2 ಗೂಡ್ಸ್ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ, ಹಳಿ ತಪ್ಪಿದ 12 ಬೋಗಿ
ನವದೆಹಲಿ, ಜೂನ್ 25; ಪಶ್ಚಿಮ ಬಂಗಾಳದ ಓಂಡಾ ರೈಲು ನಿಲ್ದಾಣದಲ್ಲಿ ಎರಡು ಸರಕು ಸಾಗಣೆ ರೈಲುಗಳು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದಿಂದಾಗಿ 12 ಬೋಗಿಗಳು ಹಳಿ ತಪ್ಪಿವೆ. ಬೋಗಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಲೋಕೋ ಪೈಲೆಟ್ ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಬಂಕುರಾದ ಓಂಡಾ ರೈಲು ನಿಲ್ದಾಣದಲ್ಲಿ ಈ ಅಪಘಾತ ನಡೆದಿದೆ. ಈ ಅಪಘಾತದ ಬಳಿಕ ಕಾರಾಗ್ಪುರ್-ಬಂಕುರಾ-ಆದ್ರಾ ನಡುವಿನ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಸರಕು ಸಾಗಣೆ ಮಾಡುತ್ತಿದ್ದ ರೈಲು ಮುಖ್ಯ ಮಾರ್ಗ ಬದಲು ಲೂಪ್ ಲೈನ್ ಪ್ರವೇಶ ಮಾಡಿತು. ಆಗ ಹಳಿಯಲ್ಲಿ ನಿಂತಿದ್ದ ಮತ್ತೊಂದು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಮುಖಾಮುಖಿ ಡಿಕ್ಕಿಯ ಪರಿಣಾಮ ಒಟ್ಟು 12 ಬೋಗಿಗಳು ಹಳಿ ತಪ್ಪಿವೆ. ಅವುಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ.
ಗೂಡ್ಸ್ ರೈಲಿನ ಲೋಕೋ ಪೈಲೆಟ್ಗಳು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಅಧಿಕಾರಿಗಳು ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹಳಿಗಳ ಮೇಲೆ ಬಿದ್ದಿರುವ ಬೋಗಿ ತೆರವುಗೊಳಿಸ ಬಳಿಕ ರೈಲುಗಳ ಸಂಚಾರಕ್ಕೆ ಮಾರ್ಗ ಮುಕ್ತವಾಗಲಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.
ಹಳಿಗಳ ಮೇಲೆ ಬಿದ್ದಿರುವ ಬೋಗಿ ತೆರವುಗೊಳಿಸುವ ಕಾರ್ಯಾಚರಣೆಗಾಗಿಯೇ ಕಾರಾಗ್ಪುರ್-ಬಂಕುರಾ-ಆದ್ರಾ ನಡುವಿನ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಮಧ್ಯಾಹ್ನದ ತನಕ ಈ ಕಾರ್ಯಾಚರಣೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಎಂಜಿನ್ ಸಹ ಹಳಿ ತಪ್ಪಿದೆ. ಬೋಗಿಗಳು ಉರುಳಿ ಬಿದ್ದಿವೆ.
ಗೂಡ್ಸ್ ರೈಲುಗಳ ಡಿಕ್ಕಿ ಕುರಿತು ಆಗ್ನೇಯ ನೈಋತ್ಯ ರೈಲ್ವೆಯ ಸಿಪಿಆರ್ಓ ಆದಿತ್ಯ ಕುಮಾರ್ ಚೌಧರಿ ಪ್ರತಿಕ್ರಿಯೆ ನೀಡಿದ್ದಾರೆ, "ಒಂದು ಗೂಡ್ಸ್ ರೈಲು ಲೂಪ್ ರೈಲು ಮಾರ್ಗದಲ್ಲಿ ನಿಂತಿತ್ತು. ಮತ್ತೊಂದು ರೈಲು ಸಿಗ್ನಲ್ನಲ್ಲಿ ನಿಲ್ಲಬೇಕಿತ್ತು. ಆದರೆ ಅದು ಸಿಗ್ನಲ್ ಜಂಪ್ ಮಾಡಿದೆ. ಇದರಿಂದಾಗಿ ಹಳಿ ತಪ್ಪಿದೆ. ಈಗ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಕ್ತಾಯಗೊಂಡಿದೆ. 7.30 ರಿಂದ 8.30ರ ತನಕ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. 11 ರೈಲುಗಳನ್ನು ರದ್ದುಗೊಳಿಸಲಾಗಿದೆ" ಎಂದು ಮಾಹಿತಿ ನೀಡಿದರು.
"ರೈಲು ಅಪಘಾತಕ್ಕೆ ಸಿಗ್ನಲ್ ಜಂಪ್ ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದೆ. ಈ ಕುರಿತು ತನಿಖೆಗೆ ಆದೇಶ ನೀಡಲಾಗಿದೆ. ತನಿಖೆಯ ಬಳಿಕ ಪೂರ್ಣ ಮಾಹಿತಿ ಲಭ್ಯವಾಗಲಿದೆ" ಎಂದು ನಿಲ್ದಾಣದ ರೈಲ್ವೆ ಸುರಕ್ಷತಾ ಅಧಿಕಾರಿ ದಿಬ್ಕರ್ ಮಹಜಿ ಹೇಳಿದ್ದಾರೆ.
ಈ ತಿಂಗಳ ಮೊದಲ ವಾರದಲ್ಲಿ ಒಡಿಶಾದಲ್ಲಿ ನಡೆದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಅಪಘಾತದ ನೆನಪು ಮಾಸುವ ಮುನ್ನವೇ ಈ ಗೂಡ್ಸ್ ರೈಲುಗಳ ಮುಖಾಮುಖಿ ಡಿಕ್ಕಿ ನಡೆದಿದೆ. ಒಡಿಶಾದಲ್ಲಿ ನಡೆದ ರೈಲು ಅಪಘಾತದಲ್ಲಿ 270ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಕೇಂದ್ರ ಸರ್ಕಾರ ಈ ರೈಲು ಅಪಘಾತವನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ಬೋಗಿಗಳು ಹಳಿ ತಪ್ಪಿದ್ದವು. ಹಳಿ ತಪ್ಪಿ ಮತ್ತೊಂದು ಹಳಿಯ ಮೇಲೆ ಬಿದ್ದ ಬೋಗಿಗೆ ಬೆಂಗಳೂರು-ಹೌರಾ ಎಕ್ಸ್ಪ್ರೆಸ್ ರೈಲು ಡಿಕ್ಕಿಯಾಗಿತ್ತು. ಎರಡು ದಶಕದಲ್ಲೇ ನಡೆದ ಬಹುದೊಡ್ಡ ರೈಲು ಅಪಘಾತದಕ್ಕೆ ಭಾರತ ಈ ತಿಂಗಳು ಸಾಕ್ಷಿಯಾಗಿತ್ತು.
ಮತ್ತೊಂದು ಅಪಘಾತದಲ್ಲಿ ಜೂನ್ 5ರಂದು ಅಸ್ಸಾಂನ ಮಾನವ ರಹಿತ ಸಿಗ್ನಲ್ನಲ್ಲಿ ಗೂಡ್ಸ್ ರೈಲೊಂದು ಟ್ಯಾಂಕರ್ಗೆ ಡಿಕ್ಕಿ ಹೊಡೆದಿತ್ತು. ಆದರೆ ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದ. ಈ ತಿಂಗಳಿನಲ್ಲಿ ದೇಶ ಹಲವು ರೈಲು ಅಪಘಾತಗಳಿಗೆ ಸಾಕ್ಷಿಯಾಗಿದೆ.












Click it and Unblock the Notifications