ರಾಷ್ಟ್ರೀಯ ಪೌರತ್ವ ನೋಂದಣಿ ಎಂದರೇನು?, ವಿವಾದ, ವಿವರ
ಬೆಂಗಳೂರು, ಆಗಸ್ಟ್ 01 : ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಎನ್ಆರ್ಸಿ ಪರಿಷ್ಕೃತ ಕರಡು ಪಟ್ಟಿಯಿಂದಾಗಿ ಅಸ್ಸಾಂ ಜನರ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ಮಾನವ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿವೆ.
2013 ರಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಕೇಂದ್ರ ಸರ್ಕಾರ ಎನ್ಆರ್ಸಿ ಪರಿಷ್ಕರಣೆ ಮಾಡಿದೆ. 1951ರ ಬಳಿಕ ರಾಷ್ಟ್ರೀಯ ಪೌರತ್ವ ನೋಂದಣಿ ಪರಿಷ್ಕರಣೆಯಾಗುತ್ತಿರುವ ಮೊದಲ ರಾಜ್ಯ ಅಸ್ಸಾಂ ಆಗಿದೆ. ಪರಿಷ್ಕರಣೆ ಕರಡು ಪಟ್ಟಿ ಬಿಡುಗಡೆ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ರಕ್ತಪಾತವಾಗುತ್ತದೆ ಎಂದು ಹೇಳಿದ್ದ ಮಮತಾ ಬ್ಯಾನರ್ಜಿ ವಿರುದ್ಧ ದೂರು
1951ರ ಜನಗಣತಿ ಬಳಿಕ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಸಿದ್ಧಪಡಿಸಲಾಯಿತು. ದೇಶದ ಪ್ರತಿ ವ್ಯಕ್ತಿಯ ಹೆಸರು, ವಯಸ್ಸು, ತಂದೆ/ಗಂಡನ ಹೆಸರು, ಮನೆ ಮುಂತಾದ ಮಾಹಿತಿಗಳು ಎನ್ಆರ್ಸಿಯಲ್ಲಿ ಇದೆ. ಮೊದಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇದನ್ನು ಇಡಲಾಗಿತ್ತು, 1960ರ ಬಳಿಕ ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.
ಅಕ್ರಮ ವಲಸಿಗರನ್ನು ಗುಂಡಿಕ್ಕಿ ಕೊಲ್ಲಬೇಕು: ಬಿಜೆಪಿ ಶಾಸಕ
1971ರ ಮಾರ್ಚ್ 24ಕ್ಕಿಂತ ಹಿಂದಿನಿಂದಲೂ ಅಸ್ಸಾಂನಲ್ಲಿ ನೆಲೆಸಿರುವವರು ಮತ್ತು ಅವರ ಮಕ್ಕಳನ್ನು ಮಾತ್ರ ಭಾರತದ ಪೌರರು ಎಂದು ಪರಿಗಣಿಸಲಾಗುತ್ತದೆ. ಎನ್ಆರ್ಸಿ ಎಂದರೇನು? ವಿವರಗಳು ಇಲ್ಲಿವೆ....
ಬಾಂಗ್ಲಾದಿಂದ ಅಸ್ಸಾಂಗೆ ವಲಸೆ
ಬಾಂಗ್ಲಾದೇಶ ಪ್ರತ್ಯೇಕ ರಾಜ್ಯವಾದ ಬಳಿಕ ಅಸ್ಸಾಂಗೆ ಬಾಂಗ್ಲಾದಿಂದ ಹಲವು ವಲಸಿಗರು ಬಂದರು. 1972, ಮಾರ್ಚ್ 19ರಂದು ದ್ವಿಪಕ್ಷೀಯ ಸ್ನೇಹ ವೃದ್ಧಿಗೆ ಭಾರತ-ಬಾಂಗ್ಲಾದೇಶ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ, ವಲಸಿಗರು ಆಗಮಿಸುವುದು ಮುಂದುವರೆಯಿತು.
ಆಗ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಭಾರೀ ಆಂದೋಲನ ಆರಂಭವಾಯಿತು. ಅಸ್ಸಾಂನ ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಈ ಆಂದೋಲನದ ಉದ್ದೇಶವಾಗಿತ್ತು. ಅಸ್ಸಾಂ ಸ್ಟೂಡೆಂಟ್ ಯೂನಿಯನ್ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಈ ಕುರಿತು ಗಮನ ಹರಿಸುವಂತೆ ಮನವಿ ಮಾಡಿತು.
ಕೇಂದ್ರ ಸರ್ಕಾರ ಸಂಸತ್ನಲ್ಲಿ ಡಿಟರ್ಮಿನೇಷನ್ ಬೈ ಟ್ರಿಬ್ಯುನಲ್ ಕಾಯ್ದೆ 1983 ಅನ್ನು ಮಂಡನೆ ಮಾಡಿತು. ಈ ಕಾಯ್ದೆ ಅಸ್ಸಾಂ ರಾಜ್ಯಕ್ಕೆ ಮಾತ್ರ ಅನ್ವಯವಾಗುತ್ತದೆ. ಈ ಕಾಯ್ದೆ ಮೂಲಕ ವಲಸಿಗರನ್ನು ಪತ್ತೆ ಹಚ್ಚಲು ಅನುಕೂಲವಾಗುತ್ತದೆ.
ಕೇಂದ್ರ ಸರ್ಕಾರದ ವಿರುದ್ದ ಹೋರಾಟ
ಅಕ್ರಮ ಬಾಂಗ್ಲಾ ವಲಸಿಗರನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡ ತೀರ್ಮಾನಗಳ ಬಗ್ಗೆ ಅಸಮಾಧಾನ ಎದ್ದಿತು. ಆಲ್ ಅಸ್ಸಾಂ ಸ್ಟುಡೆಂಟ್ ಯೂನಿಯನ್ (ಎಎಎಸ್ಯು), ಆಮ್ ಅಸ್ಸಾಂ ಗಣ ಸಂಗ್ರಾಮ ಪರಿಷತ್ (ಎಎಜಿಎಸ್ಪಿ) ನೇತೃತ್ವದಲ್ಲಿ ಹೋರಾಟಗಳು ಮುಂದುವರೆದವು. 1985, ಆಗಸ್ಟ್ 15ರಂದು ಸಂಘಟನೆಗಳ ಜೊತೆ ಕೇಂದ್ರ, ರಾಜ್ಯ ಸರ್ಕಾರಗಳು ಒಪ್ಪಂದ ಮಾಡಿಕೊಂಡವು.
1951ರ ಜನಗಣತಿ ಮತ್ತು ಮಾರ್ಚ್ 24, 1971ರ ವರಗೆ ದೇಶಕ್ಕೆ ಬಂದ ಜನರು ಅವರು ಮಕ್ಕಳ ಹೆಸರು ಮಾತ್ರ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ)ಯಲ್ಲಿ ಸೇರಿದೆ. 1966 ರಿಂದ 71ರ ತನಕ ಅಸ್ಸಾಂಗೆ ಬಂದ ಹಲವರ ಹೆಸರು ಎಸ್ಆರ್ಸಿ ಸೇರಿರಲಿಲ್ಲ. ಅವರು ತಮ್ಮ ಹೆಸರನ್ನು ಸೇರಿಸಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟರು, ಸುಪ್ರೀಂಕೋರ್ಟ್ ಮೆಟ್ಟಿಲನ್ನು ಏರಿದರು.
ಅಸ್ಸಾಂನಲ್ಲಿ ನೆಲೆ ಕಂಡಿಕೊಂಡಿದ್ದಾರೆ
ಬಾಂಗ್ಲಾದೇಶಿಯರ ಜೊತೆ ಪಶ್ಚಿಮ ಬಂಗಾಳ, ಬಿಹಾರ ಮತ್ತು ಬೇರೆ ರಾಜ್ಯಗಳಿಂದ ಬಂದ ಜನರು ಅಸ್ಸಾಂನಲ್ಲಿ ನೆಲೆ ಕಂಡುಕೊಂಡಿದ್ದಾರೆ. 2005ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎನ್ಆರ್ಸಿ ಪರಿಷ್ಕರಣೆಗೆ ನಿರ್ಧಾರ ಮಾಡಲಾಯಿತು. 2010ರಲ್ಲಿ ಬಾರ್ಪೆಟ ಮತ್ತು ಚಾಯ್ಗಾಂವ್ ಕಂದಾಯ ವಲಯಗಳಲ್ಲಿ ಪ್ರಾಯೋಗಿಕವಾಗಿ ಎನ್ಆರ್ಸಿ ಪರಿಷ್ಕರಣೆ ಆರಂಭಿಸಲಾಯಿತು.
ಆದರೆ, ಇದನ್ನು ವಿರೋಧಿಸಿ ಪ್ರತಿಭಟನೆ, ಹಿಂಸಾಚಾರ ನಡೆಯಿತು. ಬಳಿಕ ಇದನ್ನು ಸ್ಥಗಿತಗೊಳಿಸಲಾಯಿತು. 2013ರಲ್ಲಿ ಸುಪ್ರೀಂಕೋರ್ಟ್ ಎನ್ಆರ್ಸಿ ಪರಿಷ್ಕರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು.
2017ರ ಡಿಸೆಂಬರ್ನಲ್ಲಿ ಮೊದಲ ಕರಡು ಪಟ್ಟಿ ಬಿಡುಗಡೆ ಮಾಡಲಾಯಿತು. ಅದರಲ್ಲಿ 1.9 ಕೋಟಿ ಪೌರರ ಹೆಸರು ಪ್ರಕಟಿಸಲಾಗಿತ್ತು. ಅಂತಿಮ ಕರಡು ಪಟ್ಟಿಯಲ್ಲಿ ಹೆಸರು ಸೇರಿಸಿ ಎಂದು 3.29 ಕೋಟಿ ಜನರು ಅರ್ಜಿ ಹಾಕಿದರು. ಅವರಲ್ಲಿ 2.98 ಕೋಟಿ ಜನರನ್ನು ಸೇರಿಸಲಾಗಿದೆ. 40.07 ಲಕ್ಷ ಜನರನ್ನು ಪಟ್ಟಿಯಿಂದ ಹೊರಗಿಡಲಾಗಿದೆ.
ಎನ್ಆರ್ಸಿಯಲ್ಲಿ ಹೆಸರು ಇಲ್ಲದಿದ್ದರೆ ಏನಾಗುತ್ತದೆ?
ಜುಲೈ 30ರಂದು ಸರ್ಕಾರ ಬಿಡುಗಡೆ ಮಾಡಿರುವ ಎನ್ಆರ್ಸಿ ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅವರನ್ನು ವಿದೇಶಿಯರು ಎಂದು ಘೋಷಣೆ ಮಾಡುವುದಿಲ್ಲ ಎಂದು ಸರ್ಕಾರ ಹೇಳಿದೆ. ಹೆಸರು ಇಲ್ಲದ ವ್ಯಕ್ತಿಗಳಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗುತ್ತದೆ.
ಆಗಸ್ಟ್ 30ರಿಂದ ಸೆಪ್ಟೆಂಬರ್ 28ರ ತನಕ ಹೆಸರು ಸೇರಿಸಲು ಅವಕಾಶವನ್ನು ನೀಡಲಾಗಿದೆ. ಹೆಸರು ಸೇರಿಸಲು, ಹೆಸರು ಇದೆಯೇ ತಿಳಿಯಲು ಉಚಿತ ಸಹಾಯವಾಣಿಯನ್ನು ಆರಂಭಿಸಲಾಗಿದೆ.