ಬುಲೆಟ್ ರೈಲಿನಿಂದ ಗುಜರಾತಿ ಉದ್ಯಮಿಗಳಿಗೆ ಮಾತ್ರ ಲಾಭ : ಕಿಡಿಕಾರಿದ ಶಿವಸೇನೆ
ಮುಂಬೈ, ಸೆಪ್ಟೆಂಬರ್ 15: ದೇಶಕ್ಕೆ ದೇಶವೇ ಬುಲೆಟ್ ರೈಲು ಜಪದಲ್ಲಿದ್ದರೆ, 'ಇದರಿಂದ ಗುಜರಾತಿ ಉದ್ಯಮಿಗಳಿಗೆ ಮಾತ್ರ ಲಾಭವಾಗಲಿದೆ,' ಎಂದು ಒಂದು ಕಾಲದ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಕಿಡಿಕಾರಿದೆ.
"ಶಿವಸೇನೆ ಯಾವತ್ತೂ ಅಭಿವೃದ್ಧಿಯ ವಿರೋಧಿ ಪಕ್ಷವಲ್ಲ. ಆದರೆ ನಿಜವಾಗಿಯೂ ನಮಗೆ ಬುಲೆಟ್ ರೈಲು ಅಗತ್ಯವಿದೆಯೇ? ಸರಕಾರದ ಆದ್ಯತೆ ಏನು? ವ್ಯಾಪಾರಿಗಳಾಗಲಿ, ಉದ್ಯಮಿಗಳಾಗಲಿ, ಸಾಮಾನ್ಯ ಜನರಾಗಲಿ ಬುಲೆಟ್ ರೈಲು ಯೋಜನೆ ಬೇಕೆಂದು ಹೇಳಿಲ್ಲ. ಹಾಗಿದ್ದರೆ 1,08,000 ಕೋಟಿ ರೂಪಾಯಿಗಳ ಈ ಯೋಜನೆಯ ಉದ್ದೇಶವೇನು?," ಎಂದು ಶಿವಸೇನೆ ವಕ್ತಾರ ಮನಿಷಾ ಖಾಂಡ್ಯೆ ಪ್ರಶ್ನಿಸಿದ್ದಾರೆ.

"ಬುಲೆಟ್ ರೈಲು ಯೋಜನೆಯಿಂದ ಗುಜರಾತಿ ಉದ್ಯಮಿಗಳಿಗೆ ಮಾತ್ರ ಲಾಭವಾಗಲಿದೆ. ಮುಂಬರಲಿರುವ ಗುಜರಾತ್ ವಿಧಾನಸಭೆ ಚುನಾವಣೆಯ ಹಿಡನ್ ಅಜೆಂಡಾ ಇಟ್ಟುಕೊಂಡು ಈ ಯೋಜನೆಗೆ ಚಾಲನೆ ನೀಡಲಾಗಿದೆ," ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಅವರು ಬುಲೆಟ್ ಟ್ರೇನ್ ಅಗತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. "ರೈತರ ಸಾಲ, ಶಿಕ್ಷಣ, ಆರೋಗ್ಯ ಸೇವೆ ಮತ್ತು ಮೂಲ ಸೌಕರ್ಯಗಳೂ ಸೇರಿದಂತೆ ಹಲವು ಸಮಸ್ಯೆಗಳಿಂದ ದೇಶದ ಜನ ಬಳಲುತ್ತಿದ್ದಾರೆ. ಸಮಾಜದ ಕೆಳ ವರ್ಗದವರು ಸರಕಾರದ ಆದ್ಯತೆಯಾಗಬೇಕಿತ್ತು. ಆದರೆ ಹಾಗಾಗಿಲ್ಲ," ಎಂದು ಮನಿಷಾ ಖಾಂಡ್ಯೆ ತರಾಟೆಗೆ ತೆಗೆದುಕೊಂಡಿದ್ದಾರೆ.
"ಬುಲೆಟ್ ರೈಲು ಯೋಜನೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುವುದು ಸುಳ್ಳು. ಜಪಾನ್ ಮೆಷೀನ್ ಗಳಿಂದ ಹಿಡಿದ ಕಾರ್ಮಿಕರನ್ನೂ ಕರೆತರುತ್ತದೆ. 1,08,000 ಕೋಟಿ ರೂಪಾಯಿಯ ಯೋಜನೆಯಲ್ಲಿ ಕನಿಷ್ಟ 30,000 ಕೋಟಿ ರೂಪಾಯಿಯನ್ನು ಮಹಾರಾಷ್ಟ್ರವೇ ಹೂಡಿಕೆ ಮಾಡಬೇಕಾಗುತ್ತದೆ. ಹೀಗಿರುವಾಗ ರೈತರ ಆತ್ಮಹತ್ಯೆಯನ್ನು ಪರಿಗಣಿಸಿ ರೈತರ ಸಾಲ ಮನ್ನಾ ಸರಕಾರದ ಆದ್ಯತೆಯಾಗಬೇಕಾಗಿತ್ತಲಾ?," ಎಂದು ಮನಿಷಾ ಖಾಂಡ್ಯೆ ಸಾಮ್ನಾ ಸಂಪಾದಕೀಯದಲ್ಲಿ ಪ್ರಶ್ನಿಸಿದ್ದಾರೆ.
ಬುಲೆಟ್ ರೈಲು ಯೋಜನೆ ಶ್ರೀಮಂತರ ಕನಸೇ ಹೊರತು, ಸಾಮಾನ್ಯ ಜನರ ಕನಸಲ್ಲ ಎಂದು ಶಿವಸೇನೆ ಟೀಕಿಸಿದೆ.












Click it and Unblock the Notifications