ಆಸ್ಟ್ರೇಲಿಯಾದಲ್ಲಿ ಭಾರತದ ವಿದ್ಯಾರ್ಥಿಯನ್ನು ಕಬ್ಬಿಣದ ರಾಡ್ಗಳಿಂದ ಥಳಿಸಿದ ಖಲಿಸ್ತಾನ್ ಬೆಂಬಲಿಗರು
ಸಿಡ್ನಿ, ಜುಲೈ 14: ಭಾರತ ವಿರೋಧಿ ಚಟುವಟಿಕೆಗಳನ್ನು ಪ್ರಶ್ನಿಸಿದ್ದಕ್ಕಾಗಿ 23 ವರ್ಷದ ಭಾರತೀಯ ವಿದ್ಯಾರ್ಥಿ ಮೇಲೆ ಆಸ್ಟ್ರೇಲಿಯಾದಲ್ಲಿ ಮಾರಣಾಂತಿಕ ಹಲ್ಲೆಯಾಗಿದೆ. ಖಾಲಿಸ್ತಾನ್ ಬೆಂಬಲಿಗರು ವಿದ್ಯಾರ್ಥಿಗೆ ಕಬ್ಬಿಣದ ರಾಡ್ಗಳಿಂದ ಥಳಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ಶುಕ್ರವಾರ ತಿಳಿಸಿದೆ.
ಸಿಡ್ನಿಯ ಪಶ್ಚಿಮ ಉಪನಗರವಾದ ಮೆರಿಲ್ಯಾಂಡ್ಸ್ನಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಯು ವಾಹನದಲ್ಲಿ ಹೋಗುತ್ತಿದ್ದಾಗ 'ಖಲಿಸ್ತಾನ್ ಜಿಂದಾಬಾದ್' ಎಂದು ದುಷ್ಕರ್ಮಿಗಳು ಘೋಷಣೆ ಕೂಗಿದ್ದಾರೆ. ಅದನ್ನು ವಿದ್ಯಾರ್ಥಿ ಪ್ರಶ್ನಿಸಿದ್ದಾರೆ. ಆಗ ಆತನ ಮೇಲೆ ಕಬ್ಬಿನದ ರಾಡ್ನಿಂದ ಖಲಿಸ್ತಾನ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು 'ದಿ ಆಸ್ಟ್ರೇಲಿಯಾ ಟುಡೇ' ನ್ಯೂಸ್ ಪೋರ್ಟಲ್ ವರದಿ ಮಾಡಿದೆ.

ಇಂದು ಬೆಳಗ್ಗೆ 5.30ಕ್ಕೆ ನಾನು ಕೆಲಸಕ್ಕೆ ಹೋಗುತ್ತಿದ್ದೆ. ಖಲಿಸ್ತಾನ್ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ಹೇಳಿರುವುದಾಗಿ ವರದಿಯಾಗಿದೆ. ವಿದ್ಯಾರ್ಥಿಯು ತನ್ನ ಹೆಸರನ್ನು ಬಹಿರಂಗಪಡಿಸದಿರಲು ಕೋರಿದ್ದಾನೆ.
'ನಾನು ನನ್ನ ಡ್ರೈವಿಂಗ್ ಸೀಟಿನಲ್ಲಿ ಕುಳಿತ ತಕ್ಷಣ, ಖಾಲಿಸ್ತಾನ್ ಬೆಂಬಲಿಗರು ಎಲ್ಲಿಂದಲೋ ಬಂದರು. ಖಲಿಸ್ತಾನ್ ಜಿಂದಾಬಾದ್ ಎಂದು ಕೂಗಿದರು. ಅದಕ್ಕೆ ನಾನು ಪ್ರತಿಕ್ರಿಯಿಸಿದೆ. ಅವರಲ್ಲಿ ಒಬ್ಬ ನನ್ನ ವಾಹನದ ಎಡಬಾಗದ ಬಾಗಿಲನ್ನು ತೆರೆದ. ನನ್ನನ್ನು ಹೊರಗೆಳೆದರು. ನನ್ನ ಕೆನ್ನೆಗೆ ಹೊಡೆದರು. ಕಬ್ಬಿನದ ಸಲಾಖೆಯಿಂದ ಹಲ್ಲೆ ನಡೆಸಿದರು' ಎಂದು ವಿದ್ಯಾರ್ಥಿ ಮಾಹಿತಿ ನೀಡಿದ್ದಾನೆ.
ಖಲಿಸ್ತಾನದ ಬೆಂಬಲಿಗರಲ್ಲಿ ಇಬ್ಬರು ದಾಳಿಯ ದೃಶ್ಯವನ್ನು ವಿಡಿಯೊ ರೆಕಾರ್ಡ್ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

'ಖಲಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಯನ್ನು ಅವರು ಪದೇ ಪದೇ ಹೇಳುತ್ತಿದ್ದರು ಎಂದು ಆತ ತಿಳಿಸಿದ್ದಾನೆ.
ಖಲಿಸ್ತಾನ್ ಬೆಂಬಲಿಗರನ್ನು ವಿರೋಧಿಸಿದ್ದಕ್ಕೆ ನಿನಗೆ ತಕ್ಕ ಶಾಸ್ತಿ ಮಾಡುತ್ತಿದ್ದೇವೆ ಎಂದು ಹೇಳಿ ದಾಳಿಕೋರರು ಹೊರಟು ಹೋದರು ಎಂದು ವಿದ್ಯಾರ್ಥಿ ಹೇಳಿದ್ದಾನೆ. ಇದಕ್ಕೂ ಸುಮ್ಮನಾಗದಿದ್ದರೆ, ಕೊಲೆ ಗೈಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾನೆ.
ಘಟನೆಯ ಬಗ್ಗೆ ನ್ಯೂ ಸೌತ್ ವೇಲ್ಸ್ (ಎನ್ಎಸ್ಎಫ್) ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಭಾರತೀಯ ವಿದ್ಯಾರ್ಥಿಯ ತಲೆ, ಕಾಲು ಮತ್ತು ತೋಳಿಗೆ ಹೆಚ್ಚಿನ ಗಾಯಗಳಾಗಿವೆ. ಆತನನ್ನು ವೆಸ್ಟ್ಮೀಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ.

'23 ವರ್ಷದ ವಿದ್ಯಾರ್ಥಿಯೊಬ್ಬನ ಮೇಲೆ ರೂಪರ್ಟ್ ಸ್ಟ್ರೀಟ್ನಲ್ಲಿ ಹಲ್ಲೆ ಮಾಡಲಾಗಿದೆ. ನಾಲ್ವರು ಕಬ್ಬಿನದ ಸಲಾಕೆಯಿಂದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ವಕ್ತಾರರು ವರದಿಯಲ್ಲಿ ತಿಳಿಸಿದ್ದಾರೆ.
ಘಟನೆಗೆ ಪ್ರತಿಕ್ರಿಯಿಸಿರುವ ಮೆರ್ರಿಲ್ಯಾಂಡ್ಸ್ ಸಂಸದರು, 'ನಮ್ಮ ಸ್ಥಳೀಯ ಸಮುದಾಯದಲ್ಲಿ ಯಾವುದೇ ರೀತಿಯ ಉಗ್ರವಾದ ಅಥವಾ ಹಿಂಸಾಚಾರಕ್ಕೆ ಜಾಗವಿಲ್ಲ. ನಾನು ಈ ಘಟನೆಯ ಬಗ್ಗೆ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ಪ್ರಕರಣದ ಬಗ್ಗೆ ಮೇಲ್ವಿಚಾರಣೆ ಮಾಡುತ್ತೇನೆ' ಎಂದು ಹೇಳಿದ್ದಾರೆ.
ಖಾಲಿಸ್ತಾನ್ ಬೆಂಬಲಿಗರು ಮತ್ತು ಭಾರತದ ಪರ ಪ್ರತಿಭಟನಾಕಾರರ ನಡುವೆ ಜನವರಿಯಲ್ಲಿ ಸಂಘರ್ಷಗಳು ನಡೆದಿವೆ.
ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಭಾರತ ವಿರೋಧಿ ಚಟುವಟಿಕೆಗಳು ಮತ್ತು ಹಿಂದೂ ದೇವಾಲಯಗಳ ಮೇಲಿನ ದಾಳಿಗಳನ್ನು ತಡೆಯುವಂತೆ ಭಾರತವು ಆಸ್ಟ್ರೇಲಿಯಾ ಸರ್ಕಾರವನ್ನು ಕೇಳಿಕೊಂಡಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ, ಹಿಂಸಾಚಾರವನ್ನು ಪ್ರತಿಪಾದಿಸುವವರಿಗೆ ಜಾಗ ನೀಡಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಇತ್ತೀಚೆಗೆ ನವದೆಹಲಿಯಲ್ಲಿ ಹೇಳಿದ್ದಾರೆ.












Click it and Unblock the Notifications