ವಿಚಾರಣಾಧೀನ ಕೈದಿ ಬಿಡುಗಡೆ : ಲಾಭ ಯಾರಿಗೆ?
ನವದೆಹಲಿ, ಸೆ. 6 : ಸುದೀರ್ಘ ಕಾಲ ಜೈಲಿನಲ್ಲಿದ್ದು ವಿಚಾರಣೆ ಎದುರಿಸುತ್ತಿರುವ ಕೈದಿಗಳನ್ನು ಬಿಡುಗಡೆ ಮಾಡಬೇಕೆಂಬ ಸರಕಾರದ ಆದೇಶದಿಂದ ಅತಿಹೆಚ್ಚು ಲಾಭ ಪಡೆಯುವವರು ಯಾರು ಗೊತ್ತಾ? ಮುಸ್ಲಿಂ ಕೈದಿಗಳು! ಇದಕ್ಕೆ ಕಾರಣವೇನೆಂದರೆ, ಭಾರತದಲ್ಲಿರುವ ವಿಚಾರಣಾಧೀನ ಮುಸ್ಲಿಂ ಕೈದಿಗಳ ಸಂಖ್ಯೆ ಹಿಂದೂ ಕೈದಿಗಳಿಗಿಂತ ದುಪ್ಪಟ್ಟು ಇರುವುದು!
ಪ್ರತಿ ಲಕ್ಷ ಜನಸಂಖ್ಯೆಯ ಆಧಾರದ ಮೇಲೆ ಭಾರತದಲ್ಲಿರುವ ವಿಚಾರಣಾಧೀನ ಹಿಂದೂ ಕೈದಿಗಳ ಸಂಖ್ಯೆ ಶೇ.21.5ರಷ್ಟಿದ್ದರೆ, ಮುಸ್ಲಿಂ ವಿಚಾರಣಾಧೀನ ಕೈದಿಗಳ ಸಂಖ್ಯೆ ಶೇ.38.81ರಷ್ಟು. ಹೆಚ್ಚೂಕಡಿಮೆ ಹಿಂದೂಗಳಿಗಿಂತ ಎರಡರಷ್ಟು ಮುಸ್ಲಿಂ ಕೈದಿಗಳು ಜೈಲಿನಲ್ಲಿ ಕಾಲಕಳೆಯುತ್ತಿದ್ದಾರೆ.
ಇನ್ನೂ ಆಸಕ್ತಿಕರ ಸಂಗತಿಯೆಂದರೆ, ವಿಚಾರಣಾಧೀನ ಕೈದಿಗಳಲ್ಲಿ ಶೇ.17ರಷ್ಟು ಮುಸ್ಲಿಂ ಕೈದಿಗಳ ಆರೋಪ ಸಾಬೀತಾಗಿದ್ದರೆ, ಶೇ.21ರಷ್ಟು ಆರೋಪಿಗಳು ಇನ್ನೂ ವಿಚಾರಣೆ ಎದುರಿಸುತ್ತಿದ್ದಾರೆ. ಹಿಂದೂಗಳಲ್ಲಿ ಇದು ಹಿಂದುಮುಂದಾಗಿದೆ. ವಿಚಾರಣೆ ಎದುರಿಸುತ್ತಿರುವ ಹಿಂದೂಗಳ ಸಂಖ್ಯೆ ಆರೋಪ ಸಾಬೀತಾಗಿರುವವರಿಗಿಂತ ಕಡಿಮೆ.
ಜೈಲುಗಳು ಕೈದಿಗಳಿಂದ ತುಂಬಿ ತುಳುಕುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವನ್ನು ಸರ್ವೋಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ಜನರನ್ನು ಬಂಧಿಸುವುದರಿಂದ ಮಾತ್ರ ಕಾನೂನು ಸುಸ್ಥಿತಿಯಲ್ಲಿ ತರಲು ಸಾಧ್ಯವೆ ಎಂದು ಕೋರ್ಟ್ ಕಿಡಿಕಾರಿತ್ತು. ವಿಚಾರಣೆ ಎದುರಿಸದ ಮತ್ತು ಹೆಚ್ಚು ಕಾಲ ಜೈಲಲ್ಲಿರುವ ಕೈದಿಗಳನ್ನು ಬಿಡುಗಡೆ ಮಾಡಲು ಎರಡು ತಿಂಗಳ ಕಾಲಾವಕಾಶ ಸುಪ್ರೀಂಕೋರ್ಟ್ ನೀಡಿದೆ.
ಮುಸ್ಲಿಂ ಕೈದಿಗಳೇ ಹೆಚ್ಚಾಗಿರಲು ಕಾರಣಗಳೇನೆಂದು ಮುಂದೆ ಓದಿರಿ.

ವಿಚಾರಣಾಧೀನ ಮುಸ್ಲಿಂ ಕೈದಿಗಳು ಎಲ್ಲಿ ಹೆಚ್ಚು
ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ 2012ರಲ್ಲಿ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 3.8 ಲಕ್ಷ ಕೈದಿಗಳಲ್ಲಿ 2.5 ಲಕ್ಷ ಕೈದಿಗಳು ವಿಚಾರಣೆ ಎದುರಿಸುತ್ತಿದ್ದಾರೆ. ಇವರಲ್ಲಿ ಶೇ.21ರಷ್ಟು ಮುಸ್ಲಿಂ ವಿಚಾರಣಾಧೀನ ಕೈದಿಗಳಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಅತಿಹೆಚ್ಚು ಮುಸ್ಲಿಂ ಕೈದಿಗಳಿದ್ದಾರೆ.

ಕೈದಿಗಳು ವಿಚಾರಣೆ ಎದುರಿಸದಿರಲು ಕಾರಣ
ಇವರು (ಮುಸ್ಲಿಂ ಕೈದಿಗಳು) ವಿಚಾರಣಾಧೀನ ಕೈದಿಗಳಾಗಿಯೇ ಉಳಿಯಲು ಕೂಡ ಹಲವಾರು ಕಾರಣಗಳಿವೆ. ವಿಚಾರಣೆ ಮುಂದೂಡಲ್ಪಡುವುದು, ಪೊಲೀಸರಿಂದ ವಿಳಂಬ, ಸರಕಾರಿ ವಕೀಲರು, ಪ್ರತಿವಾದಿ ವಕೀಲರು ವಿಚಾರಣೆ ನಡೆಸಲು ಸಿದ್ಧರಾಗಿಲ್ಲದಿರುವುದರಿಂದ ಇವರು ಜೈಲಲ್ಲಿಯೇ ಕೊಳೆಯುತ್ತಿದ್ದಾರೆ.

ಅತ್ತ ಜಾಮೀನೂ ಇಲ್ಲ, ಇತ್ತ ವಿಚಾರಣೆಯೂ ಇಲ್ಲ
ಎಲ್ಲಕ್ಕಿಂತ ಹೆಚ್ಚಾಗಿ ಮುಸ್ಲಿಂ ಕೈದಿಗಳು ವಕೀಲರನ್ನು ನೇಮಿಸಲು ಮತ್ತು ಜಾಮೀನು ಪಡೆಯಲು ವಿಫಲರಾಗುತ್ತಿರುವುದು ಕೂಡ ಪ್ರಮುಖ ಕಾರಣವಾಗಿದೆ. ಅತ್ತ ಜಾಮೀನೂ ಇಲ್ಲ, ಇತ್ತ ವಿಚಾರಣೆಯೂ ನಡೆಯದೆ ಲಕ್ಷಾಂತರ ಮುಸ್ಲಿಂ ಕೈದಿಗಳು ಜೈಲಲ್ಲಿ ರಾಗಿ ಬೀಸುತ್ತಿದ್ದಾರೆ.

ಪೊಲೀಸರ ಪಕ್ಷಪಾತ ಧೋರಣೆ ಮತ್ತೊಂದು ಕಾರಣ
2013ರಲ್ಲಿ ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ತಮಿಳುನಾಡು ಡಿಜಿಪಿಗಳು ನಡೆಸಿದ ಅಧ್ಯಯನ ಹೊಸ ಬೆಳಕನ್ನು ಚೆಲ್ಲಿದೆ. ಕೋಮು ಗಲಭೆಗಳಾದಾಗ ಮುಸ್ಲಿಂ ಸಮುದಾಯದ ಮೇಲೆ ಪೊಲೀಸರಿಗಿರುವ ಪಕ್ಷಪಾತ ಧೋರಣೆಯಿಂದಾಗಿ ಅತಿಹೆಚ್ಚು ಮುಸ್ಲಿಂ ಆರೋಪಿಗಳು ಜೈಲು ಸೇರುವಂತಾಗಿದೆ ಎಂದು ಆ ವರದಿ ತಿಳಿಸಿದೆ.

ಕೈದಿಗಳಲ್ಲಿ ಹಿಂದುಳಿದ ವರ್ಗದವರೇ ಹೆಚ್ಚು
ಇನ್ನೂ ಆಘಾತಕಾರಿ ಸಂಗತಿಯೆಂದರೆ, ಶೇ.70ರಷ್ಟು ಕೈದಿಗಳು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಅಂದಾಜು 25 ಸಾವಿರದಷ್ಟು ಕೈದಿಗಳು ವಿಚಾರಣೆ ಕೂಡ ಎದುರಿಸದೆ ಎರಡು ವರ್ಷಗಳಿಂದ ಜೈಲಲ್ಲಿದ್ದಾರೆ. 55 ಸಾವಿರದಷ್ಟು ಕೈದಿಗಳು 1 ವರ್ಷಕ್ಕಿಂತ ಹೆಚ್ಚು ವಿಚಾರಣೆ ಎದುರಿಸದೆ ಜೈಲಲ್ಲಿ ಜೀವನ ಸಾಗಿಸುತ್ತಿದ್ದಾರೆ.












Click it and Unblock the Notifications