಗಿರುವ ಕಠ್ಮಂಡು ರಸ್ತೆಗಳು
ಶತಮಾನದ ಭೀಕರ ಭೂಕಂಪ ನೇಪಾಳದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ರಸ್ತೆಗಳು ಅಗಲವಾಗಿ ಬಾಯಿ ತೆರೆದುಕೊಂಡಿರುವುದು ಈ ಭೀಕರತೆಗೆ ಕನ್ನಡಿ ಹಿಡಿದಿವೆ.

ನೇಪಾಳದಲ್ಲಿ ನಷ್ಟ ಅಸದಳ
ಪ್ರಾಣಹಾನಿ ಮಾತ್ರವಲ್ಲ ಆಸ್ತಿಪಾಸ್ತಿಗೆ ನೇಪಾಳದಲ್ಲಿ ಭಾರೀ ಹಾನಿ ಸಂಭವಿಸಿದೆ. ಒಟ್ಟಾರೆ ನಷ್ಟವೆಷ್ಟು? ಲೆಕ್ಕ ಹಾಕಲು ಇನ್ನೂ ಸಮಯ ಬೇಕು.

ಪ್ರಕೃತಿ ವಿಕೋಪಕ್ಕೆ ಎಣೆಯುಂಟೆ?
ನೇಪಾಳದಲ್ಲಿ ಜನಜೀವನ ಸ್ಥಬ್ದವಾಗಿದೆ. ವಾಹನ ಸಂಚಾರ ನಿಂತುಹೋಗಿದೆ. ವಿಮಾನಗಳು ಹಾರಾಟ ನಿಲ್ಲಿಸಿವೆ. ಏಕೋ ಈ ಕೋಪ ಶಂಕರ?

ಬದುಕಿದೆಯಾ ಬಡಜೀವವೆ
ನೇಪಾಳಕ್ಕೆ ಭಾರತವೂ ಸಹಾಯಹಸ್ತ ಚಾಚಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಮೆರಿಕಾದಿಂದ, ಇತರ ಬಲಿಷ್ಠ ರಾಷ್ಟ್ರಗಳಿಂದ ನೆರವು ಬರಬೇಕಿದೆ.












Click it and Unblock the Notifications