ಭಾರತದಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುತ್ತಾ ಓಮಿಕ್ರಾನ್ ರೂಪಾಂತರ?
ನವದೆಹಲಿ, ಡಿಸೆಂಬರ್ 6: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಭೀತಿ ಶುರುವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಗೋಚರಿಸಿದ ಹೊಸ ರೂಪಾಂತರಿ ಓಮಿಕ್ರಾನ್ ಭಾರತಕ್ಕೂ ಲಗ್ಗೆ ಇಟ್ಟಿದ್ದಾಗಿದೆ. ದೇಶದಲ್ಲಿ ಈಗಾಗಲೇ 21 ಓಮಿಕ್ರಾನ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರ ಮಧ್ಯೆ ಪೋಷಕರು ನಿರಾಳರಾಗುವಂತಾ ಸುದ್ಧಿಯೊಂದು ಹೊರ ಬಿದ್ದಿದೆ.
ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಕೂಡಾ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಸೂಕ್ಷ್ಮಾಣುಜೀವಶಾಸ್ತ್ರಜ್ಞ ಡಾ. ಸುಮಿತ್ರಾ ದಾಸ್ ಸ್ಪಷ್ಟಪಡಿಸಿದ್ದಾರೆ. "ಬೇರೆ ದೇಶಗಳಲ್ಲಿ ಸಹ ಓಮಿಕ್ರಾನ್ ರೂಪಾಂತರವು ಮಕ್ಕಳ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ. ಈ ಹಿಂದಿನ ಕೊವಿಡ್-19 ಅಲೆಯ ಸಂದರ್ಭದಲ್ಲಿ ಹೆಚ್ಚಾಗಿ ವಯಸ್ಕರ ಮೇಲೆ ಸೋಂಕು ಪ್ರಭಾವ ಬೀರಿತ್ತು.
ಇದರ ಹೊರತಾಗಿಯೂ ದಕ್ಷಿಣ ಆಫ್ರಿಕಾದಲ್ಲಿ ಸೂಕ್ಷ್ಮಾಣು ರೋಗಶಾಸ್ತ್ರಜ್ಞರು ಹೊಸ ರೂಪಾಂತರ ತಳಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಓಮಿಕ್ರಾನ್ ತಳಿ ಕಾಣಿಸಿಕೊಂಡ ನಂತರ ದೇಶದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವುದು ಹೆಚ್ಚುತ್ತಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಈ ಮಧ್ಯೆ ಮಕ್ಕಳಿಗೆ ಓಮಿಕ್ರಾನ್ ರೂಪಾಂತರವು ಅಪಾಯಕಾರಿ ಹೌದೋ ಅಲ್ಲವೋ, ವೈದ್ಯಕೀಯ ತಜ್ಞರು ಹಾಗೂ ವೈದ್ಯರು ಈ ಕುರಿತು ಏನು ಹೇಳುತ್ತಾರೆ ಎಂಬುದರ ಬಗ್ಗೆ ಒಂದು ಮಾಹಿತಿಗಾಗಿ ಮುಂದೆ ಓದಿ.

ಓಮಿಕ್ರಾನ್ ಪ್ರಭಾವ ಎಲ್ಲ ದೇಶಗಳಲ್ಲೂ ಒಂದೇ ಇರುವುದಿಲ್ಲ
ದಕ್ಷಿಣ ಆಫ್ರಿಕಾದಲ್ಲಿ ಅಥವಾ ಇತರ ದೇಶಗಳಲ್ಲಿ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಪ್ರಭಾವ ಬೀರಿದಂತೆ ಭಾರತದಲ್ಲಿಯೂ ಇರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಯಾವುದೇ ಒಂದು ರೂಪಾಂತರ ಸೋಂಕು ಅಥವಾ ತಳಿಯ ಪರಿಣಾಮ ಆಯಾ ಪರಿಸರ, ಆಹಾರ ವ್ಯವಸ್ಥೆಯ ಮೇಲೆ ನಿರ್ಧಾರವಾಗುತ್ತದೆ. ಯಾವುದೇ ವೈರಸ್ ಆಗಿದ್ದರೂ, ಆಯಾ ವ್ಯಕ್ತಿಗಳಲ್ಲಿನ ಪ್ರತಿರಕ್ಷಣಾ ವ್ಯವಸ್ಥೆ, ಅವರ ಆಹಾರ ಪದ್ಧತಿ, ರೋಗ ನಿರೋಧಕ ಶಕ್ತಿಯ ಮೇಲೆ ಸೋಂಕಿನ ಪ್ರಭಾವ ಹಾಗೂ ಪರಿಣಾಮವು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಾಗುತ್ತದೆ.

ಓಮಿಕ್ರಾನ್ ಬಗ್ಗೆ ಎಚ್ಚರಿಕೆ ವಹಿಸಿ, ಯಾವುದೇ ಆತಂಕ ಬೇಕಿಲ್ಲ
"ಭಾರತೀಯರು ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಬಗ್ಗೆ ಜಾಗರೂಕತೆ ವಹಿಸಿರಬೇಕು, ಆದರೆ ಯಾವುದೇ ರೀತಿ ಗಾಬರಿಯಾಗುವ ಅಗತ್ಯವಿಲ್ಲ. ಕೊವಿಡ್-19 ಮಾರ್ಗಸೂಚಿಗಳನ್ನು ಪಾಲಿಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿರಿ, ಅನಗತ್ಯ ಜನಸಂದಣಿ ಇರುವ ಪ್ರದೇಶಗಳಿಗೆ ತೆರಳಬೇಡಿ. ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಳ್ಳಿರಿ. ಇದರ ಹೊರತಾಗಿ ಸಾರ್ವಜನಿಕರು ಹೊಸ ರೂಪಾಂತರದ ಬಗ್ಗೆ ಯಾವುದೇ ರೀತಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ," ಎಂದು ಸೂಕ್ಷ್ಮಾಣು ರೋಗಶಾಸ್ತ್ರಜ್ಞರಾದ ಡಾ.ಸುಮಿತ್ರಾ ದಾಸ್ ಹೇಳಿದ್ದಾರೆ.

ಓಮಿಕ್ರಾನ್ ರೂಪಾಂತರದ ಹರಡುವಿಕೆ ವೇಗ ಅಧಿಕ
ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಜಾಗತಿಕ ಮಟ್ಟದಲ್ಲಿ ಆತಂಕವನ್ನು ಹುಟ್ಟು ಹಾಕುತ್ತಿದೆ. ಈ ಹಿಂದೆ ಕೊವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಅತಿಹೆಚ್ಚು ಅಪಾಯಕಾರಿ ಎನಿಸಿಕೊಂಡಿದ್ದ ಡೆಲ್ಟಾ ರೂಪಾಂತರ ರೋಗಾಣುವಿಗಿಂತ ಓಮಿಕ್ರಾನ್ ಡೇಂಜರಸ್ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಓಮಿಕ್ರಾನ್ ರೂಪಾಂತರ ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸ್ವತಃ ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಏರಿಕೆಯಾಗುತ್ತಿರುವ ಓಮಿಕ್ರಾನ್ ಕೇಸ್
ಹೊಸ ರೂಪಾಂತರ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಐದರಿಂದ 21ಕ್ಕೆ ಏರಿಕೆಯಾಗಿದೆ. 17 ಹೊಸ ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ರಾಜಸ್ಥಾನದಲ್ಲಿ 9, ಮಹಾರಾಷ್ಟ್ರ 8, ಕರ್ನಾಟಕ 2, ಗುಜರಾತ್ ಮತ್ತು ದೆಹಲಿಯಲ್ಲಿ ತಲಾ ಒಂದು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಅನೇಕರು ಆಫ್ರಿಕನ್ ರಾಷ್ಟ್ರಗಳಿಂದ ವಾಪಸ್ ಆಗಿರುವವರು ಹಾಗೂ ಅಪಾಯ ಎದುರಿಸುತ್ತಿರುವ ದೇಶದಿಂದ ಆಗಮಿಸಿದ ಪ್ರಯಾಣಿಕರ ಸಂಪರ್ಕದಲ್ಲಿದ್ದರು ಎಂದು ಗೊತ್ತಾಗಿದೆ.
ಸೋಮವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಂದೇ ದಿನ 8,306 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 211 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 8,834 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 98,416 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications