ಪ್ರಧಾನಿ ಸಿಂಗ್ ಚುನಾವಣಾ ಪ್ರಚಾರದಿಂದ ದೂರವಾಗಿದ್ದೇಕೆ?
ಇಂಧೋರ್ (ಮಧ್ಯಪ್ರದೇಶ), ಏ. 21 : ಹತ್ತು ವರ್ಷಗಳ ಕಾಲ ದೇಶವನನ್ನು ಆಳಿದ ಪ್ರಧಾನಿ ಮನಮೋಹನ್ ಸಿಂಗ್ ಚುನಾವಣಾ ಪ್ರಚಾರದಲ್ಲಿ ಏಕೆ ಪಾಲ್ಗೊಳ್ಳುತ್ತಿಲ್ಲ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ.
ಮಧ್ಯಪ್ರದೇಶದ ಇಂಧೋರ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅನಂತ್ ಕುಮಾರ್, ಮನಮೋಹನ್ ಸಿಂಗ್ ಹತ್ತು ವರ್ಷಗಳ ಕಾಲ ದೇಶವನ್ನು ಆಳಿದ್ದಾರೆ. ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು ಬಿಟ್ಟು, ಏಕೆ ಮುಚ್ಚಿ ಕುಳಿತಿದ್ದಾರೆ. ಚುನಾವಣಾ ಪ್ರಚಾರದಿಂದ ದೂರವುಳಿದಿದ್ದಾರೆ ಎಂದು ಕುಟುಕಿದರು.

ಪ್ರಧಾನಿ ಮನಮೋಹನ್ ಸಿಂಗ್ ನೇರವಾಗಿ ಜನರಿಂದ ಚುನಾವಣೆ ಮೂಲಕ ಆಯ್ಕೆಯಾಗಿ ಸಂಸತ್ ಪ್ರವೇಶಿಸಲಿಲ್ಲ. ಜನರ ಮಧ್ಯೆ ಬಂದು ತಮ್ಮ ಸರ್ಕಾರ ಸಾಧನೆಯನ್ನು ತಿಳಿಸಲು ಅವರು ಏಕೆ ಹಿಂದೇಟು ಹಾಕುತ್ತಿದ್ದಾರೆ? ಎಂದು ಅನಂತ್ ಕುಮಾರ್ ಪ್ರಶ್ನಿಸಿದರು. [ಅಭಿವೃದ್ಧಿ ಮಂತ್ರ ಜಪಿಸುವ ಕನಸುಗಾರ ಅನಂತ್ ಕುಮಾರ್]
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಯಾವಾಗಲೂ ಜನರೊಂದಿಗೆ ಬರೆಯುತ್ತಾರೆ. ಇದುವರೆಗೂ ಅವರು 380 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸುಮಾರು 5 ಕೋಟಿ ಜನರೊಂದಿಗೆ ಬೆರೆತಿದ್ದಾರೆ. ಆದರೆ, ಪ್ರಧಾನಿ ಮನಮೋಹನ್ ಸಿಂಗ್ ಮಾತ್ರ ದೇಶದ ಜನರಿಂದ ದೂರ ಉಳಿದಿರುವುದೇಕೆ? ಎಂದರು. [ವಿದೇಶದಲ್ಲಿ ಸೋನಿಯಾ 3 ಬ್ಯಾಂಕ್ ಖಾತೆ!]
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಚಾರದ ವೈಖರಿ ಬಗ್ಗೆ ಟೀಕಿಸಿದ ಅನಂತ್ ಕುಮಾರ್, ಹತ್ತು ವರ್ಷಗಳಲ್ಲಿ ಯುಪಿಎ ಸರ್ಕಾರದ ಸಾಧನೆ ಏನು ಎಂಬುದರ ಕುರಿತು ಬಹಿರಂಗವಾಗಿ ಚರ್ಚೆ ನಡೆಸೋಣ ಬನ್ನಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.
ಕಳೆದ ಹತ್ತು ವರ್ಷಗಳಲ್ಲಿ ಜನರು ಆರ್ಥಿಕ ಸಂಕಷ್ಟ, ದುರಾಡಳಿತ, ಭದ್ರತಾ ಸಮಸ್ಯೆ ಎದುರಿಸಿದ್ದಾರೆ. ಇದಕ್ಕೆ ಉತ್ತರ ನೀಡಬೇಕಾಗಿರುವ ಪ್ರಧಾನಿ ಮನಮೋಹನ್ ಸಿಂಗ್, ಚುನಾವಣಾ ಪ್ರಚಾರದಿಂದ ದೂರುವುಳಿದಿದ್ದು, ಜನರನ್ನು ವಂಚಿಸುತ್ತಿದ್ದಾರೆ ಎಂದು ಅನಂತ್ ಕುಮಾರ್ ಆರೋಪಿಸಿದರು.
ಕಾಂಗ್ರಸ್ ಪಕ್ಷ ಸೋನಿಯಾ ಅಥವ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಹಿಂದೇಟು ಹಾಕುತ್ತಿದೆ. ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಚಿದಂಬರಂ, ಮನೀಶ್ ತಿವಾರಿ ಮುಂತಾದ ಹಿರಿಯ ನಾಯಕರು, ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅನಂತ್ ಕುಮಾರ್ ಲೇವಡಿ ಮಾಡಿದರು.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ದೇಶದ ಜನರಿಗೆ ಯುಪಿಎ ಸರ್ಕಾರದ 2ಜಿ, ಕಾಮನ್ ವೆಲ್ತ್, ಕಲ್ಲಿದ್ದಲು ಹಗರಣ ಮತ್ತು ರಾರ್ಬಟ್ ವಾದ್ರಾ ಭೂ ಹಗರಣದ ಕುರಿತು ಸ್ಪಷ್ಟನೆ ನೀಡಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಜನರು ತಮ್ಮ ತೀರ್ಪು ನೀಡಲಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ 100ಕ್ಕಿಂತ ಕಡಿಮೆ ಸ್ಥಾನಗಳಿಸಲಿದೆ ಎಂದರು.
ಬಿಜೆಪಿ 272ಕ್ಕಿಂತ ಅಧಿಕ ಸ್ಥಾನ ಗಳಿಸಲಿದೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ದೇಶದ ಮಹಾನಗರಗಳನ್ನು ಸಂಪರ್ಕಿಸಲು ರಸ್ತೆ ನಿರ್ಮಾಣ ಮಾಡಿದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ ಪ್ರಮುಖ ನದಿಗಳನ್ನು ಜೋಡಣೆ ಮಾಡಲಿದೆ ಎಂದು ಅನಂತ್ ಕುಮಾರ್ ತಿಳಿಸಿದರು.












Click it and Unblock the Notifications