ಬ್ಯಾಂಕ್ ಮೂಲಕ ಕಾರ್ಮಿಕರ ವೇತನ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ
ನವದೆಹಲಿ, ಡಿಸೆಂಬರ್ 29: ವೇತನ ಪಾವತಿ (ತಿದ್ದುಪಡಿ) ಸುಗ್ರೀವಾಜ್ಞೆ-2016ಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಅಂಕಿತ ಬಿದ್ದಿದೆ. ಈ ಮೂಲಕ 18 ಸಾವಿರ ರುಪಾಯಿವರೆಗಿನ ಮೊತ್ತದ ಕಾರ್ಖಾನೆಯ ಕಾರ್ಮಿಕರ ವೇತನವನ್ನು ಚೆಕ್ ಮೂಲಕ ಅಥವಾ ಬ್ಯಾಂಕ್ ಖಾತೆಗೆ ಜಮೆ ಮಾಡಲು ಅವರ ಒಪ್ಪಿಗೆ ಪಡೆಯುವ ಅಗತ್ಯ ಇರುವುದಿಲ್ಲ.
ಡಿಸೆಂಬರ್ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿದ್ದ ಸುಗ್ರೀವಾಜ್ಞೆ ಅನ್ವಯ ಕಾರ್ಖಾನೆ ಮಾಲೀಕರು ಬ್ಯಾಂಕ್ ವ್ಯವಸ್ಥೆ ಮೂಲಕ ವೇತನ ಪಾವತಿಸಲು ಅನುಕೂಲ ಮಾಡಿಕೊಟ್ಟಿತ್ತು.ವೇತನ ಪಾವತಿ ಕಾಯ್ದೆ 1936ರ ಪ್ರಕಾರ ಚೆಕ್ ಮೂಲಕ ಅಥವಾ ಬ್ಯಾಂಕ್ ಗೆ ವೇತನ ಜಮೆ ಮಾಡಬೇಕು ಅಂದರೆ ಕಾರ್ಮಿಕರ ಒಪ್ಪಿಗೆ ಪಡೆಯುವುದು ಅನಿವಾರ್ಯ ಆಗಿತ್ತು.[ವೇತನ ಪಾವತಿಗೆ ಆನ್ ಲೈನ್, ಚೆಕ್: ಕೇಂದ್ರದಿಂದ ಸುಗ್ರೀವಾಜ್ಞೆ]
ಈಗ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ಬಿದ್ದಿರುವುದರಿಂದ ಕೇಂದ್ರ, ರಾಜ್ಯ ಸರಕಾರ ಕೆಲವು ನಿರ್ದಿಷ್ಟ ಕಾರ್ಖಾನೆ ಹಾಗೂ ಸಂಸ್ಥೆಗಳಿಗೆ ವೇತನ ಪಾವತಿಸುವಾಗ ಕಡ್ಡಾಯವಾಗಿ ಬ್ಯಾಂಕ್ ಮೂಲಕವೇ ನೀಡಬೇಕಾಗುತ್ತದೆ. ವೇತನ ಪಾವತಿ ಕಾಯ್ದೆ ಅನ್ವಯ ಎಲ್ಲ ಪಾವತಿಯು ನಗದು ಮೂಲಕ ಮಾಡಬೇಕಿತ್ತು.
ಒಂದು ವೇಳೆ ಚೆಕ್ ಮೂಲಕ ಅಥವಾ ಬ್ಯಾಂಕ್ ಗೆ ಪಾವತಿಸಲು ಕಾರ್ಮಿಕರ ಲಿಖಿತ ಒಪ್ಪಿಗೆ ಪಡೆಯಬೇಕಿತ್ತು. ಈಗ ಸುಗ್ರೀವಾಜ್ಞೆಗೆ ಆರು ತಿಂಗಳ ಕಾಲ ಮಾನ್ಯತೆ ಇರುತ್ತದೆ ಮತ್ತು ಕೇಂದ್ರ ಸರಕಾರವು ಈ ಅವಧಿಯಲ್ಲಿ ಸಂಸತ್ ನಲ್ಲಿ ಮಂಡಿಸಿ, ಒಪ್ಪಿಗೆ ಪಡೆಯಬೇಕು.