ಪುಲ್ವಮಾ ದಾಳಿ; ಇನ್ನೂ ಉತ್ತರ ಸಿಗಬೇಕಾದ ಪ್ರಶ್ನೆಗಳು
ನವದೆಹಲಿ, ಫೆಬ್ರವರಿ 14 : ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪುಲ್ವಮಾ ದಾಳಿಯಾಗಿ ಒಂದು ವರ್ಷ ಕಳೆದಿದೆ. 40 ಸಿಆರ್ಪಿಎಫ್ ಯೋಧರು ಹುತಾತ್ಮರಾದ ಪ್ರಕರಣದ ತನಿಖೆಯನ್ನು ಎನ್ಐಎ ಕೈಗೊಂಡಿದೆ. ವರ್ಷ ಕಳೆದರೂ ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಪುಲ್ವಮಾದಲ್ಲಿ ದಾಳಿ ಆತ್ಮಾಹುತಿ ದಾಳಿ ನಡೆಸಿದ್ದು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ. ದಾಳಿ ನಡೆದ ಕೆಲವು ಹೊತ್ತಿನ ಬಳಿಕ ಈ ಕುರಿತು ವಿಡಿಯೋವನ್ನು ಸಂಘಟನೆ ಬಿಡುಗಡೆ ಮಾಡಿತ್ತು. ದಾಳಿ ನಡೆಸಿದ ಕಾರಿನಲ್ಲಿದ್ದ ಉಗ್ರ ಆದಿಲ್ ಅಹಮದ್ ದಾರ್ ಮೃತಪಟ್ಟಿದ್ದ.
ರಾಷ್ಟ್ರೀಯ ತನಿಖಾ ದಳ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಒಂದು ವರ್ಷ ಕಳೆದರೂ ದಾಳಿಗೆ ಬಳಕೆ ಮಾಡಲಾದ ಸ್ಫೋಟಕಗಳನ್ನು ತಂದಿದ್ದು ಎಲ್ಲಿಂದ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.
ಸೇನೆಯ ಉಗ್ರಾಣಗಳಲ್ಲಿ ಮಾತ್ರ ಸಿಗುವ ಮಾದರಿಯ ಸ್ಫೋಟಕಗಳನ್ನು ಬಳಕೆ ಮಾಡಲಾಗಿತ್ತು ಎಂಬುದು ಹಿರಿಯ ಅಧಿಕಾರಿಗಳ ಮಾಹಿತಿ. ಸುಮಾರು 25 ಕೆಜಿ ಸ್ಫೋಟಕವನ್ನು ಪುಲ್ವಮಾದ ದಾಳಿಗೆ ಬಳಕೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ಸ್ಫೋಟಕ ಬಂದಿದ್ದು ಎಲ್ಲಿಂದ?

ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿಲ್ಲ
ಪುಲ್ವಮಾ ದಾಳಿಯ ತನಿಖೆಯನ್ನು ಎನ್ಐಎ ಕೈಗೆತ್ತಿಕೊಂಡಿತ್ತು. ಆದರೆ, ಒಂದು ವರ್ಷ ಕಳೆದರೂ ತನಿಖೆಯ ಚಾರ್ಜ್ ಶೀಟ್ ಸಲ್ಲಿಕೆ ಮಾಡಿಲ್ಲ. ಪ್ರಕರಣ ಪ್ರಮುಖ ರೂವಾರಿಗಳು ಎಂದು ಶಂಕಿಸಿದ್ದವರು ಎನ್ ಕೌಂಟರ್ನಲ್ಲಿ ಹತ್ಯೆಯಾಗಿದ್ದಾರೆ. ಸ್ಫೋಟಕ್ಕೆ ಬಳಸಲಾದ ಸ್ಫೋಟಕ ಬಂದಿದ್ದು ಎಲ್ಲಿಂದ ಎನ್ನುವ ಮಾಹಿತಿ ಇನ್ನೂ ನಿಗೂಢವಾಗಿದೆ.

25 ಕೆಜಿ ಸ್ಫೋಟಕ ಬಳಕೆ
ಸುಮಾರು 25 ಕೆಜಿ ಸ್ಫೋಟಕವಿದ್ದ ವಾಹನವನ್ನು ಸಿಆರ್ಪಿಎಫ್ ಯೋಧರು ಸಂಚಾರ ನಡೆಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಲಾಗಿತ್ತು. ಈ ಆತ್ಮಾಹುತಿ ದಾಳಿಯಲ್ಲಿ ಉಗ್ರ ಆದಿಲ್ ಅಹಮದ್ ದಾರ್ ಮೃತಪಟ್ಟಿದ್ದ. ಎನ್ಐಎ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್, ಆರ್ಡಿಎಕ್ಸ್ ಬಳಕೆ ಮಾಡಲಾಗಿದೆ ಎಂದು ಹೇಳಿತ್ತು.

10 ದಿನ ಮೊದಲೇ ಸ್ಫೋಟಕ ಸರಬರಾಜು
ಪುಲ್ವಮಾ ದಾಳಿಯ ರೂವಾರಿಗಳು ಎಂದು ಶಂಕಿಸಲಾದ ಮುದಾಸೀರ್ ಅಹಮದ್ ಖಾನ್, ಸಜಾದ್ ಭಟ್ 2019ರ ಮಾರ್ಚ್ ಮತ್ತು ಜೂನ್ನಲ್ಲಿ ನಡೆದ ಎನ್ ಕೌಂಟರ್ನಲ್ಲಿ ಹತ್ಯೆಯಾಗಿದ್ದಾರೆ. ಮುದಾಸೀರ್ ಅಹಮದ್ ದಾಳಿಯ 10 ದಿನ ಮೊದಲು ಸ್ಫೋಟಕಗಳನ್ನು ಪೂರೈಕೆ ಮಾಡಿದ್ದ ಎಂಬುದು ಆರೋಪ. ಆದರೆ, ಎಲ್ಲಿಂದ ಪೂರೈಕೆ ಆಗಿತ್ತು ಎಂಬುದು ನಿಗೂಢವಾಗಿಯೇ ಇದೆ.

ವಾಹನದ ಮಾರಾಟ
ಪುಲ್ವಮಾ ದಾಳಿಗೆ ಬಳಕೆ ಮಾಡಲಾದ ವಾಹನವನ್ನು 2011ರಲ್ಲಿ ಮೊದಲು ಮಾರಾಟ ಮಾಡಲಾಗಿತ್ತು. 2019ರ ಫೆಬ್ರವರಿ 4 ಅಂದರೆ ಸ್ಫೋಟಕ್ಕೂ ಹತ್ತು ದಿನ ಮೊದಲು ಸಜಾದ್ ಭಟ್ ಅದನ್ನು ಕೊಂಡುಕೊಳ್ಳುವ ಮುಂಚೆ ಹಲವು ಭಾರಿ ಮಾರಾಟವಾಗಿತ್ತು. ವಾಹನ ಎಂಜಿನ್ ಸ್ಫೋಟದಲ್ಲಿ ಸಂಪೂರ್ಣ ಹಾನಿಯಾಗಿದ್ದು, ತನಿಖೆಗೆ ಸಹಕಾರಿಯಾಗಿಲ್ಲ.

ಸರ್ಕಾರ ಹೇಳುವುದೇನು?
ಜೂನ್ನಲ್ಲಿ ಗೃಹ ಇಲಾಖೆಯ ರಾಜ್ಯ ಸಚಿವ ಜಿ. ಕೃಷ್ಣಾ ರೆಡ್ಡಿ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದರು. "ಪುಲ್ವಮಾ ದಾಳಿ ಗುಪ್ತಚರ ಇಲಾಖೆಯ ವೈಫಲ್ಯವಲ್ಲ. ಎನ್ಐಎ ತನಿಖೆ ನಡೆಸುತ್ತಿದೆ, ದಾಳಿಯ ಹಿಂದಿರುವವರು, ವಾಹನವನ್ನು ನೀಡಿದವರ ಪತ್ತೆ ನಡೆಯುತ್ತಿದೆ" ಎಂದು ಹೇಳಿದ್ದರು.











Click it and Unblock the Notifications