ದೇಶ ಅತಿ ಅಪಾಯದಲ್ಲಿದೆ; ರಾಜ್ಯಗಳಿಗೆ ಆರೋಗ್ಯ ಸಚಿವಾಲಯದ ಎಚ್ಚರಿಕೆ
ನವದೆಹಲಿ, ಮಾರ್ಚ್ 30: ದೇಶದಲ್ಲಿ ಕೊರೊನಾ ಪರಿಸ್ಥಿತಿಯು ಅತಿ ಕೆಟ್ಟ ಹಂತ ತಲುಪುತ್ತಿದ್ದು, ಈ ಬೆಳವಣಿಗೆ ದೊಡ್ಡ ಆತಂಕಕ್ಕೆ ಕಾರಣವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಎಚ್ಚರಿಕೆ ನೀಡಿದೆ.
ದೇಶದಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಮಂಗಳವಾರ ಮಾಹಿತಿ ನೀಡಿರುವ ಸಚಿವಾಲಯವು, ಕೊರೊನಾ ಸಕ್ರಿಯ ಪ್ರಕರಣಗಳು ಹೆಚ್ಚಿರುವ ಹತ್ತು ಜಿಲ್ಲೆಗಳನ್ನು ಪಟ್ಟಿ ಮಾಡಿದೆ. ಪುಣೆ, ಮುಂಬೈ, ನಾಗಪುರ, ಥಾಣೆ, ನಾಸಿಕ್, ಔರಂಗಾಬಾದ್, ಬೆಂಗಳೂರು ನಗರ, ನಾಂದೆಡ್, ದೆಹಲಿ ಹಾಗೂ ಅಹಮದಾಬಾದ್ ಈ ಹತ್ತು ಜಿಲ್ಲೆಗಳಲ್ಲಿ ಹೆಚ್ಚಿನ ಕೊರೊನಾ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ. ಜೊತೆಗೆ ಆ ಜಿಲ್ಲೆಗಳಲ್ಲಿ ಕೊರೊನಾ ಪರೀಕ್ಷೆಯನ್ನು ತ್ವರಿತಗೊಳಿಸಿ ಸೋಂಕು ಹರಡುವಿಕೆ ತಡೆಗಟ್ಟಲು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಈ ಕುರಿತು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಮತ್ತಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...
"ಐಸೊಲೇಷನ್ ನಿಯಮ ಪಾಲಿಸುತ್ತಿಲ್ಲ"
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ತಗುಲಿರುವವರು ಐಸೊಲೇಷನ್ನಲ್ಲಿ ಇರುತ್ತಿಲ್ಲ. ಸೋಂಕಿತರಿಗೆ ಮನೆಯಲ್ಲೇ ಐಸೊಲೇಷನ್ನಲ್ಲಿರಲು ಸೂಚಿಸಲಾಗಿದೆ. ಆದರೆ ಅವರು ಹಾಗೆ ಇಲ್ಲ. ಹೀಗಾಗಿ ಇಂಥವರ ಮೇಲೆ ನಿಗಾ ಇಡಬೇಕಾಗಿದೆ. ಅವರು ಪ್ರತ್ಯೇಕವಾಗಿ ಇರುತ್ತಿಲ್ಲ ಎಂದಾದರೆ ಸಾಂಸ್ಥಿಕ ಕ್ವಾರಂಟೈನ್ನಲ್ಲಿಡಬೇಕು. ಇದೇ ನಿಯಮ ಅನುಸರಿಸಿ ದೆಹಲಿಯಲ್ಲಿ ಕೊರೊನಾ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು.
ಈ ಹತ್ತು ಜಿಲ್ಲೆಗಳಲ್ಲಿದೆ ಅತಿ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣ
"ದೇಶವು ಸದ್ಯಕ್ಕೆ ಅಪಾಯದಲ್ಲಿದೆ"
ಕೆಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದೆ. ಇದು ಗಂಭೀರ ಪರಿಸ್ಥಿತಿಯನ್ನು ಸೂಚಿಸುತ್ತಿದೆ. ದೇಶವು ಸದ್ಯಕ್ಕೆ ಅಪಾಯದಲ್ಲಿದೆ. ವೈರಸ್ ನಿಯಂತ್ರಿಸುವ ಹಾಗೂ ಜೀವಗಳನ್ನು ರಕ್ಷಿಸುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಿದೆ ಎಂದು ಆರೋಗ್ಯ ಸಚಿವಾಲಯದ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ತಿಳಿಸಿದ್ದಾರೆ.
ಕೊರೊನಾ ಪರೀಕ್ಷೆ ತ್ವರಿತಗೊಳಿಸಲು ಸೂಚನೆ
ಹೆಚ್ಚಿನ ಸೋಂಕು ಹೊಂದಿರುವ ರಾಜ್ಯಗಳ ಪ್ರತಿನಿಧಿಗಳಿಗೆ ಈ ಕುರಿತು ಸೂಚನೆ ನೀಡಿದ್ದೇವೆ. ಹೀಗೆ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ಏಕೆ ಕೊರೊನಾ ಪರೀಕ್ಷೆಯ ಪ್ರಮಾಣವನ್ನು ಏರಿಸಿಲ್ಲ ಎಂದು ಪ್ರಶ್ನಿಸಿದ್ದೇವೆ. ಆರ್ಟಿಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸಲೇಬೇಕಾದ ಅನಿವಾರ್ಯತೆ ಇದೆ. ಎಲ್ಲಾ ರಾಜ್ಯಗಳಿಗೂ ಕೊರೊನಾ ನಿಯಂತ್ರಣದ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದೇವೆ ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಯಾವ ವಯಸ್ಸಿನವರಿಗೆ ಕೊರೊನಾದಿಂದ ಹೆಚ್ಚು ಅಪಾಯ?
ದೇಶದಲ್ಲಿ ಏರುತ್ತಿರುವ ಸಕ್ರಿಯ ಪ್ರಕರಣಗಳು
ಮಂಗಳವಾರ ದೇಶದಲ್ಲಿ 56,211 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 1,20,95,855 ಮಂದಿ ಒಟ್ಟಾರೆ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 37,028 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಚೇತರಿಸಿಕೊಂಡವರ ಸಂಖ್ಯೆ 1,13,93,021ಕ್ಕೆ ತಲುಪಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,40,720ಕ್ಕೆ ತಲುಪಿದೆ.