Maharashtra Assembly Election 2024: ದೇಶಕ್ಕೆ ನರೇಂದ್ರ, ಮಹಾರಾಷ್ಟ್ರಕ್ಕೆ ದೇವೇಂದ್ರ ಘೋಷಣೆ!
ಮುಂಬೈ, ನವೆಂಬರ್ 12: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರಲ್ಲಿ 'ಮಹಾಯತಿ' ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು?. ರಾಜ್ಯದ ಚುನಾವಣೆ ಫಲಿತಾಂಶಕ್ಕಿಂತ ಕುತೂಹಲ ಮೂಡಿಸಿರುವ ಪ್ರಶ್ನೆ ಇದು. ಹಾಲಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಲಿದ್ದಾರೆಯೇ?. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಮಹಾರಾಷ್ಟ್ರದಲ್ಲಿ ಹಾಲಿ ಮಹಾಯತಿ ಮೈತ್ರಿಕೂಟ ಅಧಿಕಾರದಲ್ಲಿದೆ. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ಸಿಪಿ (ಅಜಿತ್ ಪವಾರ್ ಬಣ) ಸೇರಿರುವ ಮೈತ್ರಿಕೂಟ ಇದು. ಆದರೆ ಮುಖ್ಯಮಂತ್ರಿ ಶಿವಸೇನೆಯ ಏಕನಾಥ್ ಶಿಂಧೆ. 2024ರ ಚುನಾವಣೆಯ ಬಳಿಕ ಮೈತ್ರಿಕೂಟದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬುದು ಎಲ್ಲರ ಪ್ರಶ್ನೆಯಾಗಿದೆ.

288 ಸ್ಥಾನಗಳ ಪೈಕಿ 150ಕ್ಕೂ ಅಧಿಕ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಒಂದು ವೇಳೆ ಮಹಾಯತಿ ಮೈತ್ರಿಕೂಟ ಸರ್ಕಾರ ರಚನೆ ಮಾಡಿದರೆ ಮುಖ್ಯಮಂತ್ರಿ ಯಾರಾಗಲಿದ್ದಾರೆ? ಎಂಬ ಚರ್ಚೆಗಳು ಜೋರಾಗಿವೆ.
ದೇಶಕ್ಕೆ ನರೇಂದ್ರ, ಮಹಾರಾಷ್ಟ್ರಕ್ಕೆ ದೇವೇಂದ್ರ: ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚೆಗಳು ನಡೆದಾಗಲೆಲ್ಲ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಭಾನುವಾರ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ, "ಸದ್ಯಕ್ಕೆ ಏಕನಾಥ್ ಶಿಂಧೆ ನಮ್ಮ ಮುಖ್ಯಮಂತ್ರಿ. ಆದರೆ ಚುನಾವಣೆಯ ಬಳಿಕ ಮಹಾಯತಿಯ ಮೂರು ಪಕ್ಷಗಳು ಸೇರಿಕೊಂಡು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ತೀರ್ಮಾನಿಸುತ್ತೇವೆ" ಎಂದು ಹೇಳಿದರು.
ಕಳೆದ ವಾರ ಸಾಂಗ್ಲಿಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ್ದ ಅಮಿತ್ ಶಾ, "ರಾಜ್ಯದ ಜನರು ಮಹಾಯತಿ ಮತ್ತು ಫಡ್ನವೀಸ್ ರಾಜ್ಯಕ್ಕೆ ಮತ್ತೆ ಬೇಕು ಎಂದು ಬಯಸುತ್ತಿದ್ದಾರೆ" ಎಂದು ಅಮಿತ್ ಶಾ ಹೇಳಿದ್ದರು. ಇದು ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಸೂಚನೆಯನ್ನು ರವಾನೆ ಮಾಡಿತ್ತು.
ರಾಜ್ಯದ ಬಿಜೆಪಿ ನಾಯಕರ ಪ್ರಕಾರ, ತಳಮಟ್ಟದಲ್ಲಿ ದೇಶಕ್ಕೆ ನರೇಂದ್ರ, ಮಹಾರಾಷ್ಟ್ರಕ್ಕೆ ದೇವೇಂದ್ರ ಎಂಬ ಮಾತಿದೆ ಎಂದು ಹೇಳಿದ್ದಾರೆ. ದೇವೇಂದ್ರ ಫಡ್ನವೀಸ್ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಲು ಏಕೆ ಬಿಟ್ಟುಕೊಟ್ಟರು? ಎಂದು ಈಗಲೂ ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ.
ಎರಡು ಕಾರಣಕ್ಕೆ ದೇವೇಂದ್ರ ಫಡ್ನವೀಸ್ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮೊದಲನೆಯದು 2014 ರಿಂದ 2019ರ ತನಕ ಅವರು ನಡೆಸಿದ ಆಡಳಿತ. 2022ರಲ್ಲಿ ಅವರು ಮುಖ್ಯಮಂತ್ರಿ ಸ್ಥಾನವನ್ನು ಶಿವಸೇನೆಗೆ ಬಿಟ್ಟುಕೊಡಬಾರದಿತ್ತು ಎಂದು ಪಕ್ಷದ ಪ್ರಮುಖ ನಾಯಕರು, ಆರ್ಎಸ್ಎಸ್ ಸಹ ಹೇಳುತ್ತಿದೆ.
2024ರ ಲೋಕಸಭೆ ಚುನಾವಣೆಗೆ ಬಿಜೆಪಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿಯೇ ಹೋಯಿತು. 48 ಸೀಟುಗಳಲ್ಲಿ ಕೇವಲ 9 ಸ್ಥಾನ ಗೆದ್ದಿತು. ಆಗ ಫಡ್ನವೀಸ್ ಪಕ್ಷ ಸಂಘಟನೆ ಮಾಡುತ್ತೇನೆ. ಉಪ ಮುಖ್ಯಮಂತ್ರಿ ಸ್ಥಾನದಿಂದ ನನ್ನನ್ನು ಮುಕ್ತಗೊಳಿಸಿ ಎಂದು ಕೇಂದ್ರ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದರು.
ಸಮೀಕ್ಷೆಗಳಲ್ಲಿ ದೇವೇಂದ್ರ ಫಡ್ನವೀಸ್ ಪರವಾಗಿಯೇ ಜನರು ಅಭಿಪ್ರಾಯವಿದೆ. ಒಂದು ವೇಳೆ ಈ ಬಾರಿ ಬಿಜೆಪಿ ಹೆಚ್ಚು ಸೀಟುಗಳಲ್ಲಿ ಗೆಲುವು ದಾಖಲಿಸಿದರೆ ಫಡ್ನವೀಸ್ ಮತ್ತೆ ಸಿಎಂ ಆಗಬೇಕು ಎಂದು ಜನರು, ಪಕ್ಷದ ನಾಯಕರು, ಕಾರ್ಯಕರ್ತರು ಬಯಸುತ್ತಿದ್ದಾರೆ.
"ಸದ್ಯಕ್ಕೆ ಏಕನಾಥ್ ಶಿಂಧೆ ನಮ್ಮ ಮುಖ್ಯಮಂತ್ರಿ ಚುನಾವಣೆ ಬಳಿಕವೂ ಅವರೇ ನಮ್ಮ ಮುಖ್ಯಮಂತ್ರಿ ಎಂದು" ಶಿವಸೇನೆಯ ಹಿರಿಯ ಸಚಿವರೊಬ್ಬರು ಹೇಳಿದ್ದಾರೆ. ಮಹಾಯತಿಯ ಮತ್ತೊಂದು ಮಿತ್ರಪಕ್ಷ ಎನ್ಸಿಪಿ ರಾಜ್ಯಾಧ್ಯಕ್ಷ ಸುನಿಲ್ ಠಾಕ್ರೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿದೆ.












Click it and Unblock the Notifications