ಮಿಸ್ಟರ್ 'ಯೋಗಿ'- ವಿವಾದ, ಹಿಂದುತ್ವ, ಸನ್ಯಾಸದ ಮಿಕ್ಸ್ಚರ್
ಯೋಗಿ ಆದಿತ್ಯನಾಥ್ ರಾತ್ರೋರಾತ್ರಿ ಉತ್ತರಪ್ರದೇಶ ಮುಖ್ಯಮಂತ್ರಿ ಗಾದಿಗೆ ಆಯ್ಕೆ ಆದವರಲ್ಲ. ಅವರು ಸವೆಸಿದ ಹಾದಿ, ಮೆಟ್ಟಿದ ಮುಳ್ಳುಗಳನ್ನು ಗಮನಿಸಿದರೆ ಎಂಥ ಸನ್ಯಾಸಿ ಎಂಬುದು ಗೊತ್ತಾಗುತ್ತದೆ. ಅವರ ಹೇಳಿಕೆ, ಹೋರಾಟದ ಹಾದಿಯ ವಿವರಗಳು ಇಲ್ಲಿವೆ
ಆತ ಯೋಗಿ. ಗೋರಖ್ ನಾಥ್ ಮಠದ ಮುಖ್ಯಸ್ಥ ಮತ್ತು ಉತ್ತರಪ್ರದೇಶದ ಆಡಳಿತ ಚುಕ್ಕಾಣಿ ಹಿಡಿದಿರುವಾತ. ಹೌದು, ಇದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಗ್ಗೆಯೇ. ಹಿಂದುತ್ವದ ಪ್ರಬಲ ಪ್ರತಿಪಾದಕರಾದ ಆದಿತ್ಯನಾಥ್, ಅಭಿವೃದ್ಧಿಪರ ಚಿಂತಕ ಎಂದು ಕೂಡ ಜನರಿಂದ ಹೊಗಳಿಸಿಕೊಳ್ಳುತ್ತಾರೆ.
ಆತ ಈ ಎಲ್ಲದರ ಪೈಕಿ ಯಾವುದೋ ಹೌದೋ ಅಲ್ಲವೋ ಎಂಬ ಬಗ್ಗೆ ಅನುಮಾನ ಮೂಡಬಹುದು. ಆದರೆ ಯೋಗಿ ಆದಿತ್ಯನಾಥ್ ಅಂದರೆ ಫೈರ್ ಬ್ರ್ಯಾಂಡ್ ಎಂಬುದರಲ್ಲಿ ಎರಡು ಮಾತಿಲ್ಲ. ವಿವಾದಕ್ಕೂ ಆದಿತ್ಯನಾಥ್ ಗೂ ಬಿಡಿಸಲಾಗದ ನಂಟು. ಅದೇನೇ ವಿವಾದಗಳು ಅಂತ ಇದ್ದರೂ ಉತ್ತರಪ್ರದೇಶದ ಉನ್ನತ ಹುದ್ದೆಗೆ ಬಿಜೆಪಿ ಪಾಲಿನ ಆಯ್ಕೆ ಆದವರು ಅತ.[XXX ಸ್ಟಾರ್ ಜತೆ ಉತ್ತರಪ್ರದೇಶ ಸಿಎಂ 'ಯೋಗಿ' ಹೋಲಿಕೆ]
ರಾಜಕಾರಣದಲ್ಲಿ ಯೋಗಿ ಆದಿತ್ಯನಾಥ್ ಬೆಳೆದ ಬಗೆ ಇದೆಯಲ್ಲಾ, ಅದು ಖಂಡಿತಾ ಸಾಮಾನ್ಯವಾದುದ್ದಲ್ಲ. ಅವರು ಸಾಗಿಬಂದ ಹಾದಿಯಲ್ಲಿ ನೀಡಿದ ಎಷ್ಟೋ ಹೇಳಿಕೆಗಳು, ತೆಗೆದುಕೊಂಡ ನಿಲುವು-ಪ್ರತಿಪಾದನೆ ಎಲ್ಲದರ ಕಡೆಗೊಮ್ಮೆ ತಿರುಗಿ ನೋಡಿದರೆ ಕಾಣಸಿಗುವ ಒಳಿತು-ಕೆಡಕು-ಕೆಟ್ಟದೆನಿಸುವಂಥದ್ದನ್ನು ನಿಮ್ಮ ಮುಂದಿಡುವ ಪ್ರಯತ್ನ ಇದು.[ಯೋಗಿ ಆದಿತ್ಯನಾಥ್ ಯಾರು? ಏನವರ ಹಿನ್ನೆಲೆ?]
ಅಯೋಧ್ಯಾ ಚಳವಳಿಯಲ್ಲಿ ಭಾಗವಹಿಸುವುದಕ್ಕೆ ಕುಟುಂಬ ತೊರೆದ ಯೋಗಿ
ಯೋಗಿ ಆದಿತ್ಯನಾಥ್ ತಂದೆ ಫಾರೆಸ್ಟ್ ರೇಂಜರ್. ಉತ್ತರಾಖಂಡದ ಶ್ರೀನಗರ್ ನಲ್ಲಿರುವ ಹೇಮ್ ವತಿ ನಂದನ್ ಬಹುಗುಣ ಗರ್ವಾಲ್ ವಿವಿಯಲ್ಲಿ ಬಿಎಸ್ಸಿ (ಗಣಿತ) ಪದವಿ ಪಡೆದ ಆದಿತ್ಯನಾಥ್ ಪೂರ್ವಾಶ್ರಮದ ಹೆಸರು ಅಜಯ್ ಬಿಶ್ತ್. 21ನೇ ವಯಸ್ಸಿನಲ್ಲಿ ಕುಟುಂಬದಿಂದ ಹೊರಬಂದು ಆದಿತ್ಯನಾಥ್ ಆದರು. ಮಹಾಂತ ಅವೈದ್ಯನಾಥ್ ಶಿಷ್ಯರಾದರು. ಅಂದಹಾಗೆ ಅಯೋಧ್ಯಾ ಚಳವಳಿಯಲ್ಲಿ ಭಾಗವಹಿಸುವುದಕ್ಕಾಗಿ ಆದಿತ್ಯನಾಥ್ ತನ್ನ ಕುಟುಂಬವನ್ನು ತೊರೆದರು.
44ನೇ ವಯಸ್ಸಿಗೆ 5 ಬಾರಿ ಸಂಸದ
ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದು 1998ರಲ್ಲಿ. ಮೊದಲ ಸಲಕ್ಕೆ 26 ಸಾವಿರ ಮತಗಳ ಅಂತರದಿಂದ ಗೆದ್ದರು. ಅವರ ಜನಪ್ರಿಯತೆ ಹೆಚ್ಚುತ್ತಲೇ ಹೋಯಿತು. 2014ರ ಲೋಕಸಭೆ ಚುನಾವಣೆಯಲ್ಲಿ ಗೋರಕ್ ಪುರ್ ಕ್ಷೇತ್ರದಿಂದ 3 ಲಕ್ಷ ಮತಗಳ ಅಂತರದಿಂದ ವಿಜಯಿಯಾದರು. ತನ್ನ ಪೂರ್ವಜರ ಹಳ್ಳಿಯಲ್ಲಿ 1998ನೇ ಇಸವಿಯಲ್ಲಿ ಶಾಲೆ ಕೂಡ ಕಟ್ಟಿಸಿದ್ದಾರೆ. ತಮ್ಮ 44ನೇ ವಯಸ್ಸಿಗೆ 5 ಬಾರಿ ಸಂಸದರಾಗಿದ್ದರು ಆದಿತ್ಯನಾಥ್. ಹನ್ನೆರಡನೇ ಲೋಕಸಭೆಯಲ್ಲಿ ಅತ್ಯಂತ ಕಿರಿಯ ವಯಸ್ಸಿನ ಸಂಸದ ಅವರು. ಕೃಷಿ, ಆರೋಗ್ಯ, ನಾಗರಿಕ ವಿಮಾನಯಾನ, ಹವಾಮಾನ ಬದಲಾವಣೆ, ಆರ್ಥಿಕತೆ ಸಂಬಂಧಿಸಿದ ಹಾಗೆ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಬಹುಪಾಲು ಸಮಯ ಗೋಶಾಲೆಯಲ್ಲಿ
ಆದಿತ್ಯನಾಥ್ ಹಿಂದೂ ಯುವ ವಾಹಿನಿ ಎಂಬ ಸಂಸ್ಥೆ ಆರಂಭಿಸಿದ್ದಾರೆ. ಅವರ ಪ್ರಕಾರ ಇದು ಸಮಾಜ ಸುಧಾರಣಾ ಸಂಸ್ಥೆ. ಗ್ರಾಮೀಣ ಭಾಗದ ಜನರ ಏಳ್ಗೆ ಹಾಗೂ ಗೋರಕ್ಷಣೆ ಇದರ ಉದ್ದೇಶ. ಆದರೆ ಉತ್ತರಪ್ರದೇಶದಲ್ಲಿ ದೊಂಬಿ, ಹಿಂಸಾಚಾರಕ್ಕೆ ಈ ಸಂಸ್ಥೆ ಕಾರಣವಾಗಿದೆ. ಆದಿತ್ಯನಾಥ್ ತಮ್ಮನ್ನು ತಾವು ಗೋರಕ್ಷಕ ಎಂದು ಕರೆದುಕೊಳ್ಳುತ್ತಾರೆ. ತಮ್ಮ ಬಹುಪಾಲ ಸಮಯವನ್ನು ಗೋರಕ್ ನಾಥ್ ಮಠದ ಗೋಶಾಲೆಗಳಲ್ಲಿ ಕಳೆಯುತ್ತಾರೆ. ಉತ್ತರಪ್ರದೇಶದಲ್ಲಿರುವ ಎಲ್ಲ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಬೇಕು ಎಂದು ಚುನಾವಣೆ ಪ್ರಚಾರ ನಡೆಸಿದ್ದರು.
ಟ್ರಂಪ್ ಹಾದಿಗೆ ಮೆಚ್ಚುಗೆ
ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಪ್ರಜೆಗಳಿಗೆ ಪ್ರವೇಶ ನಿಷೇಧ ಎಂಬ ಘೋಷಣೆಯನ್ನು ಮಾಡಿದ್ದ ಟ್ರಂಪ್ ಗೆ ಮೆಚ್ಚುಗೆ ಸೂಚಿಸಿದ್ದರು ಆದಿತ್ಯನಾಥ್. ಇದೇ ಕ್ರಮವನ್ನು ಭಾರತ ಕೂಡ ಅನುಸರಿಸಬೇಕು ಎಂದಿದ್ದರು. ಇಡೀ ವಿಶ್ವದಾದ್ಯಂತ ಟ್ರಂಪ್ ನಿಲುವಿಗೆ ವಿರೋಧ ವ್ಯಕ್ತವಾಗಿದ್ದರೂ ಯೋಗಿ ಮಾತ್ರ, ಭಯೋತ್ಪಾದನೆ ಚಟುವಟಿಕೆ ತಡೆಯಲು ಈ ಕ್ರಮ ದೇಶದಲ್ಲಿ ಅಗತ್ಯ ಎಂದಿದ್ದರು.
ಅಮಿತ್ ಶಾಗೆ ಬಲು ಅಚ್ಚುಮೆಚ್ಚು
ಮಾಧ್ಯಮದ ವರದಿಗಳು ಏನೇ ಇದ್ದರೂ ಬಿಜೆಪಿಯ ನಾಯಕರೇ ಹೇಳುವ ಪ್ರಕಾರ, ಉತ್ತರಪ್ರದೇಶ ಚುನಾವಣೆಗೆ ತಿಂಗಳು ಮುಂಚೆಯೇ ಆದಿತ್ಯನಾಥ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದರು. ಬಿಜೆಪಿ ಗೆಲುವಿನ ಪ್ರಮುಖ ತಂತ್ರಗಾರಿಕೆ ಮಾಡಿದ ಅಮಿತ್ ಶಾಗೆ ಆದಿತ್ಯನಾಥ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಇಚ್ಛೆ ಇತ್ತು. ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿಯಾಗಲಿ ಎಂದು ಹಲವರ ಮನವೊಲಿಸಿದ್ದಾರೆ.
ಗೋರಕ್ ಪುರ್ ನಲ್ಲಿ ಬಂಧನ
ಗೋರಕ್ ಪುರ್ ನಲ್ಲಿ ಆದಿತ್ಯನಾಥ್ ನೇತೃತ್ವದಲ್ಲಿ ನಡೆಸಿದ್ದ ಅಹಿಂಸಾ ಹೋರಾಟ ಹಿಂಸಾ ರೂಪ ಪಡೆದು, ಅವರನ್ನು ಬಂಧಿಸಲಾಯಿತು. ಆ ನಂತರ ಅವರಿಗೆ ಆಂಗ್ರಿ ಯಂಗ್ ಮ್ಯಾನ್ ವರ್ಚಸ್ಸು ಸಿಕ್ಕಿತು. ಹಿಂದೂ ಹುಡೂಗನೊಬ್ಬನ ಹತ್ಯೆಗೆ ಸಂಬಂಧಿಸಿದ ಹಾಗೆ ಕರ್ಫ್ಯೂ ವಿಧಿಸಿದ ನಂತರವೂ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆ, ಅವರು ಮಾಡಿದ ಭಾಷಣಗಳು ಅಲ್ಲೋಲ ಕಲ್ಲೋಲ ಮಾಡಿದವು. ಆದಿತ್ಯನಾಥ್ ರನ್ನು ಈ ವೇಳೆ ಬಂಧಿಸಲಾಯಿತು. ಆದರೆ ಈ ಘಟನೆಯಿಂದ ಅವರ ಜನಪ್ರಿಯತೆ ಹೊಸ ಎತ್ತರಕ್ಕೆ ಏರಿತು.
ಮುಸ್ಲಿಮರ ಬಗ್ಗೆ ಹೇಳಿಕೆ
2014ರಲ್ಲಿ ನೋಯಿಡಾದಲ್ಲಿ ನಡೆದ ಸಭೆಯೊಂದರಲ್ಲಿ ಆದಿತ್ಯನಾಥ್, ಅಲ್ಪಸಂಖ್ಯಾತರ ಮನೆಗಳು ಎಲ್ಲಿ ಹೆಚ್ಚಿವೆಯೋ ಅಲ್ಲೇ ಕೋಮುಗಲಭೆಗಳು ಹೆಚ್ಚಾಗಿ ಆಗುತ್ತವೆ ಎಂದಿದ್ದರು. ಎಲ್ಲಿ ಶೇ 10ರಿಂದ 20ರಷ್ಟು ಮುಸ್ಲಿಮರಿರುತ್ತಾರೆ ಅಲ್ಲಿ ಸಾಮಾನ್ಯ ಗಲಭೆ, ಶೇ 20ರಿಂದ 35ರಷ್ಟು ಮುಸ್ಲಿಮರಿರುವ ಕಡೆ ಗಂಭೀರವಾದ ಕೋಮು ಗಲಭೆ, ಎಲ್ಲಿ ಶೇ 35ಕ್ಕಿಂತ ಹೆಚ್ಚು ಮುಸ್ಲಿಮರಿರುತ್ತಾರೋ ಅಲ್ಲಿ ಮುಸ್ಲಿಮೇತರರಿಗೆ ವಾಸಿಸಲು ಅವಕಾಶವೇ ಇಲ್ಲ ಎಂಬ ಹೇಳಿಕೆ ನೀಡಿದ್ದರು.
ಎಲ್ಲ ಮಸೀದಿಯಲ್ಲೂ ಗೌರಿ-ಗಣೇಶ ಪ್ರತಿಮೆ
2015ರಲ್ಲಿ ವಿಶ್ವ ಹಿಂದೂ ಪರಿಷತ್ ನ ವಿರಾಟ್ ಹಿಂದೂ ಸಮ್ಮೇಳನದಲ್ಲಿ, ಕಾಶಿ ದೇವಾಲಯಕ್ಕೆ ಭೇಟಿ ನೀಡುವ ಹಿಂದೂಗಳನ್ನು ಗ್ಯಾನ್ವಾಪಿ ಮಸೀದಿಯವರು ಬೆದರಿಸುತ್ತಾರೆ ಎಂದು ಆರೋಪಿಸಿದ್ದ ಆದಿತ್ಯನಾಥ್, "ಒಂದು ಅವಕಾಶ ಸಿಕ್ಕರೆ ಎಲ್ಲ ಮಸೀದಿಗಳಲ್ಲೂ ಗೌರಿ, ಗಣೇ ಹಾಗೂ ನಂದಿಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸುತ್ತೀವಿ" ಎಂದಿದ್ದರು.
ಎಲ್ಲ ವಿವಾದಗಳ 'ತಾಯಿ'ಯಂಥ ಹೇಳಿಕೆ
2016ರ ಜೂನ್ ನಲ್ಲಿ ಮದರ್ ತೆರೇಸಾ ವಿರುದ್ಧ ಮತಾಂತರದ ಆರೋಪ ಮಾಡಿದ್ದರು. "ಭಾರತದಲ್ಲಿ ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ಆಕೆ ಬಂದಿದ್ದರು. ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಷಡ್ಯಂತ್ರದ ಭಾಗವಾಗಿದ್ದರು ಮದರ್ ತೆರೇಸಾ. ಈಶಾನ್ಯ ಭಾರತದಲ್ಲಿ ಪ್ರತ್ಯೇಕತೆ ಕೂಗು ಕೇಳುವುದಕ್ಕೆ ಮತಾಂತರವೇ ಕಾರಣ" ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮದರ್ ತೆರೇಸಾ ವಿರುದ್ಧ ಆದಿತ್ಯನಾಥ್ ಆರೋಪ ಮಾಡಿದ್ದರು.
ಸಮುದ್ರದೊಳಗೆ ಮುಳುಗಿಸಿ
2015ರ ಜೂನ್ ನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಸೂರ್ಯ ನಮಸ್ಕಾರದ ಬಗ್ಗೆ ಮಾತನಾಡಿದ ಆದಿತ್ಯನಾಥ್, ಯಾರಿಗೆ ಯೋಗ ಬೇಡವೋ ಅಥವಾ ಇಷ್ಟವಿಲ್ಲವೋ ಅವರು ದೇಶ ಬಿಟ್ಟು ಹೋಗಿ. ಉಳಿದ ಜೀವನವನ್ನು ಕತ್ತಲೆ ಕೋಣೆಯೊಳಗೋ ಅಥವಾ ಕೂಪದೊಳಗೋ ಕಳೆಯಿರಿ. "ನನ್ನ ವಿನಯಪೂರ್ವ ಮನವಿ ಇದು. ಯಾರು ಸೂರ್ಯದೇವನಲ್ಲೂ ಕೋಮು ಭಾವನೆ ಕಾಣುತ್ತೀರೋ ಅಂಥವರನ್ನು ಸಮುದ್ರದಲ್ಲಿ ಮುಳುಗಿಸಬೇಕು ಅಥವಾ ಅವರ ಬಾಕಿ ಜೀವನವನ್ನು ಕತ್ತಲೆ ಕೋಣೆಯಲ್ಲಿ ಕಳೆಯುವಂತೆ ಮಾಡಬೇಕು" ಎಂದಿದ್ದರು.