ಪಕ್ಷದ ಸಂಸದರಿಗೆ 2 ಆಯ್ಕೆ ಕೊಟ್ಟ ಪ್ರಧಾನಿ ಇಮ್ರಾನ್ ಖಾನ್
ಇಸ್ಲಾಮಾಬಾದ್, ಮಾರ್ಚ್ 30; ಅವಿಶ್ವಾಸ ನಿರ್ಣಯದ ಮೇಲಿನ ಮತದಾನದ ದಿನ ಸದನಕ್ಕೆ ಹಾಜರಾಗಬೇಡಿ ಅಥವ ಮತದಾನ ಮಾಡದೇ ತಟಸ್ಥವಾಗಿರಿ ಎಂದು ಪಕ್ಷದ ಸಂಸದರಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸೂಚನೆ ನೀಡಿದ್ದಾರೆ.
ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಸೋಮವಾರ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದಾರೆ. ಗುರುವಾರದಿಂದ ಸಂಸತ್ನಲ್ಲಿ ಈ ಕುರಿತು ಚರ್ಚೆಗಳು ನಡೆಯಲಿವೆ.
2018ರಲ್ಲಿ ಪಾಕಿಸ್ತಾನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹಲವು ಕಷ್ಟದ ಪರಿಸ್ಥಿತಿಗಳನ್ನು ಇಮ್ರಾನ್ ಖಾನ್ ಎದುರಿಸಿದ್ದಾರೆ. ಈಗ ವಿಶ್ವಾಸ ಮತ ಸಾಬೀತು ಮಾಡಲಾಗದೇ ರಾಜೀನಾಮೆ ನೀಡುವ ಪರಿಸ್ಥಿತಿಯೂ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.
ಸೋಮವಾರ ಮಂಡನೆ ಮಾಡಿರುವ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಗುರುವಾರದಿಂದ ಪಾಕಿಸ್ತಾನ ಸಂಸತ್ನಲ್ಲಿ ಚರ್ಚೆಗಳು ನಡೆಯಲಿವೆ. ಈ ಹಿನ್ನಲೆಯಲ್ಲಿ ಕಲಾಪಕ್ಕೆ ಬರಬೇಡಿ, ಇಲ್ಲವೇ ತಟಸ್ಥವಾಗಿರಿ ಎಂದು ಇಮ್ರಾನ್ ಖಾನ್ ಸಂಸದರಿಗೆ ಸೂಚಿಸಿದ್ದಾರೆ.
ಪಾಕಿಸ್ತಾನದ ಸಂಸತ್ ಬಲ 342. ಸರ್ಕಾರವನ್ನು ಉರುಳಿಸಲು 172 ಮತಗಳು ಸಾಕು. ಅವಿಶ್ವಾಸ ನಿರ್ಣಯ ಮಂಡಿಸಿರುವ ಪ್ರತಿಪಕ್ಷ ತನ್ನ ಬಳಿ 172 ಸದಸ್ಯ ಬಲವಿದೆ ಎಂದು ಹೇಳಿದೆ. ಇದರಿಂದಾಗಿ ಇಮ್ರಾನ್ ಖಾನ್ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಆರಂಭಿಸಿದ್ದಾರೆ.

ಸಂಸದರಿಗೆ ಇಮ್ರಾನ್ ಖಾನ್ ಪತ್ರ
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಅಧ್ಯಕ್ಷ, ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಪಕ್ಷದ ಸಂಸದರಿಗೆ ಪತ್ರವೊಂದನ್ನು ಬರೆದಿದ್ದಾರೆ. "ಸದನದಲ್ಲಿ ಮತದಾನ ನಡೆಯುವ ದಿನ ಎಲ್ಲಾ ಸದಸ್ಯರು ಮತದಾನದಿಂದ ದೂರಬೇಕು ಅಥವ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಸದನಕ್ಕೆ ಹಾಜರಾಗಬಾರದು ಎಂದು ಪಕ್ಷ ತೀರ್ಮಾನಿಸಿದೆ" ಎಂದು ಪತ್ರದಲ್ಲಿ ಹೇಳಿದ್ದಾರೆ.
"ಪಕ್ಷದ ತೀರ್ಮಾನವನ್ನು ಎಲ್ಲಾ ಸಂಸದರು ಪಾಲಿಸಬೇಕು. ಯಾವುದೇ ಸಂಸದರು ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕಾಯ್ದೆ 63 (ಎ) ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.

ಯಾರೂ ಸಹ ವಿಶ್ವಾಸ ಮತ ಗೆದ್ದಿಲ್ಲ
ಪಾಕಿಸ್ತಾನದ ಇತಿಹಾಸದಲ್ಲಿಯೇ ಯಾವುದೇ ಪ್ರಧಾನಿ ಅವಿಶ್ವಾಸ ನಿರ್ಣಯದಲ್ಲಿ ಜಯಗಳಿಸಿ ಅಧಿಕಾರದಲ್ಲಿ ಮುಂದುವರೆದಿಲ್ಲ. ಈ ಹಿನ್ನಲೆಯಲ್ಲಿ ಇಮ್ರಾನ್ ಖಾನ್ ಸರ್ಕಾರವೂ ಪತನಗೊಳ್ಳಲಿದೆಯೇ ಎಂಬ ಲೆಕ್ಕಾಚಾರ ಆರಂಭವಾಗಿದೆ.
ಇಮ್ರಾನ್ ಖಾನ್ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮಿತ್ರ ಪಕ್ಷ ಜಮ್ದೂರಿ ವತನ್ ಪಾರ್ಟಿ ಮೈತ್ರಿಕೂಟದಿಂದ ಹೊರಬಂದಿದೆ. ಅವಿಶ್ವಾಸ ಗೊತ್ತುವಳಿ ಪರವಾಗಿ ಮತ ಚಲಾವಣೆ ಮಾಡುತ್ತೇವೆ ಎಂದು ಹೇಳಿದ್ದು, ಇಮ್ರಾನ್ ಖಾನ್ಗೆ ಹೊಸ ಸಂಕಷ್ಟ ತಂದಿದೆ.

ಗುರುವಾರದಿಂದ ಅಧಿವೇಶನ
ಪಾಕಿಸ್ತಾನ ಸಂಸತ್ ಕಲಾಪ ಗುರುವಾರ ಆರಂಭವಾಗಲಿದೆ. ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಮಂಡಿಸಿರುವ ಅವಿಶ್ವಾಸ ನಿರ್ಣಯದ ಚರ್ಚೆಗಳು ಆರಂಭವಾಗಲಿದೆ. ಏಪ್ರಿಲ್ 3ರಂದು ಮತದಾನ ನಡೆಯಲಿದೆ ಎಂದು ಪಾಕಿಸ್ತಾನದ ಆಂತರಿಕ ವ್ಯವಹಾರ ಸಚಿವ ಶೇಖ್ ರಶೀದ್ ಹೇಳಿದ್ದಾರೆ.
ಪ್ರತಿಪಕ್ಷ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ, "ನಮ್ಮ ಮೇಲೆ ನಡೆದ ದಾಳಿಗಳಿಗೆ ನಾವು ಹೆದರುವುದಿಲ್ಲ. ನೀವು ಬಾಲ್ ಟ್ಯಾಂಪರಿಂಗ್ ಮಾಡಬೇಡಿ. ಸದನದಲ್ಲಿ 172 ಸದಸ್ಯ ಬಲ ತೋರಿಸಿ ಇಲ್ಲವೇ ಮನೆಗೆ ನಡೆಯಿರಿ" ಎಂದ ಇಮ್ರಾನ್ ಖಾನ್ಗೆ ಕ್ರಿಕೆಟ್ ಭಾಷೆಯಲ್ಲಿಯೇ ಸವಾಲು ಹಾಕಿದ್ದಾರೆ.

ಸಮಾವೇಶದಲ್ಲಿ ಶಕ್ತಿ ಪ್ರದರ್ಶನ
ಭಾನುವಾರ ಇಸ್ಲಾಮಾಬಾದ್ನಲ್ಲಿ ಪಕ್ಷದ ಬೃಹತ್ ಸಮಾವೇಶ ನಡೆಸುವ ಮೂಲಕ ಇಮ್ರಾನ್ ಖಾನ್ ಶಕ್ತಿ ಪ್ರದರ್ಶನ ಮಾಡಿದರು. ತಮ್ಮ ಸರ್ಕಾರದ ವಿದೇಶಾಂಗ ನೀತಿಗಳನ್ನು ಜನರ ಮುಂದಿಟ್ಟರು. ಈ ಸಮಾವೇಶಕ್ಕೆ ಭಾರೀ ಜನರು ಸೇರಿದ್ದರು. ಆದರೆ ಪಾಕಿಸ್ತಾನ ಸಂಸತ್ನಲ್ಲಿ ಬಹುಮತ ಸಾಬೀತು ಮಾಡಿ ಸರ್ಕಾರ ಉಳಿಸಿಕೊಳ್ಳಲು ಇಮ್ರಾನ್ ಖಾನ್ ಸಫಲರಾಗುತ್ತಾರೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications