ಪಾಕಿಸ್ತಾನದಲ್ಲಿ ಅರಾಜಕತೆ ಅಂತ್ಯವಾಗಿದೆ: ಮರಿಯಂ ನವಾಜ್
ಲಾಹೋರ್: ಭಯೋತ್ಪಾದಕರ ಸ್ವರ್ಗ, ಅರಾಜಕತೆಯ ನಾಡು ಪಾಕಿಸ್ತಾನದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಜಗತ್ತಿಗೇ ಗೊತ್ತು. ಆದರೆ ಅಲ್ಲಿನ ರಾಜಕಾರಣಿಗಳು ಮಾತ್ರ ತಿಪ್ಪೆ ಸಾರಿಸೋ ಕೆಲಸ ಮಾಡುತ್ತಾ ತಮ್ಮ ದೇಶವನ್ನ ಹೊಗಳುತ್ತಾರೆ. ಈಗಲೂ ಅಷ್ಟೇ ನವಾಜ್ ಷರೀಫ್ ಮಗಳು ಮರಿಯಂ, ಪಾಕಿಸ್ತಾನದಲ್ಲಿ ಅರಾಜಕತೆ ಅಂತ್ಯವಾಗಿದೆ ಅಂತಿದ್ದಾರೆ!
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸಾಲು ಸಾಲು ಭ್ರಷ್ಟಾಚಾರದ ಆರೋಪ ಕೇಳಿಬಂದ ಬೆನ್ನಲ್ಲೇ ಮರಿಯಂ ನವಾಜ್ ಅಖಾಡ ಪ್ರವೇಶಿಸಿದ್ದು, ಇಮ್ರಾನ್ ಪಕ್ಷ ಇದೀಗ ನಾಶವಾಗಿದೆ ಎಂದಿದ್ದಾರೆ. ಮೇ 9ರ ಹಿಂಸಾಚಾರದ ಬಳಿಕ ಹಲವು ಮುಖಂಡರು ನಾಯಕರು ಇಮ್ರಾನ್ ಪಕ್ಷ ತೊರೆದಿದ್ದಾರೆ. ಈಗ ಇಡೀ ವಿರೋಧ ಪಕ್ಷ ಒಂದು ರಿಕ್ಷಾದಲ್ಲಿ ಕೂರಬಹುದು ಎಂದಿದ್ದಾರೆ ಮರಿಯಂ ನವಾಜ್. ಪಂಜಾಬ್ ಪ್ರಾಂತ್ಯದ ಶುಜಾಬಾದ್ನಲ್ಲಿ ನಡೆದ ಯುವ ಸಮಾವೇಶದಲ್ಲಿ ಮಾತನಾಡಿದ ಮರಿಯಂ, ಇಮ್ರಾನ್ ವಿರುದ್ಧ ಇನ್ನೂ ಹಲವು ಆರೋಪ ಮಾಡಿದ್ದಾರೆ (Imran Khan Arrest).

ಪಕ್ಷಾಂತರ ಪರ್ವ, ಇಮ್ರಾನ್ ಪಕ್ಷ ನಾಶ!
ಮೇ 9ರ ಹಿಂಸಾಚಾರದ ನಂತರ ಇಮ್ರಾನ್ ಪಕ್ಷವಾದ 'ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್' ಅಥವಾ ಪಿಟಿಐಗೆ ಸೇರಿದ ಹಲವು ನಾಯಕರನ್ನ ಒಳಗೆ ಹಾಕಲಾಗಿದೆ. ಅದರಲ್ಲೂ ಹಿಂಸೆಗೆ ಇವರೇ ಕಾರಣ ಎಂದು ಪಿಟಿಐ ಪಕ್ಷದ ನಾಯಕರು ಮತ್ತು ಮುಖಂಡರನ್ನ ಉಗ್ರರ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಭಯಗೊಂಡು ಹಲವರು ಇಮ್ರಾನ್ ಖಾನ್ ಪಕ್ಷ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಈ ಮಧ್ಯೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮಗಳು ಇಮ್ರಾನ್ ವಿರುದ್ಧ ಕೆಂಡಕಾರಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಇಮ್ರಾನ್ ಸಹವಾಸ ಬಿಟ್ಟು ಓಡಿ ಹೋದರು!
ಇಮ್ರಾನ್ ಖಾನ್ ಸದ್ಯದ ಸ್ಥಿತಿ ನೋಡಿ ಮರಿಯಂ ನವಾಜ್ ಲೇವಡಿ ಮಾಡಿದ್ದು, ದೊಡ್ಡ ಮಟ್ಟದ ಪಕ್ಷಾಂತರ ಪರ್ವದಿಂದ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷ ಈಗ ರಿಕ್ಷಾದಲ್ಲೂ ಹೊಂದಿಕೊಳ್ಳಬಹುದು. ಪಕ್ಷದಲ್ಲಿ ಅಷ್ಟು ಜನ ಮಾತ್ರ ಇದ್ದಾರೆಂದು ಪಿಎಂಎಲ್-ಎನ್ ಪಕ್ಷದ ಹಿರಿಯ ಉಪಾಧ್ಯಕ್ಷೆ ಮರಿಯಂ ನವಾಜ್ ಕೆಣಕಿದ್ದಾರೆ. ಇಮ್ರಾನ್ ಅವರೇ ಈಗ ಪಿಟಿಐ ಪಕ್ಷದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಮುಖ್ಯ ಸಂಘಟಕ, ವಕ್ತಾರ, ಪಕ್ಷದ ಏಕೈಕ ಅಭ್ಯರ್ಥಿ ಹೀಗೆ ಅವರ ಪಕ್ಷಕ್ಕೆ ಅವರೇ ಎಲ್ಲಾ ಎಂದು ಲೇವಡಿ ಮಾಡಿದ್ದಾರೆ.

26 ವರ್ಷಗಳ ಹೋರಾಟ ವ್ಯರ್ಥ!
ಹಾಗೇ ತಮ್ಮ ವಾಗ್ದಾಳಿ ಮುಂದುವರಿಸಿ, ಇಮ್ರಾನ್ ಖಾನ್ ರಾಜಕೀಯ ಹೋರಾಟದ ಬಗ್ಗೆ ಕೂಡ ಅಣಕಿಸಿದ್ದಾರೆ. ಇಮ್ರಾನ್ ತಮ್ಮ 26 ವರ್ಷಗಳ ಸುದೀರ್ಘ ರಾಜಕೀಯ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಇಮ್ರಾನ್ ಖಾನ್ರ 26 ವರ್ಷದ ಸುದೀರ್ಘ ಹೋರಾಟ ಕಿತ್ತು ಹಾಕಲು 26 ನಿಮಿಷ ಬೇಕಾಯಿತು. ಪಾಕಿಸ್ತಾನದಲ್ಲಿ ಅವ್ಯವಸ್ಥೆ & ಅರಾಜಕತೆಯ ಅಧ್ಯಾಯ ಕೊನೆಗೊಂಡಿದೆ. ಆ ಮೂಲಕ ಪಾಕಿಸ್ತಾನದಲ್ಲಿ ಈಗ ಪ್ರಗತಿಯ ಪಯಣ ಪ್ರಾರಂಭವಾಗಲಿದೆ ಎಂದು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಪಾಕಿಸ್ತಾನ ಮಾಜಿ ಪ್ರಧಾನಿಯ ಪುತ್ರಿ ಮರಿಯಂ ನವಾಜ್ ಹೇಳಿದ್ದಾರೆ.

ಪಾಕ್ ಮಾಜಿ ಪ್ರಧಾನಿಗೆ ಕಂಟಕ!
ಖಾನ್ ವಿರುದ್ಧ ಭಯೋತ್ಪಾದನೆ, ಹಿಂಸಾಚಾರ ಮತ್ತು ಧರ್ಮನಿಂದನೆ, ಕೊಲೆ ಯತ್ನ ಸೇರಿ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಖಾನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪಂಜಾಬ್ನ ಲಯ್ಯಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಂದ ಕಡಿಮೆ ಬೆಲೆಗೆ ಭೂಮಿಯನ್ನು ಖರೀದಿಸಿದ್ದಾರೆ. ₹600 ಕೋಟಿ ಬೆಲೆ ಬಾಳುವ ಭೂಮಿಯನ್ನು ರಾಜಕೀಯ ಪ್ರಭಾವ ಬಳಸಿ ₹13 ಕೋಟಿಗೆ ಖರೀದಿ ಮಾಡಿದ್ಧಾರೆ ಅನ್ನೋ ಆರೋಪ ಪಾಕ್ ಮಾಜಿ ಪ್ರಧಾನಿ ವಿರುದ್ಧ ಕೇಳಿಬಂದು, ಪಾಕಿಸ್ತಾನ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಕ್ರಮಕ್ಕೆ ಮುಂದಾಗಿದೆ. ಇದು ಸೇರಿ ಒಟ್ಟು 140 ಕೇಸ್ ಇಮ್ರಾನ್ ಖಾನ್ ವಿರುದ್ಧ ದಾಖಲಾಗಿವೆ.












Click it and Unblock the Notifications