Get Updates
Get notified of breaking news, exclusive insights, and must-see stories!

262 ಕೋಟಿ ಪರಿಹಾರ ಘೋಷಣೆಗೆ ಮೊದಲೇ ಮೃತಪಟ್ಟ ತಂದೆ: ಅಮೆರಿಕದಲ್ಲಿ ಮೃತಪಟ್ಟ ಮಗಳ ಜೊತೆ ಸೇರಿದ ಅಪ್ಪ

ಕರ್ನೂಲ್ : ವಿಧಿಯಾಟ ಬಲು ವಿಚಿತ್ರ. ಅಮೆರಿಕದಲ್ಲಿ ಪೊಲೀಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮಗಳ ಸಾವಿಗೆ ನ್ಯಾಯ ಸಿಗಲಿ ಎಂದು ಕಾಯುತ್ತಿದ್ದ ತಂದೆ, ಅಂತಿಮವಾಗಿ ಆ ನ್ಯಾಯದ ರೂಪವಾಗಿ ಬರೋಬ್ಬರಿ 29 ಮಿಲಿಯನ್ ಡಾಲರ್ (ಸುಮಾರು 262 ಕೋಟಿ ರೂ.) ಪರಿಹಾರ ಘೋಷಣೆಯಾಗುವ ಕೇವಲ ಎರಡು ದಿನಗಳ ಮೊದಲು ನಿಧನರಾಗಿದ್ದಾರೆ. ಈ ಘಟನೆ ಜಾಹ್ನವಿ ಕುಟುಂಬವನ್ನು ಮತ್ತಷ್ಟು ಶೋಕಸಾಗರದಲ್ಲಿ ಮುಳುಗಿಸಿದೆ.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ಮೂಲದವರಾದ ಜಾಹ್ನವಿ ಕಂದುಲ ಅವರ ತಂದೆ, ನಿವೃತ್ತ ಪೊಲೀಸ್ ಪೇದೆ ಕಂದುಲ ಶ್ರೀಕಾಂತ್ ಅವರು ಫೆಬ್ರವರಿ 10ರಂದು ಹೃದಯಾಘಾತದಿಂದ ನಿಧನರಾದರು. ದುರಂತವೆಂದರೆ, ಇವರು ಮೃತಪಟ್ಟ ಎರಡೇ ದಿನಗಳಲ್ಲಿ, ಅಂದರೆ ಫೆಬ್ರವರಿ 12ರಂದು ಅಮೆರಿಕದ ಸಿಯಾಟಲ್ ನಗರದ ಆಡಳಿತವು ಜಾಹ್ನವಿ ಸಾವಿಗೆ ಪರಿಹಾರವಾಗಿ ಬೃಹತ್ ಮೊತ್ತವನ್ನು ಘೋಷಿಸಿತು. ಆದರೆ, ಈ ಸುದ್ದಿಯನ್ನು ಕೇಳಲು ತಂದೆ ಬದುಕಿರಲಿಲ್ಲ ಎಂಬುದು ಕುಟುಂಬಸ್ಥರ ನೋವನ್ನು ಇಮ್ಮಡಿಗೊಳಿಸಿದೆ.

Jaahnavi Kandula

ಪ್ರಕರಣದ ಹಿನ್ನೆಲೆ

23 ವರ್ಷದ ಜಾಹ್ನವಿ ಕಂದುಲ ಅವರು ಸಿಯಾಟಲ್‌ನ ನಾರ್ತ್‌ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ವ್ಯವಸ್ಥೆಗಳಲ್ಲಿ (Information Systems) ಸ್ನಾತಕೋತ್ತರ ಪದವಿ ಓದುತ್ತಿದ್ದರು. 2023ರ ಜನವರಿ 23ರಂದು ಅವರು ರಸ್ತೆ ದಾಟುತ್ತಿದ್ದಾಗ, ತುರ್ತು ಕರೆಗೆ ಸ್ಪಂದಿಸಲು ಅತಿ ವೇಗವಾಗಿ ಬಂದು ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಅವರ ವಾಹನ ಡಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಜಾಹ್ನವಿ ಪ್ರಾಣ ಕಳೆದುಕೊಂಡಿದ್ದರು. ಮಗಳ ಉನ್ನತ ಶಿಕ್ಷಣಕ್ಕಾಗಿ ಸಾಲ ಮಾಡಿ ಕಳುಹಿಸಿದ್ದ ಕುಟುಂಬಕ್ಕೆ ಆಕೆಯ ಸಾವು ಬರಸಿಡಿಲಿನಂತೆ ಎರಗಿತ್ತು.

ವಿವಾದ ಮತ್ತು ಹೋರಾಟ

ಜಾಹ್ನವಿ ಸಾವಿನ ನಂತರ ನಡೆದ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದವು. ಅಪಘಾತದ ನಂತರ ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್‌ ಡೇವ್‌ ಅವರು ತಮ್ಮ ಬಾಡಿಕ್ಯಾಮ್ ಆನ್ ಇದ್ದಾಗ ಮಾತನಾಡುತ್ತಾ, ಜಾಹ್ನವಿ ಸಾವಿನ ಬಗ್ಗೆ ಲಘುವಾಗಿ ಮಾತನಾಡಿದ್ದರು. "ಆಕೆ ಒಬ್ಬ ಸಾಧಾರಣ ವ್ಯಕ್ತಿ, ಆಕೆಯ ಜೀವಕ್ಕೆ ಸೀಮಿತ ಮೌಲ್ಯವಿದೆ (limited value), ಸುಮ್ಮನೆ ಒಂದು ಚೆಕ್ ಬರೆದರೆ ಸಾಕು" ಎಂದು ನಗುತ್ತಾ ಹೇಳಿದ ಮಾತುಗಳು ಬಹಿರಂಗಗೊಂಡಾಗ ಭಾರತೀಯ ಸಮುದಾಯಗಳು ರೊಚ್ಚಿಗೆದ್ದಿದ್ದವು. ಭಾರತ ಸರ್ಕಾರವೂ ಈ ಬಗ್ಗೆ ಅಮೆರಿಕದ ಬಳಿ ಕಠಿಣ ಆಕ್ಷೇಪ ವ್ಯಕ್ತಪಡಿಸಿತ್ತು. ತನಿಖೆಯ ನಂತರ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಎಲ್ಲಾ ಕಾನೂನು ಹೋರಾಟದ ಹಾದಿಯಲ್ಲಿ ತಂದೆ ಶ್ರೀಕಾಂತ್ ಅವರು ಮಗಳಿಗೆ ನ್ಯಾಯ ಸಿಗುವ ಭರವಸೆಯಲ್ಲಿದ್ದರು.

ಕುಟುಂಬದ ಪ್ರತಿಕ್ರಿಯೆ

ಶ್ರೀಕಾಂತ್ ಅವರ ಅಂತ್ಯಕ್ರಿಯೆಯನ್ನು ಫೆಬ್ರವರಿ 11ರಂದು (ಬುಧವಾರ) ಆದೋನಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ. "ನಾವು ಈಗಾಗಲೇ ಮಗಳನ್ನು ಕಳೆದುಕೊಂಡು ನೊಂದಿದ್ದೆವು. ಈಗ ಕುಟುಂಬದ ಆಧಾರಸ್ತಂಭವಾಗಿದ್ದ ಶ್ರೀಕಾಂತ್ ಅವರನ್ನೂ ಕಳೆದುಕೊಂಡಿದ್ದೇವೆ. ಪರಿಹಾರದ ಮೊತ್ತದ ಬಗ್ಗೆ ಮಾತನಾಡುವ ಸ್ಥಿತಿಯಲ್ಲಿ ನಾವಿಲ್ಲ. ಹಣಕ್ಕಿಂತ ಹೆಚ್ಚಾಗಿ ನಮ್ಮವರನ್ನು ಕಳೆದುಕೊಂಡ ನೋವು ದೊಡ್ಡದು," ಎಂದು ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.

ಸುಮಾರು 262 ಕೋಟಿಗೂ ಅಧಿಕ ಮೊತ್ತದ ಪರಿಹಾರವು ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರ ಸಾವಿಗೆ ನೀಡಲಾದ ಅತಿದೊಡ್ಡ ಪರಿಹಾರಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಆ ಹಣವನ್ನು ನೋಡಲು ಅಥವಾ ಮಗಳ ಸಾವಿಗೆ ಸಿಕ್ಕ ನ್ಯಾಯವನ್ನು ಕಣ್ತುಂಬಿಕೊಳ್ಳಲು ತಂದೆಯೇ ಇಲ್ಲದಿರುವುದು ವಿಧಿಯ ಕ್ರೂರ ಆಟದಂತಿದೆ. ಮಗಳು ಹೋದ ನೋವಿನಲ್ಲೇ ಕೊರಗುತ್ತಿದ್ದ ಶ್ರೀಕಾಂತ್, ಅಂತಿಮವಾಗಿ ಮಗಳ ಬಳಿಗೇ ತೆರಳಿದ್ದಾರೆ ಎಂದು ಸ್ಥಳೀಯರು ಕಂಬನಿ ಮಿಡಿದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+