ತಗಾದೆ ಶುರುಮಾಡಿದ್ದು ನಾವಲ್ಲ: ಚೀನಾಕ್ಕೆ ಜೈಶಂಕರ್ ಖಡಕ್ ನುಡಿ
ಮಾಸ್ಕೋ, ಸೆಪ್ಟೆಂಬರ್ 10: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಚೀನಾ ಸಚಿವ ವಾಂಗ್ ಯಿ ನಡುವೆ ಸುಮಾರು ಎರಡು ಗಂಟೆ ಮಾತುಕತೆ ನಡೆಯಿತು. ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ ಸಂಪೂರ್ಣವಾಗಿ ಎರಡೂ ದೇಶಗಳ ಪಡೆಗಳು ಹಿಂದೆ ಸರಿಯವುದು, ತಮ್ಮ ಚಟುವಟಿಕೆಗಳನ್ನು ನಿಲ್ಲಿಸುವ ಕುರಿತು ಹಾಗೂ ಗಡಿಯಲ್ಲಿನ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ಯಥಾಸ್ಥಿತಿಯನ್ನು ಭಾರತವು ಎಂದಿಗೂ ಬದಲಿಸಲು ಪ್ರಯತ್ನಿಸಲಿಲ್ಲ ಎಂದು ಒತ್ತಿ ಹೇಳಿದ ಜೈಶಂಕರ್, ಎಲ್ಎಸಿಯಲ್ಲಿನ ಸ್ಥಿತಿಗತಿ ಕುರಿತು ಪ್ರಸ್ತಾಪಿಸಿದರು. ಗಡಿ ಭಾಗದಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡುವುದರ ಅಗತ್ಯವನ್ನು ಪ್ರತಿಪಾದಿಸಿದರು ಎಂದು ಮೂಲಗಳು ತಿಳಿಸಿವೆ.
ಶಾಂಘೈ ಸಹಕಾರ ಸಂಘದ (ಎಸ್ಸಿಒ) ಸಮಾವೇಶದ ಸಂದರ್ಭದಲ್ಲಿ ಉಭಯ ದೇಶಗಳ ಸಚಿವರು ಗವಾಸ್ತವ ಗಡಿ ನಿಯಂತ್ರಣ ರೇಖೆ ಭಾಗದಲ್ಲಿನ ಸ್ಥಿತಿಯನ್ನು ತಿಳಿಗೊಳಿಸುವ ಸಂಬಂಧ ಪ್ರತ್ಯೇಕ ಮಾತುಕತೆ ನಡೆಸಿದರು.

ಸಭೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಭಾರತೀಯ ಸೇನೆಯು ಎಲ್ಎಸಿ ಭಾಗಕ್ಕೆ ಹೆಚ್ಚುವರಿ ಪಡೆಗಳನ್ನು ರವಾನೆ ಮಾಡುವ ಮೂಲಕ ತನ್ನ ಸೇನಾ ಹಾಜರಾತಿಯನ್ನು ಬಲಪಡಿಸಲು ಮುಂದಾಗಿದೆ. ಜತೆಗೆ ಯುದ್ಧ ಟ್ಯಾಂಕ್ಗಳು ಮತ್ತು ಇತರೆ ಶಸ್ತ್ರಾಸ್ತ್ರ ಸಾಮಗ್ರಿಗಳನ್ನು ರವಾನಿಸಿದೆ. ಅತ್ತ ಚೀನಾ ಪಡೆಗಳೂ ತಮ್ಮ ಹಾಜರಾತಿಯನ್ನು ಹೆಚ್ಚಿಸಿಕೊಂಡಿವೆ.
ಸಚಿವರ ನಡುವಿನ ಸಭೆಯು ಲಡಾಖ್ನಲ್ಲಿ ಎಲ್ಎಸಿ ಉದ್ದಕ್ಕೂ ಉಂಟಾಗಿರುವ ಉದ್ವಿಗ್ನತೆಯನ್ನು ಶಾಂತಿಯುತವಾಗಿ ಶಮನ ಮಾಡಲು ಇರುವ ಕೊನೆಯ ಅವಕಾಶ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.












Click it and Unblock the Notifications