ಪಾಕ್ ಪಾಲಿಗೆ ದಾವೂದ್ ಈಗಲೂ ಆಸ್ತಿ, ಯೋಜನೆ ಬದಲಿಸಿದ ಭಾರತ
ಭೂಗತ ಪಾತಕಿ, ಭಯೋತ್ಪಾದಕ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಗಳ ಮೇಲಿನ ಪ್ರಭಾವ ಮುಂದುವರಿದಿದೆ. ಮತ್ತು ಅವನ ದಂಧೆಗಳು ಸಹ ಮುಂದುವರಿದಿವೆ. ಲೆಕ್ಕಾಚಾರದ ಆಟವನ್ನು ದಾವೂದ್ ಮುಂದುವರಿಸಿದ್ದಾನೆ ಎಂದು ಭಾರತದ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
ಕೆಲ ತಿಂಗಳ ಹಿಂದೆ ದಾವೂದ್ ಆತನಿಗೆ ಆರೋಗ್ಯ ಸಮಸ್ಯೆಗಳು ಇರುವ ಬಗ್ಗೆ, ತೀರಾ ಗಂಭೀರ ಸ್ಥಿತಿ ತಲುಪಿದ ಬಗ್ಗೆ ವರದಿಗಳಾಗಿದ್ದವು. ಆದರೆ ಈಗ ಆತನ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
ಪಾಕ್ ನಿಂದ ಹಲೋ ಎಂದ ದಾವೂದ್ ಇಬ್ರಾಹಿಂ
ಅಪ್ಘಾನಿಸ್ತಾನ ಹಾಗೂ ಭಾರತದಲ್ಲಿನ ಮಾದಕ ವಸ್ತುಗಳ ವ್ಯವಹಾರ, ಸಿಕ್ಕಾಪಟ್ಟೆ ಆಮದನಿ ಇರುವ ಮುಂಬೈನಲ್ಲಿನ ಸುಲಿಗೆ ದಂಧೆಯನ್ನು ಸ್ವತಃ ದಾವೂದ್ ಇಬ್ರಾಹಿಂ ನೋಡಿಕೊಳ್ಳುತ್ತಿದ್ದಾನೆ.
ಇನ್ನು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ ಐ ನಿಯಮಿತವಾಗಿ ಆತನ ವಾಸಸ್ಥಳವನ್ನು ಬದಲಿಸುತ್ತಲೇ ಇರುತ್ತದೆ. ಆತನಿಗೆ ಜೀವ ಬೆದರಿಕೆ ಇರುವುದರಿಂದ ಕಳೆದ ಮೂರು ತಿಂಗಳಲ್ಲೇ ನಾಲ್ಕರಿಂದ ಐದು ಸ್ಥಳ ಬದಲಾವಣೆ ಮಾಡಲಾಗಿದೆ ಎಂದು ಆತನ ಚಲನವಲನದ ಮೇಲೆ ಕಣ್ಗಾವಲು ಇರಿಸಿರುವ ಗುಪ್ತಚರ ಇಲಾಖೆ ತಿಳಿಸಿದೆ.
ಪಾಕ್ ನ ಕರಾಚಿಯಿಂದ ದಾವೂದ್ ಮಾತನಾಡಿದ್ದೇನು?
ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹಿಂಗೆ ಅಲ್ಲಿನ ಸರಕಾರ ಬೆಂಬಲವಾಗಿ ನಿಂತಿದೆ. ಆದ್ದರಿಂದ ಆತನನ್ನು ಭಾರತಕ್ಕೆ ಹಸ್ತಾಂತರ ಮಾಡುವ ಸಾಧ್ಯತೆ ಇಲ್ಲವಾದ್ದರಿಂದ ವ್ಯವಹಾರದ ಮೂಲಕ ಬರುವ ಆದಾಯ ಮೂಲಗಳನ್ನೇ ಕಡಿದು ಹಾಕುವುದು ಭಾರತ ಸರಕಾರದ ಗುರಿ. ಅದರಿಂದ ಯುಎಇ ಸರಕಾರದ ಜತೆಗೆ ಸಂಪರ್ಕದಲ್ಲಿರುವ ಭಾರತವು ಅಲ್ಲಿರುವ ದಾವೂದ್ ಇಬ್ರಾಹಿಂ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಮನವಿ ಮಾಡಿದೆ.
ಹಣವಿಲ್ಲದ ದಾವೂದ್ ನನ್ನು ಪಾಕಿಸ್ತಾನ ಕೂಡ ಸಾಕುವುದಿಲ್ಲ. ಆದ್ದರಿಂದಲೇ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.