Russia & Ukraine: ಸಕ್ಸಸ್ ಆಯ್ತಾ ಯುದ್ಧ ನಿಲ್ಲಿಸುವ ಪ್ರಯತ್ನ?
ಸೌದಿ ಅರೇಬಿಯಾ: ರಷ್ಯಾ ಮತ್ತು ಉಕ್ರೇನ್ ನಡುವೆ ಹೊತ್ತಿರುವ ಬೆಂಕಿ ತಣ್ಣಗಾಗಿಸಲು ಜಗತ್ತು ಒಂದಾಗಿದೆ. ಆದರೂ ಶಾಂತಿ ಮಾತುಕತೆ ಫಲ ನೀಡಿದಂತೆ ಕಾಣುತ್ತಿಲ್ಲ. ಹಾಗಾದರೆ ರಷ್ಯಾ ಮತ್ತು ಉಕ್ರೇನ್ ಭೀಕರ ಯುದ್ಧಕ್ಕೆ ಅಂತ್ಯ ಹಾಡಲು ಪ್ರಪಂಚದ ಅಭಿವೃದ್ಧಿಶೀಲ ದೇಶಗಳು ನಡೆಸಿದ ಪ್ರಯತ್ನ ಏನಾಯ್ತು? ಶಾಂತಿ ಮಾತುಕತೆಗೆ ಮುಂದಾಗಿದ್ದ ದೇಶಗಳ ಮುಂದಿನ ನಿರ್ಧಾರ ಏನು? ಬನ್ನಿ ತಿಳಿಯೋಣ.
ಅಷ್ಟಕ್ಕೂ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾಗಿ ಸುಮಾರು ಒಂದೂವರೆ ವರ್ಷವೇ ಕಳೆದಿದೆ. ಈಗಾಗಲೇ ಲಕ್ಷಾಂತರ ಜನರು ಈ ಯುದ್ಧಕ್ಕೆ ಬಲಿಯಾಗಿರುವ ಕುರಿತು ಆರೋಪ ಕೇಳಿಬಂದಿದೆ. ಈ ಹೊತ್ತಲ್ಲಿ ಜಗತ್ತು ಒಂದಾಗಿತ್ತು. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಪ್ರಸ್ತಾಪದ ಹಿನ್ನೆಲೆ ಸೌದಿ ಆರೇಬಿಯಾ ಸಂಧಾನಕ್ಕೆ ಚರ್ಚೆ ಶುರು ಮಾಡಿತ್ತು. ಕಳೆದ ಎರಡು ದಿನದಿಂದ ಈ ಕುರಿತು ಉಕ್ರೇನ್ ಸೇರಿ ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳು ಗಂಭೀರ ಚರ್ಚೆ ನಡೆಸಿವೆ. ಈ ಮೂಲಕ ಯುದ್ಧ ನಿಲ್ಲಿಸಲು ಸಾಕಷ್ಟು ಪ್ರಯತ್ನ ನಡೆಸಲಾಗಿದೆ. ಆದರೆ ಚರ್ಚೆ ಅಂದುಕೊಂಡ ಹಂತ ತಲುಪಿಲ್ಲ ಎನ್ನಲಾಗಿದೆ.

ಯುದ್ಧ ನಿಲ್ಲಿಸಲು ಮುಂದಿನ ನಡೆ ಏನು?
ಎರಡು ದಿನಗಳ ಕಾಲ ಸೌದಿಯಲ್ಲಿ ನಡೆದ ಚರ್ಚೆ ಅಷ್ಟೊಂದು ಪರಿಣಾಮಕಾರಿ ಫಲವನ್ನ ನೀಡಿಲ್ಲ. ಹೀಗಾಗಿ ಮುಂದಿನ ಕೆಲ ವಾರದಲ್ಲಿ ಮತ್ತೊಂದು ಹಂತದ ಸಭೆ ನಡೆಸೋದಕ್ಕೂ ಈ ಸಭೆಯಲ್ಲಿ ಭಾಗವಹಿಸಿದ್ದ ದೇಶಗಳು ನಿರ್ಧಾರ ಮಾಡಿವೆ ಎನ್ನಲಾಗಿದೆ. ಭಾರತ ಕೂಡ ಮೀಟಿಂಗ್ನಲ್ಲಿ ಭಾಗವಹಿಸಿತ್ತು. ಮಾತುಕತೆ & ರಾಜತಾಂತ್ರಿಕತೆ ಉತ್ತೇಜಿಸುವುದು ಭಾರತದ ವಿಧಾನ. ಇದು ಯಾವಾಗಲೂ ಇರುತ್ತದೆ. ಇದು ಶಾಂತಿಯಿಂದ ಮುಂದುವರಿಯಲು ಇರುವ ಏಕೈಕ ಮಾರ್ಗವಾಗಿದೆ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದರು. ಇದೀಗ ಮುಂದಿನ ಹಂತವಾಗಿ ಮತ್ತೊಂದು ಸಭೆ ಆಯೋಜಿಸಲು ಸುಮಾರು 40 ದೇಶದ ಭದ್ರತಾ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಯುದ್ಧ ನಿಲ್ಲದಿದ್ದರೆ ಭೀಕರ ಪರಿಸ್ಥಿತಿ
ಕೆಲ ದಿನದಲ್ಲಿ ಮುಗಿದು ಹೋಗುತ್ತೆ ಎಂದು ಅಂದುಕೊಂಡಿದ್ದ ರಷ್ಯಾ ಮತ್ತು ಉಕ್ರೇನ್ ಯುದ್ಧ ಸುಮಾರು ಒಂದೂವರೆ ವರ್ಷ ಮುಗಿಸಿದೆ. ಇಂದಿಗೆ 532ನೇ ದಿನಕ್ಕೆ ಕಾಲಿಟ್ಟಿರುವ ರಣಭೀಕರ ಕಾಳಗ ನಿಲ್ಲುವ ಮುನ್ಸೂಚನೆಯೇ ಕಂಡಿಲ್ಲ. ರಷ್ಯಾ ಕೂಡ ಯುದ್ಧವನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯಲು ಸನ್ನದ್ಧವಾಗಿದೆ. ಉಕ್ರೇನ್ ಪರದಾಡುತ್ತಿರುವಾಗ ಪಾಶ್ಚಿಮಾತ್ಯ ರಾಷ್ಟ್ರಗಳು ನೆರವಿಗೆ ನಿಂತಿವೆ. ಇದು ರಷ್ಯಾ ಅಧ್ಯಕ್ಷ ಪುಟಿನ್ರನ್ನ ಇನ್ನಷ್ಟು ಕೆರಳಿಸುತ್ತಿದೆ. ಹೀಗಾಗಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ. ಅಕಸ್ಮಾತ್ ಯುದ್ಧ ನಿಲ್ಲದಿದ್ದರೆ ಭೀಕರ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಇದೆ.

ರಷ್ಯಾ & ಉಕ್ರೇನ್ ಯುದ್ಧ ಮತ್ತು ಭಾರತ!
ಜಗತ್ತು ಈಗ ಎರಡು ಭಾಗವಾಗಿ ಹೋಗಿದೆ. ಒಂದು ಭಾಗ ರಷ್ಯಾ ಜೊತೆಗೆ ಸೇರಿದೆ, ಇದೇ ವೇಳೆ ಇನ್ನೊಂದು ಭಾಗ ಅಮೆರಿಕದ ಜೊತೆ ಸೇರಿ ಉಕ್ರೇನ್ ಪರ ನಿಂತಿದೆ. ಆದರೆ ಭಾರತ ಮಾತ್ರ ಹೀಗೆ ಮಾಡಿಲ್ಲ. ಭಾರತ ಯುದ್ಧವನ್ನ ವಿರೋಧಿಸುವ ಜೊತೆಗೆ ಮಾನವೀಯತೆ ಸಂದೇಶ ಸಾರುತ್ತಿದೆ. ಹಾಗೇ ಯುದ್ಧ ಬೇಡವೇ ಬೇಡ ಎನ್ನುತ್ತಿದೆ. ಈ ವಿಚಾರದಲ್ಲಿ ಅತ್ತ ಉಕ್ರೇನ್ಗೂ ಬೆಂಬಲವನ್ನ ನೀಡದೆ ಇತ್ತ ರಷ್ಯಾಗೂ ಬೆಂಬಲ ನೀಡದೆ ಭಾರತ ಶಾಂತಿ ಸಂದೇಶ ಸಾರುತ್ತಿದೆ. ಈಗ ಮುಂದಿನ ಸಭೆಗೂ ಭಾರತ ಬೆಂಬಲ ನೀಡಿದ್ದು, ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಈ ಮೂಲಕ ತಾನು ಬದ್ಧ ಎಂಬ ಮೆಸೇಜ್ ಕೊಟ್ಟಿದೆ ಭಾರತ.
ಒಂದು ಕಡೆ ಹೀಗೆ ಶಾಂತಿ ಮಾತುಕತೆಗೆ ಇಡೀ ಪ್ರಪಂಚವೇ ಮುಂದೆ ಬಂದಿದ್ದರೆ, ಆ ಕಡೆ ರಷ್ಯಾ ಮತ್ತು ಉಕ್ರೇನ್ ಪರಸ್ಪರ ಫೈಟ್ ಮಾಡುತ್ತಿವೆ. ಅದರಲ್ಲೂ ಎರಡೂ ದೇಶಗಳ ಸೇನೆಗಳು ಪರಸ್ಪರ ದಾಳಿ ಮತ್ತು ಪ್ರತಿದಾಳಿ ನಡೆಸುತ್ತಿವೆ. ಹೀಗಾಗಿ ಪರಿಸ್ಥಿತಿ ಭೀಕರವಾಗಿ ಹಿಡಿತಕ್ಕೆ ಸಿಗುವ ಲಕ್ಷಣ ಕಾಣುತ್ತಿಲ್ಲ. ಆದರೂ ಯುದ್ಧ ನಿಲ್ಲಿಸುವ ಪ್ರಯತ್ನ ಆರಂಭ ಆಗಿರುವುದು ಶ್ಲಾಘನೀಯ.












Click it and Unblock the Notifications