ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಪ್ರೇಮ್ ಜೀ
ನವದೆಹಲಿ, ಏ. 6: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜೀ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡರು.
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆಹ್ವಾನದ ಮೇರೆಗೆ ಕಾರ್ಯಕ್ರಮಕ್ಕೆ ತೆರಳಿದ್ದ ಪ್ರೇಮ್ ಜೀ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.[ಮದರ್ ತೆರೇಸಾ ಭಾರತಕ್ಕೆ ಯಾಕೆ ಬಂದಿದ್ರು? ಆಸ್ಕ್ ಆರೆಸ್ಸೆಸ್]
ಸುಮಾರು 500 ಕ್ಕೂ ಅಧಿಕ ಎನ್ ಜಿಒ ಗಳು ಹಾಜರಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರೇಮ್ ಜೀ, ನನಗೆ ಯಾವ ರಾಜಕೀಯ ಉದ್ದೇಶವಿಲ್ಲ, ನಾನೊಬ್ಬ ರಾಜಕಾರಣಿಯೂ ಅಲ್ಲ. ದೇಶದ ಬೆಳವಣಿಗೆ ದೃಷ್ಟಿಯಿಂದ ಕೆಲ ಮೂಲಭೂತ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ರಾಷ್ಟ್ರ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ. ವ್ಯತ್ಯಾಸಗಳನ್ನು ಹುಡುಕುವ ಬದಲು ಸಕಾರಾತ್ಮಕವಾಗಿ ಚಿಂತಿಸುವುದು ಒಳಿತು. ನಮಗೆ ಒಳ್ಳೆಯದ್ದನ್ನು ಬಿಟ್ಟು ಕೇವಲ ಕೆಟ್ಟದ್ದು ಕಾಣುತ್ತದೆ. ಈ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು ಎಂದು ಪ್ರೇಮ್ ಜೀ ಹೇಳಿದರು.[ರಾಜ್ಯ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಕೊಡುಗೆ]
ಸರ್ಕಾರದ ಅನೇಕ ಉತ್ತಮ ಯೋಜನೆಗಳಿಗೆ ಸರಿಯಾದ ಅನುಷ್ಠಾನದ ರೂಪ ಸಿಗುತ್ತಿಲ್ಲ, ಬದಲಾವಣೇ ಸಾಧ್ಯವಾಗಬೇಕಾದರೆ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿಯೂ ಗುಣಾತ್ಮಕ ಶಿಕ್ಷಣ ನೀಡುವ ಸಂಸ್ಥೆಗಳು ತಲೆ ಎತ್ತಬೇಕು ಎಂದು ಸಲಹೆ ನೀಡಿದರು.