ಉಗ್ರರು & ಇಸ್ರೇಲ್ ನಡುವೆ ಸಂಧಾನ ಶುರು, ಯುದ್ಧ ಯಾವಾಗ ನಿಲ್ಲುತ್ತೆ?
ಇಸ್ರೇಲ್ & ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಭೀಕರ ಕದನ ಇನ್ನೇನು ಬಹುತೇಕ ಅಂತ್ಯಕ್ಕೆ ಸಮೀಪಿಸಿದೆ. ಯುದ್ಧ ನಿಲ್ಲಿಸಲು ಜಗತ್ತಿನ ಹಲವಾರು ದೇಶಗಳು ಪಟ್ಟ ಪ್ರಯತ್ನ ಫಲ ನೀಡಿದಂತೆ ಕಾಣುತ್ತಿದೆ. ಅದರ ಮೊದಲ ಹೆಜ್ಜೆಯಾಗಿ ಈಗ ಒತ್ತೆಯಾಳು ಬಿಡುಗಡೆಗೆ ಪ್ರಕ್ರಿಯೆ ಆರಂಭವಾಗಿದೆ. ಇದರ ಜೊತೆಗೆ ಕದನ ವಿರಾಮ ಕೂಡ ಘೋಷಣೆಯಾಗಿದೆ!
ಅಷ್ಟಕ್ಕೂ ಅಕ್ಟೋಬರ್ 7 ರ ಶನಿವಾರ ಹಮಾಸ್ ಉಗ್ರರು ಇಸ್ರೇಲ್ ವಿರುದ್ಧ 5000ಕ್ಕೂ ಹೆಚ್ಚು ರಾಕೆಟ್ ಒಂದೇ ಬಾರಿಗೆ ಉಡಾಯಿಸಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಶಸ್ತ್ರಾಸ್ತ್ರ & ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಹೀಗೆ ಶುರುವಾಗಿದ್ದ ಯುದ್ಧ ಇಂದಿಗೆ 49ನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಮಹತ್ವದ ಬೆಳವಣಿಗೆ ನಡೆದಿದೆ. ಯುದ್ಧ ನಿಲ್ಲಿಸುವ ಮೊದಲ ಹೆಜ್ಜೆ ಎನ್ನುವಂತೆ ಇದೀಗ ಹಮಾಸ್ ಉಗ್ರರ ವಶದಲ್ಲಿ ಇರುವ ಇಸ್ರೇಲ್ ಒತ್ತೆಯಾಳುಗಳ ರಿಲೀಸ್ ಮಾಡಲು ಪ್ರಕ್ರಿಯೆ ಆರಂಭವಾಗಿದೆ.

ಇಂದಿನಿಂದ 4 ದಿನಗಳ ಕದನ ವಿರಾಮ!
ಹೌದು, ಇಸ್ರೇಲ್ ಮತ್ತು ಹಮಾಸ್ ಮಧ್ಯೆ 4 ದಿನ ಕಾಲ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಏರ್ಪಟ್ಟ ಹಿನ್ನೆಲೆ ಇಂದಿನಿಂದ ಗಾಜಾಪಟ್ಟಿ ಹಾಗೂ ಇಸ್ರೇಲ್ನಲ್ಲಿ ಬಾಂಬ್ & ರಾಕೆಟ್ಗಳು ಸದ್ದು ಮಾಡಲ್ಲ. ಇದರ ಜೊತೆಗೆ ಒಟ್ಟು 50 ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗೆ ಹಮಾಸ್ ಉಗ್ರರು ಒಪ್ಪಿದ್ದಾರೆ ಎನ್ನಲಾಗಿದ್ದು ಮೊದಲನೇ ಬ್ಯಾಚ್ನಲ್ಲಿ ಇನ್ನೇನು 13 ಜನ ಬಿಡುಗಡೆ ಆಗಲಿದ್ದಾರಂತೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಜೈಲುಗಳಲ್ಲಿ ಇರುವ ಪ್ಯಾಲೆಸ್ತೀನ್ನ ಜನರನ್ನು ರಿಲೀಸ್ ಮಾಡಲು ಇಸ್ರೇಲ್ ಒಪ್ಪಿದೆ. ಈ ಮೂಲಕ ಯುದ್ಧ ಸಂಪೂರ್ಣ ನಿಲ್ಲುವ ಹಂತಕ್ಕೆ ಬಂದಿದೆ.
ಮೃತಪಟ್ಟ ನಾಗರಿಕರ ಸಂಖ್ಯೆ ಎಷ್ಟು?
ಹಮಾಸ್ ಮಾಡಿದ್ದ ತಪ್ಪಿಗೆ ಒಂದೂವರೆ ತಿಂಗಳಿಂದ ಗಾಜಾಪಟ್ಟಿ ಜನರು ನರಳಾಡುತ್ತಿದ್ದಾರೆ. ಈಗಾಗಲೇ 13,000ಕ್ಕೂ ಹೆಚ್ಚು ಗಾಜಾಪಟ್ಟಿ ನಾಗರಿಕರು ಯುದ್ಧಕ್ಕೆ ಬಲಿಯಾಗಿದ್ದು 6,000ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ಹಮಾಸ್ ಉಗ್ರರು ಆರೋಪ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಇಬ್ಬರ ನಡುವೆ ಸಂಧಾನ ನಡೆದು ಇಸ್ರೇಲ್ ಮೂಲದ ಒತ್ತೆಯಾಳುಗಳ ಹಮಾಸ್ ರಿಲೀಸ್ ಮಾಡಲಿದೆ ಹಾಗೂ ಪ್ಯಾಲೆಸ್ತೀನ್ ಜನರನ್ನು ಇಸ್ರೇಲ್ ರಿಲೀಸ್ ಮಾಡಲಿದೆ ಎನ್ನುವ ನಿರೀಕ್ಷೆ ಇದೆ. ಈ ಪ್ರಕ್ರಿಯೆಗೆ ಇದೀಗ ಚಾಲನೆ ಕೂಡ ಸಿಕ್ಕಿದ್ದು, ಕೆಲ ಸಮಯದಲ್ಲೇ ಇದರ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ.
ಶಾಂತಿ ಮಾತುಕತೆ ಮಾಡಿಸಿದ್ದು ಯಾರು?
49 ದಿನಗಳಿಂದ ಹಮಾಸ್ & ಇಸ್ರೇಲ್ ನಡುವೆ ಭೀಕರ ಕಾಳಗ ನಡೆಯುತ್ತಿದ್ದ ಹಿನ್ನೆಲೆ ಪರಿಸ್ಥಿತಿ ಸುಧಾರಿಸಲು ಕತಾರ್ ಸೇರಿ ಈಜಿಪ್ಟ್ ಮತ್ತು ಅಮೆರಿಕ ರಾಜತಾಂತ್ರಿಕರು ಹಗಲು & ರಾತ್ರಿ ಶ್ರಮ ವಹಿಸಿ ಸಂಧಾನ ನಡೆಸಿದ್ದರು. ಯುದ್ಧ ಶುರುವಾಗಿ 47 ದಿನಗಳ ಬಳಿಕ ರಾಜತಾಂತ್ರಿಕ ಹೆಜ್ಜೆಗೆ ಸಿಕ್ಕಿದ ಮೊದಲ ದಿಗ್ವಿಜಯ ಇದಾಗಿತ್ತು. ಹೀಗೆ ಇಡೀ ಜಗತ್ತಿನ ನೋಟ ಈಗ ಇಸ್ರೇಲ್ ಮತ್ತು ಹಮಾಸ್ ಉಗ್ರರ ಮೇಲೆ ನೆಟ್ಟಿದೆ. ಇನ್ನೇನು ಕೆಲ ಹೊತ್ತಲ್ಲೇ ಅದಕ್ಕೆ ಪಕ್ಕಾ ಉತ್ತರ ಕೂಡ ಸಿಗಲಿದೆ.

ಛಿದ್ರವಾದ ಗಾಜಾಪಟ್ಟಿ, ಮುಂದೆ ಏನು?
ಕಳೆದ 49 ದಿನದಿಂದ ನಿರಂತರ ದಾಳಿಯ ಪರಿಣಾಮ, ಗಾಜಾಪಟ್ಟಿ ನಗರ ಸಂಪೂರ್ಣವಾಗಿ ಛಿದ್ರವಾಗಿ ಹೋಗಿದೆ. ಉತ್ತರ ಗಾಜಾಪಟ್ಟಿ ಅಕ್ಷರಶಃ ನರಕವಾಗಿದ್ದು ಹತ್ತಾರು ಲಕ್ಷ ಜನಗಳ ಬದುಕು ಬೀದಿಗೆ ಬಿದ್ದಿದೆ. ಲಕ್ಷ ಲಕ್ಷ ಜನ ದೇಶಬಿಟ್ಟು ಹೋಗಲು ಪ್ರಯತ್ನಿಸಿದರೂ ದಕ್ಷಿಣ ಗಾಜಾ ಭಾಗದಲ್ಲಿ ಸಿಲುಕಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಏನು ಮಾಡೋದು ಎಂಬ ಚಿಂತೆ ಇಲ್ಲಿನ ಜನರನ್ನು ಆವರಿಸಿದೆ. ಅಲ್ಲದೆ ಇವರಿಗೆ ಪುನರ್ ವಸತಿ ಕಲ್ಪಿಸಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.












Click it and Unblock the Notifications