ಕರ್ನಾಟಕ, ಕೇರಳ, ಒಡಿಶಾ, ಮಹಾರಾಷ್ಟ್ರಕ್ಕೆ ಮತ್ತೆ ಮಳೆ ಭೀತಿ
ಬೆಂಗಳೂರು, ಆಗಸ್ಟ್ 14: ಈಗಾಗಲೇ ಪ್ರವಾಹದಿಂದ ತತ್ತರಿಸಿರುವ ಕರ್ನಾಟಕ, ಕೇರಳ, ಮಹಾರಾಷ್ಟ್ರಕ್ಕೆ ಮತ್ತೆ ಮಳೆ ಭೀತಿ ಎದುರಾಗಿದೆ. ಇನ್ನೂ ಕೆಲವು ದಿನಗಳ ಕಾಲ ಈ ಮೂರೂ ರಾಜ್ಯಗಳಲ್ಲಿ ಮಳೆ ಆಗಲಿದೆಯೆಂದು ಹವಾಮಾನ ಇಲಾಖೆ ಹೇಳಿದೆ.
ರಾಜ್ಯದಲ್ಲಿ ಶಿವಮೊಗ್ಗ, ಬೆಳಗಾವಿ, ಮೈಸೂರು, ಗೋಕಾಕ, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡದ ಕೆಲ ಭಾಗಗಳಲ್ಲಿ ಮಳೆ ಆಗಲಿದೆ. ಬೆಳಗಾವಿಯಲ್ಲಿ ಒಂದು ವಾರದ ಮಟ್ಟಿಗೆ ಸಾಧಾರಣ ಮಳೆ ಆದರೆ, ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಆಗಲಿದೆ.
ಕೇರಳದ ಮೂರು ಜಿಲ್ಲೆಗಳಿಗೆ ಮತ್ತೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಆಲಪುಳ್ಳ, ಎರ್ನಾಕುಲಂ, ಇಡುಕ್ಕಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕೇರಳದ ಕರಾವಳಿಯಲ್ಲಿ ಭಾರಿ ಮಳೆ ಆಗುವ ಮುನ್ಸೂಚನೆ ಇದೆ. ಕೊಲ್ಲಂ, ಪಟ್ಟನಂತಿಟ್ಟ, ಕೊಟ್ಟಾಯಂ, ಪಾಲಕ್ಕಾಡ್, ತ್ರಿಶೂರ್, ಮಲಪ್ಪುರ, ವಯನಾಡ್ನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮಹಾರಾಷ್ಟ್ರ ಸಹ ಪ್ರವಾಹ ಸ್ಥಿತಿಯಿಂದ ತಲ್ಲಣಿಸಿದ್ದು, ಆದರೆ ಮಳೆ ಇನ್ನೂ ಈ ರಾಜ್ಯದ ಬೆನ್ನು ಬಿಟ್ಟಿಲ್ಲ. ಮಹಾರಾಷ್ಟ್ರದ ಪುಣೆ, ಸತಾರ, ಕೊಲ್ಹಾಪುರ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ.

ಒಡಿಶಾ ರಾಜ್ಯದಲ್ಲೂ ಪ್ರವಾಹ ತಲೆದೂರಿದ್ದು, ಅಲ್ಲಿಯೂ ಸಹ ಮಳೆ ಮುಂದುವರೆದಿದೆ. ಒಡಿಶಾದ ಕಂದಮಾಲ್, ಸೋನೆಪುರಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಇಲ್ಲಿ ಇಂದೂ ಸಹ ಮಳೆ ಆಗುವ ಸಾಧ್ಯತೆ ಇದೆ. ರೈಲ್ವೆ, ವಿಮಾನ ಸಂಚಾರ ಈಗಾಗಲೇ ಅಸ್ಥವ್ಯಸ್ತಗೊಂಡಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ.












Click it and Unblock the Notifications