ಮೋದಿ ಕುರಿತಾದ ನ್ಯೂಯಾರ್ಕ್ ಟೈಮ್ಸ್ ಸಂಪಾದಕೀಯ
ಅಹಮದಾಬಾದ್ ಅ.28: ಇತ್ತ, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಚುನಾವಣಾ ಸಮಾವೇಶದ ಆಸುಪಾಸಿನಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ, ಆರೇಳು ಜನರ ಸಾವಿಗೆ ಕಾರಣವಾಗಿದ್ದರೆ ಅತ್ತ 'ನ್ಯೂಯಾರ್ಕ್ ಟೈಮ್ಸ್' ಅಪರೂಪಕ್ಕೆಂಬಂತೆ ಭಾರತದ ರಾಜಕೀಯದ ಬಗ್ಗೆ ಸಂಪಾದಕೀಯ ಬರೆದಿದ್ದು ಮೋದಿ ಮತ್ತು ರಾಹುಲ್ ಗಾಂಧಿ ಬಗ್ಗೆ ಅಸಹನೆಯ ಭಾವನೆ ಹುಟ್ಟುಹಾಕಿದೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೆಚ್ಚಿನ ಜನರಲ್ಲಿ ಹೆದರಿಕೆ ಮತ್ತು ಅಸಹನೆಯ ಭಾವನೆಯನ್ನು ಹುಟ್ಟಿಸಿದರೆ ಪರಿಣಾಮಕಾರಿಯಾಗಿ ಭಾರತವನ್ನು ಮುನ್ನಡೆಸುವ ನಿರೀಕ್ಷೆಯನ್ನು ಅವರು ಇಟ್ಟುಕೊಳ್ಳುವಂತಿಲ್ಲ ಎಂದು 'ನ್ಯೂಯಾರ್ಕ್ ಟೈಮ್ಸ್' ಅಭಿಪ್ರಾಯಪಟ್ಟಿದೆ.
ಶನಿವಾರ ಪ್ರಕಟಗೊಂಡ ಸಂಪಾದಕೀಯದಲ್ಲಿ ಗುಜರಾತಿನಲ್ಲಿ ಮೋದಿಯ ಆರ್ಥಿಕ ನಿರ್ವಹಣೆಯನ್ನೂ ಪ್ರಶ್ನಿಸಲಾಗಿದೆ. ನವದೆಹಲಿಯಲ್ಲಿ ಜನಿಸಿದ ಆ್ಯಂಡ್ರೂ ರೋಸಂತಲ್ ನೇತೃತ್ವದ 19 ಸದಸ್ಯರ ಸಂಪಾದಕೀಯ ಮಂಡಳಿ ಈ ವಾದ ಮಂಡಿಸಿದೆ.
ಹೊಸ ನಾಯಕ/ ಹೊಸ ಐಡಿಯಾ ಇಲ್ಲದ ಕಾಂಗ್ರೆಸ್ ಪಕ್ಷವು ನೆಹರೂ- ಗಾಂಧಿ ಕುಟುಂಬದ ರಾಹುಲ್ ಗಾಂಧಿ ಅವರನ್ನೇ ನೆಚ್ಚಿಕೊಳ್ಳುವ ಮೂಲಕ ಅನನುಭವಿ ಯುವ ನಾಯಕನಿಗೆ ಮಣೆ ಹಾಕಿದೆ ಎಂದೂ ಸಂಪಾದಕೀಯ ಮಂಡಳಿ ಜರಿದಿದೆ. (ಸಂಪಾದಕೀಯದ ಪೂರ್ಣ ಪಾಠಕ್ಕೆ ಇಲ್ಲಿ ಕ್ಲಿಕ್ಕಿಸಿ)
ಮತ್ತೆ ಮೋದಿ ವಿಷಯಕ್ಕೆ ಬಂದರೆ 'ಪ್ರತಿಪಕ್ಷಗಳೊಂದಿಗೆ ಕೆಲಸ ಮಾಡುವ ಅಥವಾ ಭಿನ್ನಮತವನ್ನು ಸಹಿಸುವ ಸಾಮರ್ಥ್ಯವನ್ನು ಮೋದಿ ಪ್ರದರ್ಶಿಸಿಲ್ಲ' ಎಂದು 'ನ್ಯೂಯಾರ್ಕ್ ಟೈಮ್ಸ್' ಸಂಪಾದಕೀಯ ಮಂಡಳಿಯು ತೀಕ್ಷ್ಣ ಸಂಪಾದಕೀಯ ಬರೆದಿದೆ.
ಬಿಜೆಪಿ ಜತೆಗಿನ ರಾಜಕೀಯ ಮೈತ್ರಿ ಕೂಟ ಪಕ್ಷಗಳನ್ನು ಮೋದಿ ಈಗಾಗಲೇ ದೂರ ಮಾಡಿದ್ದಾರೆ ಎಂದು ಸಂಪಾದಕೀಯ ಅಭಿಪ್ರಾಯಪಟ್ಟಿದೆ. ಪ್ರಧಾನಿ ಅಭ್ಯರ್ಥಿಯಾಗಿ ಮೋದಿಯನ್ನು ಸ್ವೀಕರಿಸಲು ಒಪ್ಪದ ಪ್ರಮುಖ ಪ್ರಾದೇಶಿಕ ಪಕ್ಷವಾಗಿರುವ ಜೆಡಿಯು, ಬಿಜೆಪಿ ಜತೆಗಿನ 17 ವರ್ಷಗಳ ಮೈತ್ರಿಯನ್ನು ಕಡಿದುಕೊಂಡಿರುವುದನ್ನು ಸಂಪಾದಕೀಯ ಉಲ್ಲೇಖಿಸಿದೆ.
ಭಾರತ ಹಲವು ಧರ್ಮಗಳಿರುವ ದೇಶ ಎಂದು ಹೇಳಿರುವ ಅಮೆರಿಕದ ಪತ್ರಿಕೆ, 'ದೇಶದ ಹೆಚ್ಚಿನ ಜನರಲ್ಲಿ ಮೋದಿ ಹೆದರಿಕೆ ಮತ್ತು ಅಸಹನೆಯನ್ನು ಮೂಡಿಸಿದರೆ ಭಾರತವನ್ನು ಪರಿಣಾಮಕಾರಿಯಾಗಿ ಮುನ್ನಡೆಸುವ ನಿರೀಕ್ಷೆಯನ್ನು ಅವರು ಇಟ್ಟುಕೊಳ್ಳುವಂತಿಲ್ಲ' ಎಂದು ವಾದಿಸಿದೆ. ಮೋದಿ ಮುಖ್ಯಮಂತ್ರಿಯಾಗಿರುವ ಗುಜರಾತಿನಲ್ಲಿ 2002ರಲ್ಲಿ ನಡೆದ ಹಿಂಸಾಚಾರದಲ್ಲಿ 1,000ಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವುದನ್ನು ಪತ್ರಿಕೆ ಉಲ್ಲೇಖಿಸಿದೆ.
'ಗುಜರಾತಿನಲ್ಲಿನ ಹಣಕಾಸು ನಿರ್ವಹಣೆಯೂ ಸಂಪೂರ್ಣವಾಗಿ ಪ್ರಶಂಸಾರ್ಹವಲ್ಲ. ಗುಜರಾತ್ ಬಡತನ ರೇಖೆ ದೇಶದಕ್ಕಿಂತ ಕೆಳಗಿದೆ. ಅದರಲ್ಲೂ ಗುಜರಾತ್ ಮುಸ್ಲಿಮರು ಭಾರತದ ಮುಸ್ಲಿಮರಿಗಿಂತ ಅತ್ಯಂತ ಹೆಚ್ಚು ಬಡವರಾಗಿದ್ದಾರೆ. ಅವರು ಅಧಿಕಾರಕ್ಕೇರುವುದನ್ನು ಹೆಚ್ಚಿನ ಭಾರತೀಯರು, ವಿಶೇಷವಾಗಿ ದೇಶದ ಮುಸ್ಲಿಮರು ಮತ್ತು ಇತರ ಹಲವು ಅಲ್ಪಸಂಖ್ಯಾತರು, ಇಷ್ಟಪಡುತ್ತಿಲ್ಲ' ಎಂದು ಸಂಪಾದಕೀಯ ಮಂಡಳಿ ಹೇಳಿದೆ.