ಕುಲಭೂಷಣ್ ಜಾಧವ್ ರನ್ನು ಭೇಟಿ ಮಾಡಿದ ತಾಯಿ, ಪತ್ನಿ
ಇಸ್ಲಮಾಬಾದ್, ಡಿಸೆಂಬರ್ 25: ಆ ಇಬ್ಬರು ಹೆಣ್ಣು ಜೀವಗಳ ಕಣ್ಣಾಲಿಗಳು ಒದ್ದೆಯಾಗಿದ್ದವು. ಅವರ ಎದುರಿಗಿದ್ದ ಆ ವ್ಯಕ್ತಿಯ ಕಣ್ಣಾಲಿಗಳಲ್ಲೂ ನೀರಿತ್ತು.
ಈ ದಿನಕ್ಕಾಗಿ ಅದೆಷ್ಟೋ ವರ್ಷಗಳಿಂದ ಆ ಮೂರೂ ಜೀವಗಳು ಕಾಯುತ್ತಿದ್ದರು. ಒಬ್ಬರಿಗೆ ತಮ್ಮ ಪತಿಯನ್ನು ನೋಡುವ ತವಕ. ಮತ್ತೊಬ್ಬರಿಗೆ ತಮ್ಮ ಮಗನನ್ನು ನೋಡುವ ತವಕ. ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಗೆ ಪತ್ನಿ ಹಾಗೂ ಅಮ್ಮನನ್ನು ಒಟ್ಟಾಗಿ ನೋಡುವ ಕಾತರದ ಕ್ಷಣ. ಇದೀಗ ಕೊನೆಗೂ ಆ ಭಾವುಕ ಕ್ಷಣ ಇಂದು ಜರುಗಿಯೇ ಬಿಟ್ಟಿತು.
ಪತ್ನಿ ಮತ್ತು ತಾಯಿ ಪಾಕಿಸ್ತಾನ ಜೈಲಿನಲ್ಲಿರುವ ಕುಲಭೂಷಣ್ ಜಾಧವ್ ರನ್ನು ಭೇಟಿಯಾಗಲು ಕಾದು ಕಾದು ಇಂದು ಕಣ್ತುಂಬಿಕೊಂಡರು.
ಭಾರತದ ಗೂಢಚರ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕುಲಭೂಷಣ್ ಜಾಧವ್ ರನ್ನು ಭೇಟಿಯಾಗಲು ಅವರ ಪತ್ನಿ ಮತ್ತು ತಾಯಿಗೆ ಇದೇ ಡಿಸೆಂಬರ್ 25ರಂದು ಪಾಕಿಸ್ತಾನ ಸರಕಾರ ಅವಕಾಶ ಕಲ್ಪಿಸಿತ್ತು. ಅದರಂತೆ ಪಾಕಿಸ್ತಾನದ ವಿದೇಶಾಂಗ ಇಲಾಖೆ ಕಚೇರಿಯಲ್ಲಿ ಈ ಭೇಟಿ ನಡೆಯಿತು.

ವಿದೇಶಾಂಗ ಕಚೇರಿಯತ್ತ ಎಲ್ಲರ ಚಿತ್ತ
ಬೆಳಿಗ್ಗೆಯಿಂದ ಇಂದು ಎಲ್ಲರೂ ಪಾಕಿಸ್ತಾನ ವಿದೇಶಾಂಗ ಕಚೇರಿಯತ್ತಲೇ ದೃಷ್ಟಿ ನೆಟ್ಟಿದ್ದರು. ಇಲ್ಲಿ ಕುಲಭೂಷಣ್ ಜಾಧವ್ ರಿಗೆ ಅವರ ತಾಯಿ ಮತ್ತು ಪತ್ನಿಯನ್ನು ಭೇಟಿಯಾಗುವ ಅವಕಾಶ ಕಲ್ಪಿಸಲಾಗಿತ್ತು. ಕಚೇರಿ ಸುತ್ತ ಮಾಧ್ಯಮಗಳ ಕ್ಯಾಮೆರಾಗಳು ದೃಷ್ಟಿ ನೆಟ್ಟಿದ್ದವು. ಕಚೇರಿಯ ಕಟ್ಟಡದ ಮೇಲೆ ಉಗ್ರ ನಿಗ್ರಹ ಪಡೆ, ಶಾರ್ಪ್ ಶೂಟರ್ ಗಳನ್ನು ನಿಯೋಜಿಸಲಾಗಿತ್ತು.
|
ಆ ಕ್ಷಣ ಬಂದೇ ಬಿಟ್ಟಿತು
ಬೆಳಿಗ್ಗೆಯಿಂದ ತಮ್ಮ ಮಗ ಮತ್ತು ಪತಿಯ ಭೇಟಿಗಾಗಿ ಆ ಇಬ್ಬರು ಹೆಣ್ಣ ಜೀವಗಳು ಕಾತರದಿಂದ ಕಾಯುತ್ತಿದ್ದರು. ಅವರನ್ನು ಭಾರತೀಯ ರಾಯಭಾರ ಕಚೇರಿಯಿಂದ ಭಾರತದ ಡೆಪ್ಯುಟಿ ಹೈಕಮಿಷನರ್ ಜೆಪಿ ಸಿಂಗ್ ಪಾಕಿಸ್ತಾನದ ವಿದೇಶಾಂಗ ಇಲಾಖೆ ಕಚೇರಿಗೆ ಕರೆದೊಯ್ದರು.
ಕೊನೆಗೆ ಇಂದು ಮಧ್ಯಾಹ್ನ 3.30 ಗಂಟೆ ಸುಮಾರಿಗೆ ಕುಲಭೂಷಣ್ ಜಾಧವ್ ರನ್ನು ನೋಡುವ ಅವಕಾಶ ಅವರ ತಾಯಿ ಮತ್ತು ಮಗಳಿಗೆ ಲಭ್ಯವಾಯಿತು. ಕಾತರದ ಕಣ್ಣುಗಳಿಂದ ಪತ್ನಿ ಮತ್ತು ತಾಯಿ ತಮ್ಮ ಮಗನನ್ನು ಕಣ್ತುಂಬಿಕೊಂಡರು. ಅಲ್ಲಿ ಅಕ್ಷರಶಃ ಭಾವುಕ ಸನ್ನಿವೇಶ ಸೃಷ್ಟಿಯಾಗಿತ್ತು.
|
ಪಾಕಿಸ್ತಾನ ಸರಕಾರಕ್ಕೆ ಧನ್ಯವಾದ
ಹಲವು ವರ್ಷಗಳ ನಂತರ ತಮ್ಮ ತಾಯಿ ಮತ್ತು ಪತ್ನಿಯನ್ನು ಭೇಟಿಯಾದ ಬಳಿಕ ಕುಲಭೂಷಣ್ ಕಣ್ಣಾಲಿಗಳು ಒದ್ದೆಯಾಗಿದ್ದವು. ಬಳಿಕ ಮಾತನಾಡಿರುವ ಅವರು, "ನಾನು ನನ್ನ ತಾಯಿ ಮತ್ತು ಪತ್ನಿಯನ್ನು ಭೇಟಿಯಾಗಲು ಕೋರಿದ್ದೆ. ಈ ಅವಕಾಶ ಕಲ್ಪಿಸಿದ್ದಕ್ಕಾಗಿ ಪಾಕಿಸ್ತಾನ ಸರಕಾರಕ್ಕೆ ಧನ್ಯವಾದ," ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಪಾಕಿಸ್ತಾನದ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿದೆ.

ಭಾರತದ ಮನವಿಗೆ ಸ್ಪಂದಿಸಿದ ಪಾಕಿಸ್ತಾನ
ಈ ಹಿಂದೆ ಭಾರತ ಸರಕಾರ ಕುಲಭೂಷಣ್ ಜಾಧವ್ ರನ್ನು ಭೇಟಿಯಾಗಲು ಅವರ ತಾಯಿ ಮತ್ತು ಹೆಂಡತಿಗೆ ಅವಕಾಶ ನೀಡಬೇಕು ಎಂದು ಕೋರಿ ಪಾಕಿಸ್ತಾನ ಸರಕಾರಕ್ಕೆ ಪತ್ರ ಬರೆದಿತ್ತು.
ಇದಕ್ಕೆ ನವೆಂಬರ್ 10ರಂದು ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ ಹೆಂಡತಿಯ ಭೇಟಿಗೆ ಅವಕಾಶ ನೀಡಿತ್ತು. ಆದರೆ ಭಾರತ ಕುಲಭೂಷಣ್ ರ ತಾಯಿಯ ಭೇಟಿಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿತ್ತು. ನಂತರ ಮನವಿ ಪುರಸ್ಕರಿಸಿದ ಪಾಕಿಸ್ತಾನ ಭೇಟಿಗೆ ಅವಕಾಶ ನೀಡಿತ್ತು.

ಬೇಹುಗಾರಿಕೆಯ ಆರೋಪಿ
ಜಾಧವ್ ಅವರನ್ನು ಬೇಹುಗಾರಿಕೆಯ ಆರೋಪದ ಮೇಲೆ ಪಾಕಿಸ್ತಾನ ಬಂಧಿಸಿದ್ದು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರು ಗಲ್ಲು ಶಿಕ್ಷೆಗೆ ಗುರಿಯಾಗಿದ್ದರು. ಅವರನ್ನು ಗಲ್ಲಿಗೇರಿಸಲು ಪಾಕಿಸ್ತಾನ ಸಿದ್ಧತೆಯನ್ನೂ ಮಾಡಿಕೊಂಡಿತ್ತು. ಕೊನೆಗೆ ಭಾರತ ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿ ಅವರನ್ನು ಗಲ್ಲು ಶಿಕ್ಷೆಯಿಂದ ಪಾರುಮಾಡಿತ್ತು.
ಶಿಕ್ಷೆಯಿಂದ ವಿನಾಯಿತಿ ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ಅಲ್ಲಿನ ಮಿಲಿಟರಿ ಮೇಲ್ಮನವಿ ನ್ಯಾಯಾಲಯ ತಿರಸ್ಕರಿಸಿತ್ತು. ಸದ್ಯ ಅವರ ಕ್ಷಮಾದಾನ ಅರ್ಜಿ ಸೇನಾ ಮುಖ್ಯಸ್ಥರ ಮುಂದಿದೆ.












Click it and Unblock the Notifications