ಲೆಬನಾನ್ನಲ್ಲಿ ಮತ್ತೆ ಮಹಾ ಸ್ಫೋಟ, ಉಗ್ರರ ಕೋಟೆ ಉಡೀಸ್
ಲೆಬಾನಾನ್ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಕಳೆದ ತಿಂಗಳು ಲೆಬಾನಾನ್ ರಾಜಧಾನಿ ಬೈರುತ್ನಲ್ಲಿ ಮಹಾ ಸ್ಫೋಟ ಸಂಭವಿಸಿತ್ತು. 200 ಜನರು ಈ ಸ್ಫೋಟದಲ್ಲಿ ದಾರುಣವಾಗಿ ಮೃತಪಟ್ಟಿದ್ದರು. ಈ ಘಟನೆ ಸಂಭವಿಸಿ 2 ತಿಂಗಳು ತುಂಬುವ ಒಳಗೆ ಮತ್ತೊಂದು ಮಹಾಸ್ಫೋಟಕ್ಕೆ ಲೆಬನಾನ್ ಸಾಕ್ಷಿಯಾಗಿದೆ. ಈ ಬಾರಿ ಲೆಬನೀಸ್ ರಾಜಧಾನಿ ಬೈರೂತ್ನಿಂದ 50 ಕಿಲೋಮೀಟರ್ ದೂರದ ಐನ್ ಖಾನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಲೆಬನಾನ್ನ ಸ್ಥಳೀಯ ಮಾಧ್ಯಮಗಳ ಪ್ರಕಾರ ಹಿಜ್ಬುಲ್ ಉಗ್ರರ ಉಗ್ರಾಣವೊಂದು ಛಿದ್ರ ಛಿದ್ರವಾಗಿದೆ. ಈ ಉಗ್ರಾಣದಲ್ಲಿ ಹಿಜ್ಬುಲ್ ಉಗ್ರ ಪಡೆ ಬಾಂಬ್, ಗನ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹಿಸಿತ್ತು. ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಕಟ್ಟಡದಲ್ಲೇ ಸ್ಫೋಟ ಸಂಭವಿಸಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಆದರೆ ಈವರೆಗೂ ಸಾವಿನ ಕುರಿತು ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಲೆಬನಾನ್ನ ರಾಜಧಾನಿಯ ಬೈರುತ್ ಬಂದರಿನಲ್ಲಿ ಅಗ್ನಿ ದುರಂತ
ಏಕೆಂದರೆ ಈಗ ಸ್ಫೋಟ ಸಂಭವಿಸಿರುವ ಪ್ರದೇಶ ಉಗ್ರರ ಹಿಡಿತದಲ್ಲಿದೆ. ಹೀಗಾಗಿ ಸ್ಫೋಟ ಸಂಭವಿಸಿದ ಬಳಿಕ ಭದ್ರತಾ ಪಡೆಗಳು ಹಾಗೂ ಮಾಧ್ಯಮಗಳು ಬಾರದಂತೆ ತಡೆಯಲು ಉಗ್ರರು ಪ್ರತಿಯೊಂದು ರಸ್ತೆಗೂ ಅಡ್ಡಲಾಗಿ ವಾಹನ ನಿಲ್ಲಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಏನಾಗಿದೆ ಎಂಬುದು ಸ್ವತಃ ಲೆಬನಾನ್ ಸರ್ಕಾರಕ್ಕೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ.
ಶಿಯಾ ಪಂಗಡದ ಹಿಡಿತದಲ್ಲಿ ಹಳ್ಳಿ
ಭೀಕರ ಸ್ಫೋಟ ಸಂಭವಿಸಿರುವ ಹಳ್ಳಿ ಸಂಪೂರ್ಣ ಶಿಯಾ ಉಗ್ರರ ಹಿಡಿತದಲ್ಲಿದೆ. ಯಾರೇ ಬರಬೇಕಾದರೂ, ಯಾರೇ ಹೊರ ಹೋಗಬೇಕಾದರೂ ಹಿಜ್ಬುಲ್ ಉಗ್ರರ ಅನುಮತಿ ಕಡ್ಡಾಯ. ಹೀಗಾಗಿಯೇ ಇಲ್ಲಿ ಉಗ್ರರ ಚಟುವಟಿಕೆಗಳು ಯಾವುದೇ ಅಡ್ಡಿ, ಆತಂಕವಿಲ್ಲದೆ ನಿರಾತಂಕವಾಗಿ ನಡೆಯುತ್ತಿವೆ. ಇದೀಗ ಸ್ಫೋಟವಾಗಿರುವ ಕಟ್ಟಡವನ್ನು ಹಲವು ವರ್ಷಗಳಿಂದ ಹಿಜ್ಬುಲ್ ಉಗ್ರರು ವಶದಲ್ಲಿ ಇಟ್ಟುಕೊಂಡಿದ್ದರು. ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಂಗ್ರಹ ಮಾಡಿಕೊಂಡಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಇಡೀ ಉಗ್ರಾಣ ಸ್ಫೋಟಗೊಂಡಿದೆ. ಘಟನೆಯಲ್ಲಿ ಸುತ್ತಮುತ್ತಲಿನ ಕಟ್ಟಡಗಳು ಹಾಗೂ ವಾಹನಗಳು ಛಿದ್ರವಾಗಿವೆ.
200 ಜನರ ಸಾವಿಗೆ ಕಾರಣವಾಗಿದ್ದ ಘಟನೆ
ಆಗಸ್ಟ್ 4ರಂದು ಲೆಬನಾನ್ ರಾಜಧಾನಿ ಬೈರುತ್ ಬಂದರಿನಲ್ಲಿ ಭೀಕರ ಸ್ಫೋಟ ಸಂಭವಿಸಿತ್ತು. ಸುಮಾರು 3000 ಟನ್ನಷ್ಟು ಅಮೋನಿಯಂ ನೈಟ್ರೇಟ್ ಸ್ಫೋಟವಾಗಿತ್ತು. ಹಲವು ವರ್ಷಗಳಿಂದ ಬೈರುತ್ ಬಂದರಿನ ಹಡಗಲ್ಲಿ ಸುಮಾರು 3000 ಟನ್ನಷ್ಟು ಅಮೋನಿಯಂ ನೈಟ್ರೇಟ್ ಸಂಗ್ರಹಿಸಿ ಇಡಲಾಗಿತ್ತು. ಆದರೆ ಆಗಸ್ಟ್ 4ರಂದು ದಿಢೀರ್ ಭಾರಿ ಪ್ರಮಾಣದ ಅಮೋನಿಯಂ ನೈಟ್ರೇಟ್ ಸ್ಫೋಟವಾಗಿತ್ತು. ಈ ಸ್ಫೋಟದ ತೀವ್ರತೆಗೆ 200 ಜನರು ಪ್ರಾಣ ಕಳೆದುಕೊಂಡರೆ, 6500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಧನದಾಹಕ್ಕೆ ಬಲಿಯಾಯಿತಾ ಲೆಬನಾನ್ ರಾಜಧಾನಿ..?
ಲೆಬನಾನ್ ಪ್ರಧಾನಿ ರಾಜೀನಾಮೆ ನೀಡಿದ್ದರು
ಬೈರುತ್ ಬ್ಲಾಸ್ಟ್ ನಂತರ ಲೆಬನಾನ್ನಲ್ಲಿ ಎದ್ದಿರುವ ದಂಗೆಗೆ ತಲೆಬಾಗಿ ಪ್ರಧಾನಿ ಹಸನ್ ದಿಯಾಬ್ ಸರ್ಕಾರ ವಿಸರ್ಜಿಸಿದ್ದರು. ಆಗಸ್ಟ್ 10ರಂದೇ ಹಸನ್ ದಿಯಾಬ್ ಅಧಿಕಾರದಿಂದ ಕೆಳಗಿಳಿದಿದ್ದರು. ಬೈರುತ್ ಬಂದರಲ್ಲೇ ಲೆಬನಾನ್ಗೆ ಅಗತ್ಯವಿದ್ದಷ್ಟು ಆಹಾರ ಪದಾರ್ಥ ಸಂಗ್ರಹಿಸಿತ್ತು. ಆದರೆ ಸ್ಫೋಟದಲ್ಲಿ ಆಹಾರ ಪದಾರ್ಥವೆಲ್ಲಾ ಮಣ್ಣುಪಾಲಾಗಿ, ಜನರು ಹಸಿವಿನಿಂದ ನರಳಾಡುವ ಸ್ಥಿತಿ ಎದುರಾಗಿತ್ತು.
Recommended Video
ಪರಿಸ್ಥಿತಿ ನಿಭಾಯಿಸುವಲ್ಲಿ ದಿಯಾಬ್ ವಿಫಲ
ಇದನ್ನೆಲ್ಲಾ ನಿಭಾಯಿಸಲು ದಿಯಾಬ್ ವಿಫಲವಾಗಿದ್ದಾರೆ. ಜನರ ಕಷ್ಟ ಕೇಳದೆ ಪ್ರಜೆಗಳ ಮೇಲೆಯೇ ದೌರ್ಜನ್ಯ ನಡೆಸಲು ಹೋಗಿ ದಿಯಾಬ್ ತಮ್ಮ ಸರ್ಕಾರವನ್ನೇ ವಿಸರ್ಜಿಸಿದ್ದರು. ಇಷ್ಟೆಲ್ಲಾ ರಾದ್ಧಾಂತ ನಡೆದು 2 ತಿಂಗಳು ಕಳೆಯುವ ಒಳಗೆ ಲೆಬನಾನ್ ಮತ್ತೆ ನಡುಗಿದೆ. ಆದರೆ ಈಗ ನಡೆದಿರುವ ದುರಂತದ ಹೊಣೆಯನ್ನ ಯಾವುದೇ ಉಗ್ರ ಸಂಘಟನೆ ಒಪ್ಪಿಕೊಂಡಿಲ್ಲ.