ಕುಲಭೂಷಣ್ ಜಾಧವ್: ಪಾಕ್ ಮನವಿ ತಿರಸ್ಕರಿಸಿದ ಕೋರ್ಟ್
ಕುಲಭೂಷಣ್ ಜಾಧವ್ ಮರಣ ದಂಡನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಜೆ ಕೋರ್ಟ್ ನಲ್ಲಿ ಜಾಧವ್ ತಪ್ಪೊಪ್ಪಿಕೊಂಡಿರುವುದರ ವೀಡಿಯೊ ಪ್ರಸಾರಕ್ಕೆ ಪಾಕಿಸ್ತಾನ ಕೇಳಿಕೊಂಡಿತು. ಆದರೆ ಈ ಬೇಡಿಕೆಯನ್ನು ಐಸಿಜೆ ತಿರಸ್ಕರಿಸಿದೆ.
ಹೇಗ್, ಮೇ 15: ಕುಲಭೂಷಣ್ ಜಾಧವ್ ಮರಣ ದಂಡನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತನ್ನ ವಿಚಾರಣೆಯನ್ನು ಇಂದಿನಿಂದ ಆರಂಭಿಸಿದೆ.
ಈ ವೇಳೆ ಕುಲಭೂಷಣ್ ಜಾಧವ್ ತಪ್ಪೊಪ್ಪಿಕೊಂಡಿರುವುದರ ವೀಡಿಯೊ ಪ್ರಸಾರಕ್ಕೆ ಪಾಕಿಸ್ತಾನ ಕೇಳಿಕೊಂಡಿತು. ಆದರೆ ಈ ಬೇಡಿಕೆಯನ್ನು ಐಸಿಜೆ ತಿರಸ್ಕರಿಸಿದೆ.
ವಿಚಾರಣೆ ವೇಳೆ ಭಾರತದ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದರು. ಪಾಕಿಸ್ತಾನದ ಪರವಾಗಿ, ಪಾಕಿಸ್ತಾನದ ದುಬೈ ರಾಯಭಾರಿ ಮೊಝ್ಝಮ್ ಅಹ್ಮದ್ ಖಾನ್ ವಾದ ಮಂಡಿಸಿದರು.[ವಿಡಿಯೋ : 16 ಬಾರಿ ಭಾರತದ ಮನವಿ ತಿರಸ್ಕರಿಸಿದ ಪಾಕಿಸ್ತಾನ]
ಟಿವಿ ಕಾರ್ಯಕ್ರಮವೊಂದರಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶ ತನಗೆ ಆಪ್ತರಾಗಿರುವುದಾಗಿ ಮೊಝ್ಝಮ್ ಅಹ್ಮದ್ ಖಾನ್ ಹೇಳಿದ್ದರು. ಇದೀಗ ಅವರೇ ಪಾಕಿಸ್ತಾನದ ಪರವಾಗಿ ವಾದ ಮಂಡಿಸಿದ್ದಾರೆ.
ಭಾರತದ ಪರವಾಗಿ ವಾದಿಸಿದ ಸಾಳ್ವೆ, ವಿಚಾರಣೆ ಮುಗಿಯುವ ಮೊದಲೇ ಪಾಕಿಸ್ತಾನ ಕುಲಭೂಷಣ್ ಯಾದವ್ ರನ್ನು ಗಲ್ಲಿಗೇರಿಸುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಮಾತ್ರವಲ್ಲ ಪಾಕಿಸ್ತಾನ ವಿಯೆನ್ನಾ ಘೋಷಣೆಯನ್ನು ಉಲ್ಲಂಘಿಸಿದೆ. ಜಾಧವ್ ಸಂಪರ್ಕಿಸಲು ಭಾರತ 16 ಬಾರಿ ಪ್ರಯತ್ನಪಟ್ಟರೂ ಅವಕಾಶ ನೀಡಿಲ್ಲ. ಜತೆಗೆ ಅವರ ತಾಯಿ ಕೇಳಿದಾಗಲೂ ಭೇಟಿ ನಿರಾಕರಿಸಲಾಗಿದೆ. ಪರಿಸ್ಥಿತಿ ತೀರಾ ಕಳವಳಕಾರಿಯಾಗಿದೆ ಮತ್ತು ತುಂಬಾ ತುರ್ತಿನದಾಗಿದೆ ಎಂದು ಸಾಳ್ವೆ ವಾದಿಸಿದರು.[ಕುಲಭೂಷಣ್ ಪ್ರಕರಣದ ತೀರ್ಪು 15ಕ್ಕೆ: ಅಂತಾರಾಷ್ಟ್ರೀಯ ಕೋರ್ಟ್]
ಮಾತ್ರವಲ್ಲ ಜಾಧವ್ ಗೂಢಚರ ಎಂಬ ಪಾಕಿಸ್ತಾನದ ವಾದವನ್ನೂ ಭಾರತ ತಳ್ಳಿ ಹಾಕಿದೆ. ಅವರನ್ನು ಇರಾನಿನಿಂದ ಕಿಡ್ನಾಪ್ ಮಾಡಲಾಗಿದೆ ಎಂದು ವಾದಿಸಿದ ಸಾಳ್ವೆ, ಮರಣ ದಂಡನೆ ರದ್ದು ಗೊಳಿಸುವಂತೆ ಒತ್ತಾಯಿಸಿದರು.
ಆದರೆ ಭಾರತದ ವಾದವನ್ನು ತಳ್ಳಿ ಹಾಕಿದ ಪಾಕಿಸ್ತಾನದ ವಕೀಲರು, ಭಾರತ ಹೇಳುವುದರಲ್ಲಿ ಸುಳ್ಳಿದೆ. ಹಾಗಾಗಿ ಕುಲಭೂಷಣ್ ಜಾಧವ್ ಸ್ವತಃ ತಪ್ಪೊಪ್ಪಿಕೊಂಡಿರುವ ವೀಡಿಯೊ ಪ್ರಸಾರಕ್ಕೆ ಅನುವು ಮಾಡಿಕೊಡಬೇಕು ಎಂದು ಕೋರಿದರು. ಮಾತ್ರವಲ್ಲ ಭಾರತದ ಅರ್ಜಿಯನ್ನು ತಿರಸ್ಕರಿಸಬೇಕು ಎಂದೂ ಹೇಳಿದರು.[ಕುಲಭೂಷಣ್ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ಕೋರ್ಟ್ ತಡೆಯಾಜ್ಞೆ]
ಆದರೆ ಪಾಕಿಸ್ತಾನದ ಬೇಡಿಕೆಗೆ ಮನ್ನಣೆ ನೀಡದ ನ್ಯಾಯಾಧೀಶರು ವೀಡಿಯೊ ಪ್ರಸಾರಕ್ಕೆ ಅವಕಾಶ ನೀಡಿಲ್ಲ. ಕಳೆದ ವಾರವಷ್ಟೇ ಕೋರ್ಟ್ ಕುಲಭೂಷಣ್ ಜಾಧವ್ ಮರಣದಂಡನೆಗೆ ತಡೆ ನೀಡಿತ್ತು. ಆ ಸಂದರ್ಭದಲ್ಲಿ ಹರೀಶ್ ಸಾಳ್ವೆ ವಾದ ಮಂಡಿಸಿ ಮರಣದಂಡನೆಗೆ ತಡೆ ತಂದಿದ್ದರು.
1971ರ ನಂತರ ಭಾರತ ಇದು ಎರಡನೇ ಬಾರಿಗೆ ಅಂತರಾಷ್ಟ್ರೀಯ ಕೋರ್ಟ್ ಮೊರೆ ಹೋಗಿದೆ.
{promotion-urls}