ರಾಜಸ್ಥಾನದಲ್ಲಿ ಸ್ಪಷ್ಟ ಬಹುಮತ ಗಳಿಸುವ ಪಕ್ಷ ಯಾವುದು, ಇಂಡಿಯಾ ಟಿವಿ ಸಿಎನ್ಎಕ್ಸ್ ಸಮೀಕ್ಷೆ ವಿವರ
ಜೈಪುರ, ನವೆಂಬರ್ 6: ರಾಜಸ್ಥಾನ ವಿಧಾನಸಭಾ ಚುನಾವಣೆ ಅಖಾಡ ಕಾವೇರಿದ್ದು, ಹಲವಾರು ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬೀಳುತ್ತಿವೆ. ಈ ಬಾರಿ ಅಧಿಕಾರ ಹಿಡಿಯುವ ಪಕ್ಷ ಯಾವುದು ಎಂದು ಇಂಡಿಯಾ ಟಿವಿ ಸಿಎನ್ಎಕ್ಸ್ ಸಮೀಕ್ಷೆ ಎರಡನೇ ಭಾಗವನ್ನು ಬಿಡುಗಡೆ ಮಾಡಲಾಗಿದೆ. ಅದರ ವಿವರ ಇಲ್ಲಿದೆ.
ಇದೇ ನವೆಂಬರ್ ತಿಂಗಳಲ್ಲಿ ನಡೆಯವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತವನ್ನು ಪಡೆಯಬಹುದು ಎಂದು ಇಂಡಿಯಾ ಟಿವಿ-ಸಿಎನ್ಎಕ್ಸ್ ಎರಡನೇ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಲಾಗಿದೆ.

200 ವಿಧಾನಸಭಾ ಸ್ಥಾನಗಳ ಸದನದಲ್ಲಿ ಐದು ವರ್ಷಗಳ ಹಿಂದೆ ಅದು ಗೆದ್ದಿದ್ದ 73 ಸ್ಥಾನಗಳಿಗೆ ಹೋಲಿಸಿದರೆ ಬಿಜೆಪಿ 115 ಸ್ಥಾನಗಳನ್ನು ಗೆಲ್ಲಬಹುದು ಎಂದು ಚುನಾವಣಾ ಪೂರ್ವ ಸಮೀಕ್ಷೆಯ ವಿವರ ತಿಳಿಸಿದೆ. 5 ವರ್ಷಗಳ ಹಿಂದೆ ಗೆದ್ದಿದ್ದ 100 ಸ್ಥಾನಗಳಿಗೆ ಹೋಲಿಸಿದರೆ ಆಡಳಿತ ಪಕ್ಷ ಕಾಂಗ್ರೆಸ್ 80 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
2018 ರಲ್ಲಿ ಅವರು ಗೆದ್ದಿದ್ದ 27 ಸ್ಥಾನಗಳಿಗೆ ಹೋಲಿಸಿದರೆ ಸ್ವತಂತ್ರರು ಮತ್ತು ಪ್ರಾದೇಶಿಕ ಪಕ್ಷಗಳು ಸೇರಿದಂತೆ ಇತರರು ಕೇವಲ ಐದು ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಮತ ಹಂಚಿಕೆ ಪ್ರಮಾಣದ ಪ್ರಕಾರ, ಬಿಜೆಪಿ 45 ಶೇಕಡಾ, ಕಾಂಗ್ರೆಸ್ 42 ಶೇಕಡಾ ಮತ್ತು ಇತರರು ಶೇಕಡಾ 13 ರಷ್ಟು ಪಡೆಯಬಹುದು. 2018ರ ಚುನಾವಣೆಯಲ್ಲಿ ಬಿಜೆಪಿ ಶೇ.38.77, ಕಾಂಗ್ರೆಸ್ ಶೇ.39.3 ಮತ್ತು 'ಇತರರು' ಶೇ.21.93 ಮತಗಳನ್ನು ಪಡೆದಿದ್ದರು ಎಂದು ತಿಳಿಸಿದೆ.
ಪ್ರದೇಶವಾರು ಚುನಾವಣಾ ಪೂರ್ವ ಸಮೀಕ್ಷೆ ವಿವರ:
ಜೈಪುರ-ಧೋಲ್ಪುರ್ ಪ್ರದೇಶದಲ್ಲಿ 48 ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ 26, ಕಾಂಗ್ರೆಸ್ 20 ಮತ್ತು ಇತರರು 2 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ. 24 ಸ್ಥಾನಗಳನ್ನು ಹೊಂದಿರುವ ಟೋಂಕ್-ಕೋಟಾ ಪ್ರದೇಶದಲ್ಲಿ ಬಿಜೆಪಿ 13 ಸ್ಥಾನಗಳನ್ನು ಗೆಲ್ಲಬಹುದು, ಉಳಿದ 11 ಸ್ಥಾನಗಳನ್ನು ಕಾಂಗ್ರೆಸ್ಗೆ ಬಿಟ್ಟುಕೊಡಬಹುದು. 56 ಸ್ಥಾನಗಳನ್ನು ಹೊಂದಿರುವ ಮಾರ್ವಾಡ ಪ್ರದೇಶದಲ್ಲಿ ಬಿಜೆಪಿ 34, ಕಾಂಗ್ರೆಸ್ 20 ಮತ್ತು ಇತರರು 2 ಸ್ಥಾನಗಳನ್ನು ಗೆಲ್ಲಬಹುದು.

48 ಸ್ಥಾನಗಳನ್ನು ಹೊಂದಿರುವ ಮೇವಾರ್ ಪ್ರದೇಶದಲ್ಲಿ ಬಿಜೆಪಿ 31 ಸ್ಥಾನಗಳನ್ನು ಗೆಲ್ಲಬಹುದು, ಕಾಂಗ್ರೆಸ್ 16 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಒಂದು ಸ್ಥಾನ ಇತರರಿಗೆ ಹೋಗಬಹುದು. 24 ಸ್ಥಾನಗಳನ್ನು ಹೊಂದಿರುವ ಶೇಖಾವತಿ ಪ್ರದೇಶದಲ್ಲಿ ಬಿಜೆಪಿ 11 ಮತ್ತು ಕಾಂಗ್ರೆಸ್ 13 ಸ್ಥಾನಗಳನ್ನು ಪಡೆಯಬಹುದು ಎಂದು ಸಮೀಕ್ಷೆ ವಿವರ ತಿಳಿಸಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಒಲವು:
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಆಯ್ಕೆಯಾಗಿ ಅಶೋಕ್ ಗೆಹ್ಲೋಟ್ ಹೆಸರು ಮುಂಚೂಣಿಯಲ್ಲಿದೆ. ಶೇಕಡಾ 34 ರಷ್ಟು ಜನರು ಗೆಹ್ಲೋಟ್ ಹುದ್ದೆಯಲ್ಲಿ ಮುಂದುವರಿಯಲಿ ಎಂದು ತಿಳಿಸಿದ್ದಾರೆ. ಗೆಹ್ಲೋಟ್ ಬಿಟ್ಟರೆ ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರನ್ನು ಶೇಕಡಾ 29 ರಷ್ಟು ಜನರು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಬೇಕು ಎಂದು ಬಯಸಿದ್ದಾರೆ.
ಇದರ ಬಳಿಕ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಸಿಎಂ ಆಯ್ಕೆಯಾಗಲಿ ಎಂದು ಶೇ 10 ರಷ್ಟು ಮಂದಿ ಬಯಸಿದ್ದಾರೆ. ಇವರ ನಂತರ ಬಿಜೆಪಿ ನಾಯಕ ಗಜೇಂದ್ರ ಸಿಂಗ್ ಶೇಖಾವತ್ ಶೇಕರ 8 ರಷ್ಟು ಜನರು ಸಿಎಂ ಆಗಲಿ ಬಯಸಿದ್ದಾರೆ. ಬಿಜೆಪಿ ನಾಯಕ ರಾಜ್ಯವರ್ಧನ್ ಸಿಂಗ್ ರಾಥೋಡ್ ಶೇಕಡಾ 7 ರೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ಮತ್ತೊಬ್ಬ ಬಿಜೆಪಿ ನಾಯಕಿ ದಿಯಾ ಕುಮಾರಿ ಕೇವಲ ಶೇಕಡಾ 5 ರೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.
52 ರಷ್ಟು ಮತದಾರರು ವಸುಂಧರಾ ಅವರನ್ನು ಮುಖ್ಯಮಂತ್ರಿಯಾಗಿ ಬಿಂಬಿಸದಿರಲು ಬಿಜೆಪಿಯ ನಿರ್ಧಾರ ಸರಿಯಾಗಿದೆ ಎಂದು ಹೇಳಿದರೆ, ಶೇಕಡಾ 45 ರಷ್ಟು ಜನರು ಅವರು ಆಯ್ಕೆಯಾಗುವುದನ್ನು ಬಯಸಿಲ್ಲ. ಶೇ. 61ರಷ್ಟು ಮತದಾರರು ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದರೆ, ಶೇ.34ರಷ್ಟು ಮಂದಿ ಒಳ್ಳೆಯದು ಎಂದಿದ್ದಾರೆ.
49 ರಷ್ಟು ಮತದಾರರು ಜಾತಿ ಗಣತಿ ನಡೆಸುವ ಕಾಂಗ್ರೆಸ್ ಭರವಸೆ ಚುನಾವಣಾ ಗಿಮಿಕ್ ಎಂದು ಹೇಳಿದರೆ, 41 ರಷ್ಟು ಜನರು ಇದು ಸರಿಯಾದ ನಿರ್ಧಾರ ಎಂದು ಹೇಳಿದ್ದಾರೆ.












Click it and Unblock the Notifications