ಬಾಂಗ್ಲಾದೇಶದ ಪುರಾತನ ಕಾಳಿ ದೇವಸ್ಥಾನದ ಮೇಲೆ ಉಗ್ರರ ದಾಳಿ: ಕಿಲೋಮೀಟರ್ ದೂರದಲ್ಲಿ ವಿಗ್ರಹ ಪತ್ತೆ
ಢಾಕಾ, ಅಕ್ಟೋಬರ್ 8: ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಉಗ್ರರು ನಿರಂತರವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು, ಕಳೆದ ವರ್ಷದಂತೆ ಈ ಬಾರಿಯೂ ಹಿಂದೂಗಳ ದೇಗುಲದ ಮೇಲೆ ದಾಳಿ ಮಾಡಿದ್ದಾರೆ. ಬಾಂಗ್ಲಾದೇಶದ ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪುರಾತನ ಹಿಂದೂ ದೇವಾಲಯವನ್ನು ಉಗ್ರಗಾಮಿಗಳು ಗುರಿಯಾಗಿಸಿಕೊಂಡಿದ್ದಾರೆ. ದೇವಾಲಯದೊಳಗಿನ ಪ್ರತಿಮೆಯ ಮೇಲೆ ದಾಳಿ ಮಾಡಿದ್ದಾರೆ. ವರದಿಯ ಪ್ರಕಾರ ಅಪರಿಚಿತ ಮೂಲಭೂತವಾದಿಗಳು ಬಾಂಗ್ಲಾದೇಶದ ಜೆನೈದಾ ಜಿಲ್ಲೆಯ ಪುರಾತನ ಕಾಳಿ ದೇವಸ್ಥಾನದ ಮೇಲೆ ದಾಳಿ ಮಾಡಿ ವಿಗ್ರಹ ಒಡೆದು ಅರ್ಧ ಕಿಲೋಮೀಟರ್ ದೂರ ಎಸೆದಿದ್ದಾರೆ.
ಬಾಂಗ್ಲಾದೇಶದ ಸುದ್ದಿ ಪೋರ್ಟಲ್ bdnews24.comಗೆ ದೇವಾಲಯದ ಸಮಿತಿಯ ಅಧ್ಯಕ್ಷ ಸುಕುಮಾರ್ ಕುಂದಾ ಅವರು, 'ದೌಟಿಯಾ ಗ್ರಾಮದ ಕಾಳಿ ದೇವಸ್ಥಾನಕ್ಕೆ ಪ್ರವೇಶಿಸಿದ ಅಪರಿಚಿತ ಮತಾಂಧರು ಪ್ರತಿಮೆಯನ್ನು ಹಾನಿಗೊಳಿಸಿದರು ಮತ್ತು ವಿಗ್ರಹವನ್ನು ಹಲವು ಭಾಗಗಳಾಗಿ ಒಡೆದುಹಾಕಿದ್ದಾರೆ ಎಂದು ಹೇಳಿದ್ದಾರೆ. ಈ ದೇವಾಲಯವು ಬಹಳ ಪುರಾತನವಾಗಿದೆ. ವಸಾಹತುಶಾಹಿ ಕಾಲದಿಂದಲೂ ದೇವಾಲಯದ ಒಳಗೆ ಪೂಜೆಯನ್ನು ಮಾಡಲಾಗುತ್ತಿತ್ತು. ಈ ದೇವಾಲಯವು ಬಾಂಗ್ಲಾದೇಶದ ಝೆನೈದಾ ಜಿಲ್ಲೆಯ ದೌತಿಯಾ ಗ್ರಾಮದಲ್ಲಿದ್ದು, ಅಲ್ಲಿ ಉಗ್ರರ ದಾಳಿ ನಡೆದಿದೆ' ಎಂದು ತಿಳಿಸಿದ್ದಾರೆ.
ವಿಗ್ರಹ ಒಡೆದು ಅರ್ಧ ಕಿಲೋಮೀಟರ್ ದೂರ ಎಸೆದ ಉಗ್ರರು
ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಬರ್ಮನ್ ಅವರ ಪ್ರಕಾರ, ಗುರುವಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಆರೋಪಿಗಳಿಗಾಗಿ ಶೋಧ ಆರಂಭಿಸಲಾಗಿದೆ. ರಾತ್ರಿಯ ಲಾಭ ಪಡೆದ ದುಷ್ಕರ್ಮಿಗಳು ದೇವಸ್ಥಾನದ ಮೇಲೆ ದಾಳಿ ಮಾಡಿ ವಿಗ್ರಹಕ್ಕೆ ಹಾನಿ ಮಾಡಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಸುಕುಮಾರ್ ಕುಂದಾ ತಿಳಿಸಿದ್ದಾರೆ. ಆರೋಪಿಗಳು ದೇವಸ್ಥಾನದ ಒಳಗೆ ನುಗ್ಗಿ ಧ್ವಂಸ ಮಾಡಿದ್ದಾರೆ. bdnews24.com ಪ್ರಕಾರ, ವಿಗ್ರಹದ ತಲೆ ಭಾಗವು ದೇವಾಲಯದಿಂದ ಅರ್ಧ ಕಿಲೋಮೀಟರ್ ದೂರದ ರಸ್ತೆಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ಈ ಹಿಂದೆಯೂ ಬಾಂಗ್ಲಾದೇಶ ದೇಗುಲಗಳ ಮೇಲೆ ದಾಳಿ
ಬಾಂಗ್ಲಾದೇಶದಲ್ಲಿ ಕಳೆದ ವರ್ಷವೂ ದುರ್ಗಾ ಪೂಜೆಯ ವೇಳೆ ದೇವಸ್ಥಾನಗಳ ಮೇಲೆ ದಾಳಿ ನಡೆದಿತ್ತು. ಈ ಬಾರಿಯೂ ದುರ್ಗಾ ಪೂಜೆ ಮುಗಿದ ನಂತರ ದಸರಾದ ಮರುದಿನವೇ ದೇವಾಲಯದ ಮೇಲೆ ದಾಳಿ ಮಾಡಲಾಗಿದೆ. ಬಾಂಗ್ಲಾದೇಶದ ದೇವಸ್ಥಾನದ ವಿಗ್ರಹಗಳನ್ನು ಧ್ವಂಸಗೊಳಿಸಿರುವ ಘಟನೆ ಇದೇ ಮೊದಲಲ್ಲ. ಈ ವರ್ಷದ ಮಾರ್ಚ್ 17 ರಂದು, ಢಾಕಾದ ಇಸ್ಕಾನ್ ರಾಧಾಕಾಂತ ದೇವಾಲಯವನ್ನು ಧ್ವಂಸಗೊಳಿಸಿ ವಿಗ್ರಹಗಳನ್ನು ಎಸೆಯಲಾಯಿತು. ಇದೇ ವೇಳೆ ಹಲವು ಭಕ್ತರನ್ನು ಮೂಲಭೂತವಾದಿಗಳು ಥಳಿಸಿದ್ದರು.
ಮಾರ್ಚ್ 17ರಂದು ಇದೇ ರೀತಿ ದಾಳಿ
ಇಸ್ಕಾನ್ ದೇವಸ್ಥಾನದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಾನಿ ಕೃಷ್ಣ ದಾಸ್ ಅವರ ಹೇಳಿಕೆಯಂತೆ ಈ ಹಿಂದೆ, "ಹಾಜಿ ಶಫಿವುಲ್ಲಾ ನೇತೃತ್ವದಲ್ಲಿ 200 ಕ್ಕೂ ಹೆಚ್ಚು ಮೂಲಭೂತವಾದಿಗಳು ಇಸ್ಕಾನ್ ರಾಧಾಕಾಂತ ದೇವಸ್ಥಾನದ ಮೇಲೆ ದಾಳಿ ಮಾಡಿದರು ಮತ್ತು ದೇವಾಲಯವನ್ನು ಧ್ವಂಸಗೊಳಿಸಿದ್ದರು. ಇದಕ್ಕೂ ಮೊದಲು 16 ಅಕ್ಟೋಬರ್ 2021 ರಂದು, ಬಾಂಗ್ಲಾದೇಶದ ನೊವಾಖಾಲಿ ನಗರದಲ್ಲಿ ದೇವಸ್ಥಾನವನ್ನು ಧ್ವಂಸಗೊಳಿಸಲಾಯಿತು ಮತ್ತು ಭಕ್ತನನ್ನು ಜನಸಮೂಹವು ಕೊಂದಿತು''.
ಆ.6 ರಂದು ಮದರಸಾದ ಮೂವರು ವಿದ್ಯಾರ್ಥಿಗಳ ಬಂಧನ
ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಉಗ್ರಗಾಮಿಗಳ ಗುಂಪುಗಳು ಆಗಾಗ ದಾಳಿ ನಡೆಸುತ್ತಲೇ ಇರುತ್ತವೆ. ಮೊಂಗ್ಲಾದ ಕೆನ್ಮಾರಿ ದೇವಸ್ಥಾನದಲ್ಲಿ ಹಿಂದೂ ದೇವತೆಗಳ ವಿಗ್ರಹಗಳಿಗೆ ಹಾನಿ ಮಾಡಿದ ಆರೋಪದಲ್ಲಿ ಬಾಂಗ್ಲಾದೇಶದಲ್ಲಿ ಆಗಸ್ಟ್ 6 ರಂದು ಮದರಸಾದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ದೇವಸ್ಥಾನದ ಪಕ್ಕದ ಮೈದಾನದಲ್ಲಿ ಫುಟ್ಬಾಲ್ ಆಡುವುದನ್ನು ನಿಲ್ಲಿಸುವಂತೆ ಮದರಸಾದ ಹಲವಾರು ಮುಸ್ಲಿಂ ಯುವಕರಿಗೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದಾಗ ಈ ಘಟನೆ ನಡೆದಿದೆ. ಅದೇ ಸಮಯದಲ್ಲಿ, ಜುಲೈ 16 ರಂದು, ನರೆಲ್ನ ಲೋಹಾಗ್ರಾದ ಸಹಪಾರಾ ಪ್ರದೇಶದಲ್ಲಿ ಮುಸ್ಲಿಂ ಗುಂಪೊಂದು ದೇವಸ್ಥಾನವನ್ನು ಸಂಪೂರ್ಣವಾಗಿ ಕೆಡವಿತು.