ವಾರಣಾಸಿ ತೊರೆದು ಪುರಿಯತ್ತ ಹೊರಟರೇ ಮೋದಿ? ಕಾರಣವೇನು?
Recommended Video

ನವದೆಹಲಿ, ಜನವರಿ 04: ಲೋಕಸಭಾ ಚುನಾವಣೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಈ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷೇತ್ರ ಬದಲಿಸಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೊಳಗಾಗುತ್ತಿದೆ.
2014 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮೋದಿ ಸ್ಪರ್ಧಿಸಿ, ಗೆದ್ದಿದ್ದರು. ಗುಜರಾತ್ ಹೊರಗೆ ಬಂದು ನಿಂತರೆ ಮೋದಿ ಅವರಿಗೆ ಗೆಲ್ಲಲು ಸಾಧ್ಯವಿಲ್ಲ ಎಂದವರಿಗೆ 5.8 ಲಕ್ಷ ಮತಗಳನ್ನು ಪಡೆದು, ಪ್ರತಿಸ್ಪರ್ಧಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದರು.
ಗುಜರಾತಿನ ವಡೋದರಾ ಕ್ಷೇತ್ರದಲ್ಲೂ ಸ್ಪರ್ಧಿಸಿ ಗೆದ್ದಿದ್ದರು. ನಂತರ ವಾರಣಾಸಿಯನ್ನು ತಮ್ಮ ಬಳಿಯೇ ಉಳಿಸಿಕೊಂಡು ವಡೋದರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಆದರೆ ಈ ವರ್ಷ ಮೋದಿಯವರು ಒಡಿಶಾದ ಪುರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಶೇ.90 ರಷ್ಟಿದೆ ಎಂದು ಒಡಿಶಾ ಬಿಜೆಪಿ ಮುಖಂಡ ಪ್ರದೀಪ್ ಪುರೋಹಿತ್ ಹೇಳಿರುವುದು ಇದೀಗ ಕುತೂಹಲ ಕೆರಳಿಸಿದೆ.
ಅಷ್ಟಕ್ಕೂ ಮೋದಿಯವರು, ತಮ್ಮ ಇಷ್ಟದ ಕ್ಷೇತ್ರವಾದ ವಾರಣಾಸಿಯನ್ನು ತೊರೆದು ಪುರಿಯತ್ತ ಹೊರಟಿದ್ದೇಕೆ?

ವಾರಣಾಸಿಯಲ್ಲಿ ಮೋದಿ ಸ್ಪರ್ಧಿಸಿದ್ದೇಕೆ?
ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾರಣಾಸಿ ಎಂದರೆ ಸಾಕಷ್ಟು ಪ್ರೀತಿ, ಅಭಿಮಾನ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗುಜರಾತಿನಿಂದ ಹೊರಗೆ ಬಂದು ಚುನಾವಣೆಗೆ ನಿಂತರೆ ಮೋದಿಯವರಿಗೆ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದಿದ್ದ ವಿರೋಧಿಗಳ ಸವಾಲನ್ನು ಸ್ವೀಕರಿಸಿದ ಮೋದಿ, ವಾರಣಾಸಿಯಲ್ಲಿ ಚುನಾವಣೆಗೆ ನಿಂತು ಮೂರೂವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.

ವಾರಣಾಸಿ ತೊರೆದು ಪುರಿಯತ್ತ?
ಇದೀಗ ಅದೇ ವಾರಣಾಸಿಯನ್ನು ಕಾರಣಾಂತರಗಳಿಂದ ತೊರೆದು ಒಡಿಶಾದ ಪುರಿಯಿಂದ ಮೋದಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪುರಿ ದೇವಾಲಯಗಳ ನಗರಿ. ಇಲ್ಲಿನ ಜಗನ್ನಾಥ ಮಂದಿರ ವಿಶ್ವಪ್ರಸಿದ್ಧ. ಅದೂ ಅಲ್ಲದೆ, 2014 ರ ಚುನಾವಣೆಯಲ್ಲಿ ಜಗನ್ನಾಥ ದೇವರ ಆಶೀರ್ವಾದದಿಂದಲೇ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂಬ ನಂಬಿಕೆ ಇಲ್ಲಿನ ಜನರದು. ಹಿಂದು ಮತಗಳೂ ಹೆಚ್ಚಿರುವ ಕಾರಣ ಈ ಕ್ಷೇತ್ರದಿಂದಲೇ ಮೋದಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.

ಕ್ಷೇತ್ರ ಬದಲಾವಣೆಗೆ ಕಾರಣವೇನು?
ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷೇತ್ರ ಬದಲಾಯಿಸುತ್ತಿರುವುದಕ್ಕೆ ಕಾರಣವೇನು? ಪೂರ್ವ ರಾಜ್ಯಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮೆರೆಯಲು ಉತ್ಸುಕತೆ ತೋರುತ್ತಿದೆ. ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಚುನಾವಣೆಗಳಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲೇ ಬಿಜೆಪಿ ಸೋಲುಂಡಿದ್ದು ಸಾಕಷ್ಟು ಮುಖಭಂಗವನ್ನುಂಟು ಮಾಡಿದೆ. ಈ ಮೂರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ಲೋಕಸಭಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲು ಚಿಂತಿಸಿದೆ. ಅದೇ ಕಾರಣಕ್ಕೆ ಪೂರ್ವ ಭಾರತದ ರಾಜ್ಯಗಳಾದ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಉತ್ತಮ ಸಾಧನೆ ತೋರುವ ಉದ್ದೇಶವನ್ನು ಅದು ಹೊಂದಿದೆ. ಅದೇ ಕಾರಣಕ್ಕೆ ಪ್ರಧಾನಿಯವರನ್ನೂ ಪುರಿಯಿಂದ ಕಣಕ್ಕಿಳಿಸಿ, ಈ ರಾಜ್ಯಗಳ ಜನರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡಲಿದೆ.

ವಿಧಾನಸಭೆ ಚುನಾವಣೆ ಮೇಲೂ ಪರಿಣಾಮ
ಒಡಿಶಾದಲ್ಲಿ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಈಗಾಗಲೇ ಇಲ್ಲಿ ಆಡಳಿತದಲ್ಲಿರುವ ಬಿಜೆಡಿಯನ್ನು ಅಧಿಕಾರದಿಂದ ಕೆಳಗಿಳಿಸಿ, ಬಿಜೆಪಿ ಸರ್ಕಾರ ರಚಿಸಲು ಇದು ಸುವರ್ಣಾವಕಾಶ. ಪ್ರಧಾನಿಯವರನ್ನು ಈ ರಾಜ್ಯದಿಂದ ಕಣಕ್ಕಿಳಿಸಿದರೆ, ಜನರು ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿಯನ್ನೇ ಬೆಂಬಲಿಸಬಹುದು ಎಂಬುದು ಈ ನಿರ್ಧಾರದ ಹಿಂದಿನ ಲೆಕ್ಕಾಚಾರ ಎನ್ನಲಾಗಿದೆ.












Click it and Unblock the Notifications